ಕರಾವಳಿ

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ – 2019” ಶ್ರೀ ರಾಮಚಂದ್ರ ಹೆಗ್ಡೆಯವರ ಮಡಿಲಿಗೆ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಸಂಘ ಶಾರ್ಜಾದ‌ ಆಶ್ರಯದಲ್ಲಿ ಶಾರ್ಜದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ಸಂಘ ಶಾರ್ಜಾದ 17ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.2019 ನವೆಂಬರ್ 15ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿಂದ ಶಾರ್ಜಾ‌ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ‌ ಅಯೋಜಿಸಲಾಗಿದೆ.

ಅಹ್ವಾನಿತ ಅತಿಥಿಗಳು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಕರ್ನಾಟಕ ಸಂಘ ಶಾಜಾ ಪ್ರತಿವರ್ಷ‌ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವಕನ್ನಡಿಗರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಮಯೂರ ಪ್ರಶಸ್ತಿ” ಈ ಬಾರಿ ದುಬಾಯಿಯಲ್ಲಿರುವ ಸ್ಪ್ರೇಟೆಕ್‌ಕೋಟಿಂಗ್ ಎಲ್.ಎಲ್.ಸಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ರಾಮಚಂದ್ರ ಹೆಗ್ಡೆಯವರಿಗೆ ರಾಜ್ಯೋತ್ಸವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನಿಸಲಾಗುವುದು.

ಶ್ರೀ ರಾಮಚಂದ್ರ ಹೆಗ್ಡೆಯವರ ಸಾಧನೆಯ ಹಾದಿ….

ಕರ್ನಾಟಕದ ಕಡಲ ತೀರದ ನಾಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಚ್ಚೆ ಪೈರು, ಹೊಲ ಗದ್ದೆಗಳು, ಗಗನವನ್ನು ಚುಂಬಿಸುತ್ತಿರುವ ತೆಂಗು ಕಂಗು ವೃಕ್ಷರಾಶಿಯ ನಿಸರ್ಗದ ಮಡಿಲಿನ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶ್ರೀ ಅಚ್ಚ್ಯುತ ಹೆಗ್ಡೆ ಮತ್ತು ಶ್ರೀಮತಿ ಗೀತಾ ಹೆಗ್ಡೆಯವರ ಮಗನಾಗಿ 1958 ರಲ್ಲಿ ಜನಿಸಿರುವ ಶ್ರೀ ರಾಮಚಂದ್ರ ಹೆಗ್ಡೆ ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದಿದ್ದಾರೆ.

ತಮ್ಮ ವೃತ್ತಿ ಜೀವನವನ್ನು ಮುಂಬೈಯಲ್ಲಿ ಪ್ರಾರಂಭಿಸಿ 1983 ರಲ್ಲಿ ದುಬಾಯಿಗೆ ಪಾದಾರ್ಪಣೆ ಮಾಡಿ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ‌ ಉದ್ಯೋಗದಲ್ಲಿ‌ ಅಪಾರ‌ ಅನುಭವವನ್ನು ಪಡೆದು ತಮ್ಮದೇ‌ ಆದ ಸ್ವಂತ‌ ಉದ್ಯಮ ಪ್ರಾರಂಭಿಸುವ ತನ್ನ ಬಹು ದಿನದ ಕನಸು ನನಸಾಗಿಸಿ ಕೊಂಡರು.

ದುಬಾಯಿಯಲ್ಲಿ ಪಾರಂಭಿಸಿದ ಸ್ಪ್ರೇಟೆಕ್‌ಕಾಂಟ್ರೆಕ್ಟಿಂಗ್ ಎಲ್.ಎಲ್.ಸಿ. ಮತ್ತು ಸ್ಪ್ರೇಟೆಕ್‌ಕೋಟಿಂಗ್ ಎಲ್.ಎಲ್.ಸಿ. ಉಧ್ಯಮ ಸಂಸ್ಥೆಗೆ ನವ್ಯ ತಂತ್ರಜ್ಞಾನದ ಸ್ಪರ್ಶ ನೀಡಿದ ಫಲವಾಗಿ ಅಭಿವೃದ್ಧಿಯ ಪಥದೆಡೆಗೆ ಸಾಗಿಸುವಲ್ಲಿ ಯಶಸ್ಸು ಕಂಡರು.

ಸುಮಾರು‌ ಐನೂರರಿಂದ‌ ಆರುನೂರು ಮಂದಿಗೆ ಉದ್ಯೋಗ ನೀಡಿ‌ ಅನ್ನದಾತರಾಗಿರುವ ರಾಮಚಂದ್ರ ಹೆಗ್ಡೆಯವರು ಸಾವಿರಾರು ಮಂದಿಗೆ ಆಶ್ರಯದಾತರಾಗಿದ್ದಾರೆ.

1992ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಶ್ರೀಮತಿ ಕಲ್ಪನಾರವರನ್ನುತಮ್ಮ ಬಾಳಾ ಸಂಗಾತಿಯನ್ನಾಗಿಸಿ ಕೊಂಡರು. ಇಬ್ಬರು ಪುತ್ರಿಯರು ಕು. ರಚನಾ ಮತ್ತು ಕು. ಐಶ್ವರ್ಯರೊಂದಿಗೆ ಸುಖೀ ಸಂಸಾರಿಯಾಗಿದ್ದಾರೆ.

ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ರಾಮಚಂದ್ರ ಹೆಗ್ಡೆಯವರು‌ ಅರಬ್ ಸಂಯುಕ್ತ  ಸಂಸ್ಥಾನದಲ್ಲಿ ನೆಲೆಸಿರುವ ಗೌಡ ಸಾರಸತ್ವ ಸಮಾಜದ ಬಂಧುಗಳ ಸಂಘಟನೆ ಅಮ್ಚಿಗೆಲೆ ಸಮಾಜದ‌ ಅಧ್ಯಕ್ಷರಾಗಿ ಜವಬ್ಧಾರಿ ವಹಿಸಿಕೊಂಡು ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಪವಿತ್ರವಾದ ರಕ್ತದಾನ ಶಿಬಿರವನ್ನು ಆಯೋಜಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.

ಅಮ್ಚಿಗೆಲೆ ಸಮಾಜದ ಮಕ್ಕಳಿಂದ ಹಿಡಿದು ವಿವಿಧ ವಯೋಮಿತಿಯವರ ಪ್ರತಿಭೆಗಳಿಗೆ ವಾರ್ಷಿಕ ಮಿಲನದ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಕೊಡುವುದರ ಮೂಲಕ ಆವರ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ವಿಹಾರಕೂಟ, ಪೂಜಾ ಕಾರ್ಯಗಳಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಮಕ್ಕಳ ಪೋಷಕರ ಮೂಲಕ ಸಂಸ್ಕೃತಿ, ಸಂಪ್ರದಾಯ, ಅಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಸೇತುವೆಯಾಗಿ ಮುಟ್ಟಿಸುವಲ್ಲಿ ರಾಮಚಂದ್ರ ಹೆಗ್ಡೆಯವರ ಪಾತ್ರ ಹಿರಿದಾಗಿದೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ವಿವಿಧ ಸಾಂಸ್ಕೃತಿಕ ವೇದಿಕೆಗಳಲ್ಲಿ ನಡೆಯುವ ವಾರ್ಷಿಕ ಮಿಲನ, ನಾಟಕ, ಯಕ್ಷಗಾನ, ಸಂಗೀತ ರಸಮಂಜರಿ, ವಿಹಾರಕೂಟ, ಕ್ರೀಡಾಕೂಟ, ಸಾಹಿತ್ಯ ಸಮ್ಮೇಳನಗಳಿಗೆ ರಾಮಚಂದ್ರ ಹೆಗ್ಡೆಯವರು ಸದಾ ಬೆಂಬಲ, ಪ್ರೊತ್ಸಾಹ, ಸಹಾಯ ಹಸ್ತ, ಪ್ರಾಯೊಜಕತ್ವ ನೀಡುತ್ತಾ ಬಂದಿದ್ದಾರೆ.ಯು.ಎ.ಇ.ಯಲ್ಲಿಕರ್ನಾಟಕ ಪರ ಭಾಷೆ, ಸಂಸ್ಕೃತಿ ಸದಾ ಹಸಿರಾಗಿರಿಸಿ ಪೋಷಿಸುತ್ತಾ ಬಂದಿದ್ದಾರೆ.

ತಮ್ಮಜನ್ಮಭೂಮಿಯಲ್ಲಿ ನೆಲೆಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ, ಬಡಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಸಹಾಯ ಹಸ್ತನೀಡುತ್ತಾ ಬಂದಿರುವರಾಮಚಂದ್ರ ಹೆಗ್ಡೆಯವರ ಮೂರು ನಾಲ್ಕು ದಶಕಗಳ ನಿರಂತರ ಸಮಾಜಸೇವೆ ಹಾಗೂ ತಾಯಿನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಪೋಷಿಸುತ್ತಾ ಬಂದಿ‌ಇದ್ದಾರೆ.

ಕರ್ನಾಟಕ ಸಂಘ ಶಾರ್ಜಾ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಶುಭ ಸಮಾರಂಭದಲ್ಲಿ ನೀಡಲಾಗುತಿರುವ ಪ್ರತಿಷ್ಠಿತ 2019 ನೇ ಸಾಲಿನ “ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ”ಯನ್ನು ಶ್ರೀ ರಾಮಚಂದ್ರ ಹೆಗ್ಗಡೆಯವರ ಸಾಧನೆಯ ಹಾದಿಯನ್ನು ಗುರುತಿಸಿ ಪ್ರದಾನಿಸಲಾಗುವುದು.

ಯು.ಎ.ಇ.ಯಲ್ಲಿರುವ‌ ಎಲ್ಲಾ ಕರ್ನಾಟಕಪರ ಸಂಘಟನೆಗಳ ಜೊತೆಗೆ‌ ಅತ್ಯುತ್ತಮ ಭಾಂಧವ್ಯ ಹೊಂದಿರುವ ಹಾಗು ಎಲ್ಲಾ ಕರ್ನಾಟಕ ದವರ ಪ್ರೀತಿಪಾತ್ರರಾಗಿರುವ ಶ್ರೀ ರಾಮಚಂದ್ರ ಹೆಗ್ಗಡೆಯವರಿಗೆ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು.

Comments are closed.