ಕರಾವಳಿ

ಮಳೆ ನೀರನ್ನು ಡ್ರೈನೇಜ್‍ಗೆ ಸಂಪರ್ಕ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಮನಪಾ ಎಚ್ಚರಿಕೆ

Pinterest LinkedIn Tumblr

ಮಂಗಳೂರು ಆಗಸ್ಟ್.08 : ಮಂಗಳೂರು ಮಹಾನಗರ ಪಾಲಿಕೆಯ ನಗರದ ಭೂಗತ ಒಳಚರಂಡಿ ಯೋಜನೆಯ ದೈನಂದಿನ ನಿರ್ವಹಣೆಯನ್ನು ನಿರ್ವಹಿಸುತ್ತಿದೆ. ನಗರದಾದ್ಯಂತ ಹಮ್ಮಿಕೊಂಡಿರುವ ಒಳಚರಂಡಿ ವ್ಯವಸ್ಥೆಗೆ ವಸತಿ ಸಂಪರ್ಕವನ್ನು ಪಾಲಿಕೆಯಿಂದ ಇತ್ತೀಚಿನ ದಿನಗಳಲ್ಲಿ ಒಳಚರಂಡಿ ಬಳಕೆದಾರರುಗಳು ಒಳಚರಂಡಿ ಜೋಡಣೆಗೆ ತಮ್ಮ ಹಿತ್ತಲಿನ ಮತ್ತು ಮನೆಯ ಸುತ್ತಮುತ್ತ ಬೀಳುವ ಮಳೆಯ ನೀರನ್ನು ಒಳಚರಂಡಿ ಆಳುಗುಂಡಿಗೆ ನೀಡಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.

ಈ ಕಾರಣದಿಂದಾಗಿ ನಗರದ ರಸ್ತೆಗಳಲ್ಲಿ ಹಾಕಲಾಗಿರುವ ಆಳುಗುಂಡಿಗಳಿಂದ ತ್ಯಾಜ್ಯ ನೀರು ಮಳೆಯ ಸಂದರ್ಭದಲ್ಲಿ ಉಕ್ಕಿ ಹರಿದು ರಸ್ತೆಯಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನುಗ್ಗುತ್ತಿದೆ. ಮಾತ್ರವಲ್ಲದೆ ಒಳಚರಂಡಿ ಸಂಸ್ಕರಣಾ ಘಟಕಗಳಿಗೂ ವಿನ್ಯಾಸಗೊಳಿಸಿದ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಬಂದು ಸಂಸ್ಕರಣಾ ಘಟಕಗಳಲ್ಲಿ ತೀವ್ರ ತೊಂದರೆ ಉಂಟಾಗುತ್ತಿದೆ.

File Photos:

ಮಹಾನಗರಪಾಲಿಕೆಯ ನಾಗರೀಕರು ತಮ್ಮ ನಿವಾಸದ ತ್ಯಾಜ್ಯ ನೀರನ್ನು ಮಾತ್ರ ಆಳುಗುಂಡಿಗೆ ಸಂಪರ್ಕಿಸಿ ಮಳೆಯ ನೀರನ್ನು ಆಳುಗುಂಡಿ ಜೋಡಣೆಯಿಂದ ಕಟ್ಟಾಯಿಸಿ ಮಳೆ ನೀರು ಹರಿಯುವ ಚರಂಡಿಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ಅಂತಹ ಜೋಡಣೆಯನ್ನು ದಿನದಿಂದ 7 ದಿನಗಳ ಒಳಗಾಗಿ ಕಟ್ಟಾಯಿಸುವಂತೆ ಸಾರ್ವಜನಿಕರಲ್ಲಿ ಈ ಮೂಲಕ ತಿಳಿಸಲಾಗಿದೆ. ತಪ್ಪಿದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Comments are closed.