ಕರಾವಳಿ

ಉಡುಪಿ ನಗರ ಪೊಲೀಸ್ ಠಾಣೆ ಪಿಎಸ್ಐ ಅನಂತಪದ್ಮನಾಭ ಅಮಾನತು: ಶಾಸಕ ರಘುಪತಿ ಭಟ್ ಗರಂ!

Pinterest LinkedIn Tumblr

ಉಡುಪಿ: ಉಡುಪಿ ನಗರಠಾಣೆಯ ಠಾಣಾಧಿಕಾರಿಯಾಗಿದ್ದ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿ ಉಡುಪಿ ಎಸ್ಪಿ‌ ನಿಶಾ ಜೇಮ್ಸ್ ಆದೇಶಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಉಡುಪಿಯ ಭುಜಂಗ ಪಾರ್ಕ್ ನಲ್ಲಿ ಅನ್ಯ ಕೋಮಿನ ಯುವಕ ಯುವತಿಯರು ಮಾತನಾಡುತಿದ್ದಾಗ ಇನ್ನೊಂದು ಗುಂಪು ನಡೆಸಿತ್ತು. ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ‌ದಂತೆ ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಉಡುಪಿ ನಗರ ಠಾಣೆ ಉಪ ನಿರೀಕ್ಷಕ, ಇಬ್ಬರು ಹೆಡ್ ಕಾನ್ಸ್‌ಟೇಬಲ್ ರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಅಮಾನತುಗೊಳಿಸಿದ್ದಾರೆ.

ಶಾಸಕ ಭಟ್ ಗರಂ!
ಇನ್ನು ಪಿಎಸ್ಐ ಅಮಾನತಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಡುಪಿ ಶಾಸಕ ಕೆ. ರಘುಪತಿ ಭಟ್, ಸೋಮವಾರ ರಾತ್ರಿ ಉಡುಪಿ ನಗರಠಾಣೆಯ ಠಾಣಾಧಿಕಾರಿಯನ್ನು ಯಾವುದೇ ಕಾರಣವಿಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿದ್ದು ಉಡುಪಿಯ ಶಾಸಕನಾಗಿ ಇದನ್ನು ನಾನು ಖಂಡಿಸುತ್ತೇನೆ. ಎರಡು ಧರ್ಮಗಳ ನಡುವೆ ಸೌಹಾರ್ದತೆ ಇರಲಿ ಎಂಬ ಉದ್ದೇಶದಿಂದ ಓರ್ವ ಜವಾಬ್ದಾರಿಯುತ ಠಾಣಾಧಿಕಾರಿಯಾಗಿ ಅವರು ಮಾಡಿದ ಕೆಲಸಕ್ಕೆ ಅಮಾನತು ಮಾಡಿರುವುದು ಖಂಡನೀಯ. ಇದರ ಬಗ್ಗೆ ಈಗಾಗಲೇ ನಾನು ಗೃಹಮಂತ್ರಿ ಮತ್ತು ಪಶ್ಚಿಮ ವಲಯ ಐಜಿಪಿಯವರಿಗೆ ಕೂಡ ಮಾಹಿತಿ ನೀಡಿದ್ದೇನೆ. ಕೂಡಲೇ ಅವರ ಅಮಾನತು ಆದೇಶವನ್ನು ವಾಪಾಸು ಪಡೆದು ಉಡುಪಿಯಲ್ಲೇ ಅವರಿಗೆ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Comments are closed.