ಕುಂದಾಪುರ: ಕಳೆದ ಮೂರು ದಿನಗಳ ಹಿಂದೆಯಷ್ಟೆ ವರ್ಗಾವಣೆಯಾದ ಬಳಿಕವೂ ಭೂವ್ಯಾಜ್ಯ ಸಂಬಂಧಿತ ಕಡತ ವಿಲೇವಾರಿಗಾಗಿ ಲಕ್ಷಾಂತರ ರೂಪಾಯಿ ಡೀಲ್ ಮಾಡ್ತಿದ್ದ ಕುಂದಾಪುರ ಈ ಹಿಂದಿನ ಎಸಿ ಮಧುಕೇಶ್ವರ್ ಎಸಿಬಿ ಬಲೆಗೆ ಸಿಕ್ಕಿ ಹಾಕಿಕೊಂಡ ಘಟನೆ ಗುರುವಾರ ನಡೆದಿದೆ.
ವರ್ಗಾವಣೆಯಾಗಿದ್ದರೂ ವಸತಿಗೃಹದಲ್ಲೇ ಡೀಲ್ ಮಾಡ್ತಿದ್ದ ಎಸಿ ಡಾ. ಮಧುಕೇಶ್ವರ ಇಂದು ಉಡುಪಿ ಎಸಿಬಿಯವರ ಖೆಡ್ಡಾಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ, ಇನ್ಸ್ಪೆಕ್ಟರ್ ಸತೀಶ್ ಕುಮಾರ್ ಹಾಗೂ ಸಿಬ್ಬಂದಿಗಳ ದಾಳಿ ನಡೆಸಿದರು.
ಉಡುಪಿ ಎಸಿಬಿಗೆ ದೂರುಬಂದ ಹಿನ್ನೆಲೆ ನಿನ್ನೆ ಎಸಿಬಿ ಮಧುಕೇಶ್ವರ್ ತಂಗಿದ್ದ ವಸತಿಗೃಹಕ್ಕೆ ದಾಳಿ ನಡೆಸಿದೆ.ಆಗ 3 ಲಕ್ಷದ 8 ಸಾವಿರ ನಗದು, 23 ಕಡತ ಮನೆಯಲ್ಲಿ ಪತ್ತೆಯಾಗಿದೆ.ಎಸಿ ಮನೆಯಲ್ಲಿಯೇ ದಾಖಲೆ ಇಟ್ಟು ಹಣ ಮಾಡುತ್ತಿದ್ದುದು ಮೇಲ್ನೋಟಕ್ಕೆ ತಿಳಿದುಬಂದಿದ್ದು ಕಡತ ವಶಪಡಿಸಿಕೊಂಡ ಎಸಿಬಿ ಕೂಲಂಕುಷ ವಿಚಾರಣೆಗೆ ಮುಂದಾಗಿತ್ತು. ಗುರುವಾರ ಮಧ್ಯ ರಾತ್ರಿವೆರಗೂ ವಿವಾರಣೆ ನಡೆದಿದ್ದು ವಿವಿಧ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಇಂದು ಕೂಡ ಎಸಿ ಕಚೇರಿಗೆ ಸಂಬಂಧಿಸಿದ ಕಡತ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಕಚೇರಿ ಸಿಬ್ಬಂದಿಗಳು ಹಾಗೂ ಕೆಲವು ಮದ್ಯವರ್ತಿಗಳ ಶಾಮೀಲಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆಯೆಂದು ತಿಳಿದುಬಂದಿದೆ.
ಇನ್ನು ಮಧುಕೇಶ್ವರ್ ಬಗ್ಗೆ ಹಲವು ಆರೋಪ ಈ ಹಿಂದೆಯೂ ಇತ್ತು. ಪ್ರಕರಣಗಳ ಹಿಂದೆ ಬಿದ್ದು ತಾನು ಖಡಕ್ ಅಧಿಕಾರಿ ಎಂಬ ಸೋಗಿನಡಿಯಲ್ಲಿ ಉಪವಿಭಾಗದ ಜ್ವಲಂತ ಸಮಸ್ಯೆಗಳನ್ನು ಬಂಡವಾಳ ಮಾಡಿಕೊಂಡು ಜೇಬು ತುಂಬಿಸಿಕೊಂಡಿದ್ದರೆಂಬ ಮಾತುಗಳು ಇದೀಗ ಕೇಳಿಬಂದಿದೆ. ಕುಂದಾಪುರದ ಒಂದಷ್ಟು ಮಧ್ಯವರ್ತಿಗಳ ಹೆಸರು ಕೂಡ ಈ ಕೇಸಿನ ಹಿಂದೆ ತಳಕು ಹಾಕಿಕೊಳ್ಳುತ್ತಿದೆ. ಇದೇನೆ ಇರಲಿ…ಇದೆಲ್ಲಾ ಆರೋಪವಷ್ಟೆ….ಸತ್ಯಾಸತ್ಯತೆ ಮಾತ್ರ ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸುವ ಚಾರ್ಜ್ ಶೀಟ್ ಮೇಲೆ ನಿಂತಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.