ಕರಾವಳಿ

“ಅರ್ಹರಿಗೆ ದೊರೆತಾಗ ಪ್ರಶಸ್ತಿ ಅರ್ಥಪೂರ್ಣ” : ಒಡಿಯೂರುಶ್ರೀ

Pinterest LinkedIn Tumblr

ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ

ಮಂಗಳೂರು: ‘ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಯಕ್ಷಗಾನ ಕಲೆಯ ಕೊಡುಗೆಯಿದೆ. ಭಾಷಾ ಸ್ವಚ್ಛತೆಯಿಂದ ಕೂಡಿದ ಯಕ್ಷಗಾನ ಕಲೆ ತನ್ನ ಮೂಲ ಚೌಕಟ್ಟಿನೊಳಗೆ ಇದ್ದಾಗ ಚಂದ. ರಾಮಾಯಣ ಮಹಾಭಾರತಗಳಂತಹ ಪುರಾಣಗಳು ಯಕ್ಷಗಾನ ಕಲೆಯ ಮೂಲಕ ಹಳ್ಳಿಗಳ ಜನರನ್ನು ಮುಟ್ಟುತ್ತಿದೆ. ಅರ್ಹರಿಗೆ ಪ್ರಶಸ್ತಿ ದೊರೆತಾಗ ಅದು ಅರ್ಥಪೂರ್ಣವಾಗುತ್ತದೆ’ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಬೋಳಾರ ನಾರಾಯಣ ಶೆಟ್ಟಿ ಯಕ್ಷ ಪ್ರತಿಷ್ಠಾನದ ವತಿಯಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಯಕ್ಷಗಾನದ ಮೇರು ಕಲಾವಿದ ದಿ. ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ರಿಗೆ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.

‘ಯಕ್ಷಗಾನ ಲೋಕ ಸುಂದರವಾಗಲು ಪ್ರಸಿದ್ಧ ಕಲಾವಿದ ಕುಂಬ್ಳೆ ಸುಂದರರಾವ್ ಅವರಂತಹ ಕಲಾವಿದರ ಕೊಡುಗೆಯಿದೆ. ಬದುಕಿನ ಲಕ್ಷ್ಯ ಆತ್ಮಸಾಕ್ಷಾತ್ಕಾರ ವಾಗಬೇಕು. ಸಾತ್ವಿಕ ಭಾವವನ್ನು ಬೆಳೆಸಿಕೊಂಡಾಗ ಭಗವಂತ ಹತ್ತಿರವಾಗುತ್ತಾನೆ ‘ಎಂದವರು ಹೇಳಿದರು.

ಬೋಳಾರ ಸಂಸ್ಮರಣೆ:

ದಿ.ಬೋಳಾರರ ಭಾವಚಿತ್ರಕ್ಕೆ ಸಂಸ್ಮರಣಾ ಜ್ಯೋತಿ ಬೆಳಗಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಮರಣಾ ಭಾಷಣ ಮಾಡಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ‘ಯಕ್ಷಗಾನ ರಂಗದಲ್ಲಿ ಅರ್ಧ ಶತಮಾನ ಚರಿತ್ರ ನಟನಾಗಿ ಮೆರೆದ ಬೋಳಾರರ ಕಂಸ,ರಾವಣ,ಹಿರಣ್ಯ ಕಶ್ಯಪ, ಬಾಹುಬಲಿ ಪಾತ್ರಗಳು ಅನ್ಯಾದೃಶ. ಅಭಿನವ ಕೋಟಿ ಎಂದೇ ಹೆಸರಾಗಿದ್ದ ಅವರ ತುಳು ಪ್ರಸಂಗಗಳ ಕೋಟಿ, ದೇವುಪೂಂಜ, ಕೊಡ್ಸರಾಳ್ವ , ದಳವಾಯಿ ದುಗ್ಗಣ ಮುಂತಾದ ಪಾತ್ರಗಳು ವಿಶಿಷ್ಟವಾದ ಬೋಳಾರ ಶೈಲಿಯಿಂದ ಜನಪ್ರಿಯವಾಗಿದ್ದವು’ ಎಂದರು.

ಪರಿಪೂರ್ಣ ಕಲಾವಿದ:

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂಬಳೆ ಸುಂದರರಾವ್ ‘ಯಕ್ಷಗಾನದಲ್ಲಿ ವ್ಯಾಕರಣ ಬದ್ಧತೆ, ಸುಂದರ ಪದ ಪ್ರಯೋಗದಿಂದಲೇ ತನ್ನ ಪಾತ್ರಕ್ಕೆ ಜೀವಂತಿಕೆ ತುಂಬುತ್ತಿದ್ದ ಬೋಳಾರ ನಾರಾಯಣ ಶೆಟ್ಟಿ ಅವರು ಮೇರು ಕಲಾವಿದ ಮಾತ್ರವಾಗಿರದೆ ಹೃದಯವಂತಿಕೆಯ ಪರಿಪೂರ್ಣ ಕಲಾವಿದರಾಗಿದ್ದರು. ಅವರ ಕುಟುಂಬ ವರ್ಗ ಅವರ ಹೆಸರನ್ನು ಕಲಾ ಪ್ರಶಸ್ತಿಯ ಮೂಲಕ ನೆನಪಿಸುವಂತೆ ಮಾಡಿದೆ. ಅವರ ಸಂಸರ್ಗದಲ್ಲಿದ್ದ ತನ್ನನ್ನು ಪ್ರಶಸ್ತಿಯ ಮೂಲಕ ಗೌರವಿಸಿರುವುದು ಸಂತಸ ತಂದಿದೆ ‘ ಎಂದರು.

ಪ್ರಶಸ್ತಿಯೊಂದಿಗೆ ರೂ.20 ಸಾವಿರ ನಗದು, ಫಲಪುಷ್ಪ, ಶಾಲು, ಹಾರ ಮತ್ತು ಸನ್ಮಾನ ಪತ್ರಗಳನ್ನು ಪ್ರತಿಷ್ಠಾನದ ವತಿಯಿಂದ ಅವರಿಗೆ ನೀಡಲಾಯ್ತು.

ಸಮಾರಂಭದಲ್ಲಿ ನಾರಾಯಣ ಶೆಟ್ಟಿ ಅವರ ಪುತ್ರ ಹಾಗೂ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಬೋಳಾರ ಕರುಣಾಕರ ಶೆಟ್ಟಿ, ಪ್ರವಚನಕಾರ ಸೋಂದಾ ಭಾಸ್ಕರ ಭಟ್, ಅಳಪೆ ಕರ್ಮಾರ್ ಸತ್ಸಂಗ ಸಮಿತಿ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ , ನಿವೃತ್ತ ಬ್ಯಾಂಕ್ ಅಧಿಕಾರಿ ಪದ್ಮನಾಭ ಶೆಟ್ಟಿ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಪ್ರಶಸ್ತಿ ಆಯ್ಕೆ ಸಮಿತಿಯ ಪರವಾಗಿ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ವಿಶ್ವಸ್ಥ ಮಂಡಳಿ ಸದಸ್ಯ ಬೋಳಾರ ಗೋಪಾಲ ಶೆಟ್ಟಿ ವಂದಿಸಿದರು.

ಸಮಾರಂಭದ ಬಳಿಕ ಆಯ್ದ ಪ್ರಸಿದ್ಧ ಕಲಾವಿದರಿಂದ ‘ಹನುಮಾವಿರ್ಭಾವ – ಒಡಿಯೂರು ಶ್ರೀ ದತ್ತಾಂಜನೇಯ’ ಯಕ್ಷಗಾನ-ಬಯಲಾಟ ಜರಗಿತು.

Comments are closed.