ಕರಾವಳಿ

ಫ್ರಾನ್ಸಿಸ್ ಲೂವಿಸ್‌ರ ನಿವೃತ್ತಿಯೊಂದಿಗೆ ದ.ಕ. ಜಿಲ್ಲೆಯಲ್ಲಿ ಸರಕಾರಿ ಚಿತ್ರಪ್ರದರ್ಶನ-ಸಿನಿಚಾಲಕ ಹುದ್ದೆಗೆ ತೆರೆ

Pinterest LinkedIn Tumblr

ಸಿನಿಚಾಲಕ ಫ್ರಾನ್ಸಿಸ್ ಲೂವಿಸ್

ಮಂಗಳೂರು, ನವೆಂಬರ್.01 : ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಲು ರಾಜ್ಯ ಸರಕಾರದ ವಿವಿಧ ಸಾಕ್ಷ್ಯಚಿತ್ರಗಳು, ಛಾಯಾ ಚಿತ್ರಗಳನ್ನು ಪ್ರದರ್ಶಿಸಲು ರಾಜ್ಯ ಸರಕಾರಿ ಸೇವೆಯಲ್ಲಿ ಇದ್ದ ಸಿನಿ ಚಾಲಕ ಎಂಬ ಹುದ್ದೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಇರುವುದಿಲ್ಲ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಂಗಳೂರು ಕಚೇರಿಯಲ್ಲಿ ಅಸ್ತಿತ್ವದಲ್ಲಿದ್ದ ಈ ಸಿನಿಚಾಲಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫ್ರಾನ್ಸಿಸ್ ಲೂವಿಸ್ ಅವರು ಅಕ್ಟೋಬರ್ 31ರಂದು ಸರಕಾರಿ ಸೇವೆಯಿಂದ ನಿವೃತ್ತರಾಗುವುದರೊಂದಿಗೆ ಈ ಹುದ್ದೆಯು ಇನ್ನು ಮುಂದೆ ಜಿಲ್ಲೆಯಲ್ಲಿ ಇರುವುದಿಲ್ಲ. ಏಕೆಂದರೆ, ರಾಜ್ಯ ಸರಕಾರದ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನನ್ವಯ ಈ ಸಿನಿಚಾಲಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ನಿವೃತ್ತರಾಗುವುದರೊಂದಿಗೆ ಹುದ್ದೆಯು ತನ್ನಿಂತಾನೇ ಅಸ್ತಿತ್ವ ಕಳೆದುಕೊಳ್ಳಲಿದೆ.

ಈ ಹಿಂದೆ ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿಯೂ ವಾರ್ತಾ ಇಲಾಖೆಯ ಅಧೀನದಲ್ಲಿ ಸಿನಿಚಾಲಕ ಹುದ್ದೆ ಇತ್ತು. ಸಾರ್ವಜನಿಕರಲ್ಲಿ ವಿವಿಧ ಜಾಗೃತಿ ಮೂಡಿಸಲು, ಸರಕಾರದ ವಿವಿಧ ಯೋಜನೆಗಳ ಮಾಹಿತಿ, ಅರಿವು ಮೂಡಿಸಲು ಜನವಸತಿ ಪ್ರದೇಶಗಳಲ್ಲಿ ರಾಜ್ಯ ಸರಕಾರದಿಂದ ಒದಗಿಸಿದ ಆರೋಗ್ಯ, ಶಿಕ್ಷಣ, ಸ್ವಚ್ಛತೆ, ಸಾಮರಸ್ಯಗಳ, ವಿವಿಧ ಸಾಧಕ ಮಹನೀಯರ ಜೀವನ ಚರಿತ್ರೆಯ ಚಿತ್ರಗಳನ್ನು ಶಾಲಾ ಕಾಲೇಜುಗಳಲ್ಲಿ ಧ್ವನಿವರ್ಧಕ, ರೇಡಿಯೋದಲ್ಲಿ ಸಂದೇಶ ಹರಡುವುದು, ಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ, ಛಾಯಾ ಚಿತ್ರ ಪ್ರದರ್ಶನ ಇವರ ಕರ್ತವ್ಯವಾಗಿತ್ತು.

ಫ್ರಾನ್ಸಿಸ್ ಲೂವಿಸ್ ಅವರು ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಗ್ರಾಮಾಂತರ ರೇಡಿಯೋ ಶಾಖೆಯಲ್ಲಿ ಹಾಸನದ ಸಹಾಯಕ ರೇಡಿಯೋ ಇಂಜಿನಿಯರ್ ಕಚೇರಿಯಲ್ಲಿ 1979 ರಲ್ಲಿ ಬ್ಯಾಟರಿ ಸಹಾಯಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿದ್ದರು. ಆಗಿನ ಕಾಲದಲ್ಲಿ ಸಾಮೂಹಿಕ ರೇಡಿಯೋಗಳನ್ನು ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಸ್ಥಾಪಿಸಿ ಸ್ಥಳೀಯ ಗ್ರಾಮದ ಜನರಿಗೆ ಸುದ್ದಿ , ವಾರ್ತಾ ಪ್ರಸಾರವನ್ನು ತಲುಪಿಸುವ ಸರ್ಕಾರದ ಯೋಜನೆ ಇದಾಗಿತ್ತು. ಇದರೊಂದಿಗೆ ಹಳ್ಳಿಗಳಲ್ಲಿ ಕಿರು ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತು.

ಗ್ರಾಮದ ಕೇಂದ್ರಸ್ಥಾನದಲ್ಲಿ ರೇಡಿಯೋ ಕಟ್ಟೆಯನ್ನು ನಿರ್ಮಿಸಿ ಅದರ ಸುತ್ತ ಗ್ರಾಮಸ್ಥರು ಕುಳಿತು ವಾರ್ತಾ ಪ್ರಸಾರ ಹಾಗೂ ಚಿತ್ರಗೀತೆಗಳನ್ನು ಕೇಳುತ್ತಿದ್ದರು. ರೇಡಿಯೋ ಕೆಟ್ಟು ಹೋದ ಸಂಧರ್ಭದಲ್ಲಿ ಇಲಾಖೆಯ ವತಿಯಿಂದಲೇ ಸ್ಥಳದಲ್ಲಿಯೇ ದುರಸ್ಥಿ ಪಡಿಸಿ ಕೊಡುವ ಕೆಲಸ ಇವರದ್ದಾಗಿತ್ತು. ಅಥವಾ ರೇಡಿಯೋವನ್ನು ಬದಲಾಯಿಸಿ ಕೊಡಲಾಗುತ್ತಿತ್ತು. ಕೆಲವೊಮ್ಮೆ ಗ್ರಾಮಸ್ಥರು ರೇಡಿಯೋ ಕೇಳದಿದ್ದರೆ ಏನೋ ಕಳೆದು ಕೊಂಡಂತೆ ಸಿನಿಚಾಲಕರನ್ನು ಅಪರಾಧಿಯಂತೆ ಕಾಣುತ್ತಿದ್ದರು. ಆಗಿನ ಕಾಲದಲ್ಲಿ ಸಂಚಾರಿ ಬಸ್ಸುಗಳ ವ್ಯವಸ್ಥೆ ಕಡಿಮೆ ಇದ್ದ ಕಾರಣ, ಬಾಡಿಗೆ ಸೈಕಲ್‍ಗಳನ್ನು ಪಡೆದು ಅದರ ಮೂಲಕ ರೇಡಿಯೋಗಳನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಬೇಕಾಗಿತ್ತು.

ನಚಿತರ 1982 ರಲ್ಲಿ ಮಂಗಳೂರಿನ ರೇಡಿಯೋ ಸುಪರ್ ವೈಸರ್ ಕಚೇರಿಗೆ ವರ್ಗಾವಣೆಗೊಂಡ ಫ್ರಾನ್ಸಿಸ್ ಲೂವಿಸ್ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಬಂಟ್ವಾಳ,ಪುತ್ತೂರು, ಬೆಳ್ತಂಗಡಿ, ಸುಳ್ಯ, ಉಡುಪಿ, ಕುಂದಾಪುರ, ಕಾರ್ಕಳದಲ್ಲಿಯೂ ಇಲಾಖೆಯ ಸಾಮೂಹಿಕ ರೇಡಿಯೋ ಕಾರ್ಯಕ್ರಮವನ್ನು ನಡೆಸಿದ್ದರು. ಆ ನಂತರ ಸರ್ಕಾರವು ಪ್ರವಾಸೋದ್ಯಮ ಇಲಾಖೆಯನ್ನು ಬೇರ್ಪಡಿಸಿ ವಾರ್ತಾ ಮತ್ತು ಪ್ರಚಾರ ಇಲಾಖೆ ಎಂದು ನಾಮಕರಣ ಮಾಡಿತು. ಇಲಾಖೆಯ ಗ್ರಾಮಾಂತರ ರೇಡಿಯೋ ಶಾಖೆಯನ್ನು 1987 ರಲ್ಲಿ ಸರ್ಕಾರ ರದ್ದುಗೊಳಿಸಿ, ಸಾಮೂಹಿಕ ದೂರದರ್ಶನಗಳನ್ನು ಪ್ರತಿ ಗ್ರಾಮದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಸ್ಥಾಪಿಸುವ ಯೋಜನೆಯನ್ನು ಕೈಗೊಳ್ಳಲಾಯಿತು.

1988 ರ ನಂತರ ಸರ್ಕಾರದ ಸೂಚನೆ ಮೇರೆಗೆ ಇಲಾಖೆ ದೂರದರ್ಶನ ಶಾಖೆಯನ್ನು ರದ್ದುಗೊಳಿಸಿ, ಈ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ವಾರ್ತಾ ಇಲಾಖೆಯ ಕ್ಷೇತ್ರಪ್ರಚಾರ ಶಾಖೆಗೆ ವಿಲೀನಗೊಳಿಸಿ, ಸಿನಿಚಾಲಕರಾಗಿ ಭಡ್ತಿ ನೀಡಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಆ ನಂತರ ಫ್ರಾನ್ಸಿಸ್ ಲೂವಿಸ್ ಇವರನ್ನು ಬಳ್ಳಾರಿ ಜಿಲ್ಲೆಗೆ ವರ್ಗಾಯಿಸಲಾಯಿತು. ಬಳ್ಳಾರಿ ಜಿಲ್ಲೆಯಲ್ಲಿ 1988 ರಿಂದ ಸುಮಾರು 8 ವರ್ಷಗಳ ಸೇವೆ ಸಲ್ಲಿಸಿ, 1996 ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿ ಅಲ್ಲಿಂದ 1998ರಲ್ಲಿ ದ.ಕ. ಜಿಲ್ಲಾ ವಾರ್ತಾ ಕಚೇರಿಗೆ ಮತ್ತೆ ವರ್ಗಾವಣೆಗೊಂಡರು.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮಗಳಲ್ಲಿ ಸರ್ಕಾರದ ಅಬಿವೃದ್ದಿ ಕಾರ್ಯಕ್ರಮಗಳನ್ನು ಸಾಕ್ಷ್ಯಚಿತ್ರ ಪ್ರದರ್ಶನ, ಸಂಗೀತ ಹಾಗೂ ಬೀದಿನಾಟಕ ಗಳ ಮುಖಾಂತರ ಇವರು ಪ್ರಚಾರ ಮಾಡಿರುತ್ತಾರೆ. 1979 ರಲ್ಲಿ ವಾರ್ತಾ ಇಲಾಖೆಯು ಕ್ಷೇತ್ರಪ್ರಚಾರದಲ್ಲಿ ಸಿನಿಯಂತ್ರವನ್ನು ಒದಗಿಸಿದ್ದು, 16 ಎಂ.ಎಂ. ರೀಲುಗಳನ್ನು ಬಳಸಿ ಸಾಕ್ಷ್ಯಚಿತ್ರ ಪ್ರದಶಿಸಲಾಗುತ್ತಿತ್ತು. ತದನಂತರ ವೀಡಿಯೋ ಕ್ಯಾಸೆಟ್ ಮೂಲಕ ಸಾಕ್ಷ್ಯಚಿತ್ರ ಬಳಸಲಾಗಿ, ಇತ್ತೀಚಿನ ದಿನಗಳಲ್ಲಿ ಸಿ ಡಿ ಮೂಲಕ ಕ್ಷೇತ್ರಪ್ರಚಾರ ಕಾರ್ಯಕ್ರಮಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಯಶಸ್ವಿ ಪ್ರದರ್ಶನ ನೀಡಲಾಗುತ್ತಿದೆ.

ಇದೀಗ ಕರ್ನಾಟಕ ವಿದ್ಯುಚಕ್ತಿ ಮಂಡಳಿ ಹಾಗೂ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್,ಬೆಂಗಳೂರು ಇವರ ಆಶ್ರಯದಲ್ಲಿ ನಡೆಯುತ್ತಿದ್ದ ಸಿನೆಮಾ ಅಪರೇಟಿಂಗ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸರ್ಕಾರ ರದ್ದುಪಡಿಸಿದ್ದು, ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳು ಸಿಗದಿದ್ದ ಕಾರಣ ಜಿಲ್ಲಾ ವಾರ್ತಾ ಕಚೇರಿಗಳಲ್ಲಿ ಸಿನಿಚಾಲಕರ ಹುದ್ದೆಗಳು ರದ್ದಾಗುತ್ತಿವೆ. ಈ ಹುದ್ದೆಗಳಲ್ಲಿರುವ ನೌಕರರು ವಯೋ ನಿವೃತ್ತಿ ಹೊಂದಿದ ನಂತರ ನೇಮಕ ಮಾಡಲಾಗುತ್ತಿಲ್ಲ. ರಾಜ್ಯದ ಕೇವಲ 5 – 6 ಜಿಲ್ಲೆಗಳಲ್ಲಿ ಮಾತ್ರ ಹಾಲಿ ಸಿನಿಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಫ್ರಾನ್ಸಿಸ್ ಲೂವಿಸ್ ಇವರು 1979ರಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡಿದ್ದು, 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಅಕ್ಟೋಬರ್ 31 ರಂದು ವಯೋ ನಿವೃತ್ತಿ ಹೊಂದಿದರು.

Comments are closed.