ಕರಾವಳಿ

ಮನಪಾ ಚುನಾವಣೆ : ಸ್ವಚ್ಛ, ಸುಂದರ, ಸುವ್ಯವಸ್ಥಿತ ನಮ್ಮ ಕುಡ್ಲ’ ಸಂಕಲ್ಪದೊಂದಿಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ನ.12ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ, ಶಾಸಕ ಸಂಜೀವ್ ಮಠಂದೂರು ಅವರು ಬುಧವಾರ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಚ್ಛ, ಸುಂದರ, ಸುವ್ಯವಸ್ಥಿತ ನಮ್ಮ ಕುಡ್ಲ’ ಎಂಬ ಸಂಕಲ್ಪದೊಂದಿಗೆ ಪಕ್ಷದ ಪ್ರಣಾಳಿಕೆಯನ್ನು ಸಿದ್ದಗೊಳಿಸಲಾಗಿದೆ. ಮಂಗಳೂರು ನಗರವು ರಾಜ್ಯದಲ್ಲೇ ರಸ್ತೆ, ರೈಲು, ವಾಯು, ಜಲ ಸಂಪರ್ಕ ಹೊಂದಿರುವ ಏಕೈಕ ನಗರವಾಗಿದೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ವಾಣಿಜ್ಯ, ಮೀನುಗಾರಿಕೆ, ಪ್ರವಾಸೋದ್ಯಮ ಇಲ್ಲಿನ ವೈಶಿಷ್ಟ. ಕರಾವಳಿಯ ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಆಚರಣೆಗಳು ನಡೆಯುವ ಮೂಲಕ ವೈವಿಧ್ಯತೆಯಲ್ಲಿ ಏಕತೆ ಎನ್ನುವ ಭಾರತೀಯ ಸಂಸ್ಕೃತಿಯ ಅನುಕರಣೆಯ ಪ್ರತಿಬಿಂಬವಾಗಿದೆ ಎಂದರು.

ನಗರದ ಎಲ್ಲ ಬಸ್ ನಿಲ್ದಾಣಗಳಲ್ಲಿ ಬಸ್ಸಿನ ವೇಳಾಪಟ್ಟಿ ಹಾಗೂ ಇತರ ಮಾಹಿತಿ ಒದಗಿಸಲು ಅನುಕೂಲವಾಗುವಂತೆ ಎಲ್‌ಸಿಡಿ ಪರದೆಗಳನ್ನು ಅಳವಡಿಸಲಿದ್ದೇವೆ. ವಾಹನ ದಟ್ಟಣೆ ಕಡಿಮೆಗೊಳಿಸಲು ನಗರದ ಹೊರವಲಯದಲ್ಲಿ ಸೆಟಲೈಟ್ ಬಸ್ ನಿಲ್ದಾಣಗಳ ಸ್ಥಾಪನೆ ಮಾಡಲಾಗುವುದು. ಎಲ್ಲ ಸೌಲಭ್ಯಗಳುಳ್ಳ ಯೋಜನಾ ಬದ್ಧ ಸೆಟಲೈಟ್ ಟೌನ್‌ಶಿಪ್‌ಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು.

ಮಂಗಳೂರು ನಗರದಲ್ಲಿ ಉತ್ಪಾದನೆಯಾಗುತ್ತಿರುವ ಕಟ್ಟಡ ನಿರ್ಮಾಣದ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಒಣಕಸ ಮತ್ತು ಹಸಿಕಸ ವಿಂಗಡಣೆ ಹಾಗೂ ಸಂಸ್ಕರಣೆಗಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಪರಿಣಾಮಕಾರಿ ವ್ಯವಸ್ಥೆಯ ಅನುಷ್ಠಾನದ ಮೂಲಕ ಪಚ್ಚನಾಡಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ದರ್ಜೆಗೆ ಏರಿಸಲು ಪ್ರಯತ್ನಿಸಲಾಗುವುದು.

ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ರೈಲು ನಿಲ್ದಾಣ, ಇನ್ನಿತರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುವುದು. 24×7 ಅವಧಿಯಲ್ಲೂ ಗುಣಮಟ್ಟದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಬೇರೆ ಬೇರೆ ವಯಸ್ಸಿನ ನಾಗರಿಕರ ಅಗತ್ಯಗಳಿಗೆ ಅನುಗುಣವಾಗಿ ಆಟದ ಮೈದಾನ, ಗ್ರಂಥಾಲಯ, ಉದ್ಯಾನ, ಪಾದಚಾರಿ ಮಾರ್ಗ, ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ಅಂತಾರಾಷ್ಟ್ರೀಯ ಕ್ರೀಡಾಂಗಣ ರಚನೆ ಉದ್ದೇಶ ಹೊಂದಲಾಗಿದೆ.

ಪಾಲಿಕೆ ವ್ಯಾಪ್ತಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗುವುದು. ಇ-ಗವರ್ನೆನ್ಸ್‌ಗೆ ಆದ್ಯತೆ ನೀಡಿ ಏಕಗವಾಕ್ಷಿ ಯೋಜನೆ, ಪೇಪರ್‌ಲೆಸ್ ಕಚೇರಿ, ನಾಗರಿಕರಿಗೆ ಆನ್‌ಲೈನ್ ಪೇಮೆಂಟ್ ಗೇಟ್‌ವೇ ಮತ್ತಿತರ ಪೂರಕ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಾಪರ್ಟಿ ಕಾರ್ಡ್ ವಿತರಣೆಯಲ್ಲಿನ ಗೊಂದಲ ನಿವಾರಣೆ ಮಾಡಲಾಗುವುದು. ಸ್ಮಾರ್ಟ್‌ಸಿಟಿ ಯೋಜನಾ ವೆಚ್ಚಗಳ ಕುರಿತು ತಜ್ಞರ ಸಮಿತಿ ರಚಿಸಲಾಗುವುದು.

ನನೆಗುದಿಗೆ ಬಿದ್ದಿರುವ ರಂಗಮಂದಿರದ ಕಾಮಗಾರಿಯ ಶೀಘ್ರ ಅನುಷ್ಠಾನ. ಎಸ್ಸಿ-ಎಸ್ಟಿ ವಸತಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ. ನಗರದಲ್ಲಿರುವ ತೆರೆದ ಬಾವಿಗಳ ದುರಸ್ತಿ ಮತ್ತು ನಿರ್ವಹಣೆ. ಪಾಲಿಕೆಯ ಆಡಳಿತವನ್ನು ಮಕ್ಕಳ ಸ್ನೇಹಿಯಾಗಿ ಪರಿವರ್ತಿಸಿ ಭಿಕ್ಷಟನೆ, ಮಾದಕದ್ರವ್ಯ ಮಾರಾಟ, ಮಕ್ಕಳ ಶೋಷಣೆಯ ವಿರುದ್ಧ ಲಭ್ಯವಿರುವ ಎಲ್ಲ ಕಾನೂನುಗಳ ಕಡ್ಡಾಯ ಅನುಷ್ಠಾನ ಮಾಡಲಾಗುವುದು ಎಂದು ಶಾಸಕ ಸಂಜೀವ್ ಮಠಂದೂರು ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಾಜಿ ಶಾಸಕ ಯೋಗಿಶ್ ಭಟ್, ವಿಧಾನಪರಿಷತ್‌ನ ಮಾಜಿ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಪ್ರಮುಖರಾದ ರವಿಶಂಕರ್ ಮಿಜಾರ್, ಸಂಜಯ್ ಪ್ರಭು, ಜಿತೇಂದ್ರ ಕೊಟ್ಟಾರಿ, ಪೂಜಾ ಪೈ, ಪ್ರಭಾ ಮಾಲಿನಿ, ಮತ್ತಿತರರು ಉಪಸ್ಥಿತರಿದ್ದರು.

Comments are closed.