ಕರಾವಳಿ

ಜುಲೈ.17: ಮಂಗಳೂರು ಹಜ್ ವಿಮಾನ ಯಾತ್ರೆ ಉದ್ಘಾಟನೆ – ರಾಜ್ಯದಿಂದ 8 ಸಾವಿರ ಯಾತ್ರಿಕರು 

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ 2019ನೇ ಸಾಲಿನಲ್ಲಿ ಹೊರಡುವ ಹಜ್ಜಾಜ್ ಗಳ ವಿಮಾನ ಯಾತ್ರೆಯ ಉದ್ಘಾಟನಾ ಸಮಾರಂಭವು ಜುಲೈ 17 ಬುಧವಾರ ಬೆಳಿಗ್ಗೆ 10:30ಕ್ಕೆ ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಲಿದೆ ಎಂದು ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ತಿಳಿಸಿದ್ದಾರೆ

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಪ್ರಾರ್ಥನೆ ನೆರವೇರಿಸುವರು. ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಹಾಗೂ ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಖಾಝಿ ಬೇಕಲ್ ಉಸ್ತಾದ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಆಶೀರ್ವಚನ ನೀಡುವರು. ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಬಿ. ಝಡ್. ಝಮೀರ್ ಅಹ್ಮದ್ ಖಾನ್ ಉದ್ಘಾಟಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪ್ರಥಮ ಹಜ್ ಯಾತ್ರಾರ್ಥಿಗಳ ಪಾಸ್ ಪೋರ್ಟ್ ವಿತರಿಸುವರು. ರಾಜ್ಯ ಹಜ್ ಸಮಿತಿ ಅಧ್ಯಕ್ಷ ಆರ್. ರೋಶನ್ ಬೇಗ್ ಅವರು ಪ್ರಥಮ ತಂಡದ ಹಜ್ ವಾಹನಕ್ಕೆ ಹಸಿರು ನಿಶಾನೆ ಪ್ರದರ್ಶಿಸುವರು. ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರಾಸ್ತಾವಿಕ ಭಾಷಣ ಮಾಡುವರು ಎಂದು ಹೇಳಿದರು.

ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಹಾಗೂ ಹರೀಶ್ ಕುಮಾರ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಜಿ.ಎ. ಬಾವಾ, ಯೇನಪೋಯ ವಿಶ್ವ ವಿದ್ಯಾಲಯದ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ, ಮಾಜಿ ಶಾಸಕರಾದ ಬಿ.ಎ. ಮೊಯ್ದಿನ್ ಬಾವಾ ಹಾಗೂ ಕೆ.ಎಸ್. ಮುಹಮ್ಮದ್ ಮಸೂದ್, ರಾಜ್ಯ ಹಜ್ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಯು.ಕೆ. ಮೋನು ಕಣಚೂರು, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ವಿ.ವಿ. ರಾವ್, ರಾಜ್ಯ ಹಜ್ ಸಮಿತಿ ಕಾರ್ಯನಿರ್ವಹಣಾಧಿಕಾರಿ ಸರ್ಫ್ರಾಝ್ ಖಾನ್ ಸರ್ದಾರ್, ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ಬಿ.ಎಂ. ಝಕರಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ದಶವರ್ಷದ ಹಜ್ ಕ್ಯಾಂಪ್ :

ದ.ಕ. ಮತ್ತು ಸುತ್ತಮುತ್ತಲ ಜಿಲ್ಲೆಯ ಹಜ್ ಯಾತ್ರಿಕರು ಈ ಹಿಂದೆ ದೂರದ ಬೆಂಗಳೂರನ್ನು ಆಶ್ರಯಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನೇತಾರರು ಮಂಗಳೂರಿನಿಂದ ಪ್ರಯಾಣಕ್ಕೆ ಅನುವು ಮಾಡಿ ಕೊಡುವಂತೆ ಅಂದಿನ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ ಪರಿಣಾಮ 2009 ಅಕ್ಟೋಬರ್ 25 ರಂದು ಮಂಗಳೂರು ಹಜ್ ಕೇಂದ್ರ ಅಸ್ತಿತ್ವಕ್ಕೆ ಬಂದು ಉದ್ಘಾಟನೆಗೊಂಡಿತು. ಜೊತೆಗೆ ಮಂಗಳೂರು ಹಜ್ ನಿರ್ವಹಣಾ ಸಮಿತಿಯು ವೈ. ಮಹಮ್ಮದ್ ಕುಂಞಿ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂತು. ಪ್ರಸ್ತುತ ವರ್ಷದ ಹಜ್ ಕ್ಯಾಂಪ್ ಹತ್ತನೇ ವರ್ಷದ್ದಾಗಿದ್ದು, ಕಳೆದ 9 ವರ್ಷಗಳಲ್ಲಿ ಸುಸೂತ್ರ ಮತ್ತು ಯಶಸ್ವಿಯಾಗಿ ಹಜ್ ಕ್ಯಾಂಪ್ ನಡೆದಿದೆ ಹಾಗೂ ಸುಮಾರು 6 ಸಾವಿರ ಮಂದಿ ಹಜ್ ಯಾತ್ರೆ ಕೈಗೊಂಡಿದ್ದಾರೆ. 2019 ನೇ ಸಾಲಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ 750 ಹಜ್ ಯಾತ್ರಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮದೀನಾ ವಿಮಾನ ನಿಲ್ದಾಣಕ್ಕೆ ಸಂಚರಿಸಲಿದ್ದಾರೆ. ಇವರಿಗೆ ಬೇಕಾದ ವರದಿ, ಲಗ್ಗೇಜ್ ಚೆಕ್ ಇನ್, ಪಾಸ್ ಪೋರ್ಟ್ ಹಾಗೂ ಟಿಕೆಟ್, ಟ್ಯಾಗ್ ವಿತರಣೆ, ಎಮಿಗ್ರೇಶನ್ ಪೂರ್ವಸಿದ್ಧತೆ, ದೂರದ ಊರಿನವರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಎಲ್ಲವನ್ನೂ ಹಜ್ ಕ್ಯಾಂಪ್ ಮೂಲಕ ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯವಸ್ಥೆ ಮಾಡಲಾಗುವುದು. ಜುಲೈ 17 ಮತ್ತು 18 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳು, ಜುಲೈ 19 ರಂದು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಮತ್ತು ಹಾಸನ ಜಿಲ್ಲೆಯ ಯಾತ್ರಾರ್ಥಿಗಳು ಪ್ರಯಾಣ ಬೆಳೆಸುವರು. ಮಕ್ಕಾ ಮತ್ತು ಮದೀನಾ ಯಾತ್ರೆ ಮುಗಿಸಿ ಹಾಜಿಗಳು ಆಗಸ್ಟ್ 31 ರಿಂದ ಸೆಪ್ಟಂಬರ್ 2 ರ ತನಕ 5 ತಂಡಗಳಾಗಿ ಜಿದ್ದಾ ವಿಮಾನ ನಿಲ್ದಾಣದ ಮೂಲಕ ಹಂತ ಹಂತವಾಗಿ ಮಂಗಳೂರಿಗೆ ಹಿಂದಿರುಗಲಿರುವರು.

ರಾಜ್ಯದಿಂದ 8 ಸಾವಿರ ಯಾತ್ರಿಕರು :

ಕರ್ನಾಟಕ ರಾಜ್ಯದಿಂದ ಸುಮಾರು ಎಂಟು ಸಾವಿರ ಯಾತ್ರಿಕರು ಸರಕಾರದ ಹಜ್ ಸಮಿತಿ ಮೂಲಕ 2019 ನೇ ಸಾಲಿನ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಈ ವರ್ಷ ಭಾರತದಿಂದ ಒಟ್ಟು 2 ಲಕ್ಷ ಯಾತ್ರಿಕರಿಗೆ ಸೌದಿ ಸರಕಾರ ವೀಸಾ ವ್ಯವಸ್ಥೆ ಕಲ್ಪಿಸಿದೆ. ಅದರಲ್ಲಿ 1.40 ಲಕ್ಷ ಮಂದಿ ಸರಕಾರದ ಮೂಲಕ ಹಾಗೂ ಉಳಿದ 60 ಸಾವಿರ ಮಂದಿ ಖಾಸಗಿ ಸಂಸ್ಥೆ ಮೂಲಕ ಯಾತ್ರೆ ಕೈಗೊಳ್ಳುವರು. ಖಾಸಗಿ ಹೊರತು ಪಡಿಸಿ ಸರಕಾರದ ವತಿಯಿಂದ ರಾಷ್ಟ್ರದ 21 ಎಂಬರ್ಕೇಶನ್ ಪಾಯಿಂಟ್ (ವಿಮಾನ ಯಾನ ಕೇಂದ್ರಗಳು) ಮೂಲಕ 500 ವಿಮಾನಗಳು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಈಗಾಗಲೇ ಭಾರತದ ಬಹುತೇಕ ಯಾತ್ರಿಕರು ಪವಿತ್ರ ಮಕ್ಕಾ ಮತ್ತು ಮದೀನಾಕ್ಕೆ ತಲುಪಿದ್ದಾರೆ ಎಂದು ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ, ಉಪಾಧ್ಯಕ್ಷರಾದ ಸಿ. ಮಹಮೂದ್ ಹಾಜಿ ಮತ್ತು ಎಸ್ಸೆಂ ರಶೀದ್ ಹಾಜಿ, ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ, ಜತೆ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಮಾಧ್ಯಮ ಜೊತೆ ಕಾರ್ಯದರ್ಶಿಗಳಾದ ಅಹ್ಮದ್ ಬಾವಾ ಪಡೀಲ್, ಸುಹೈಲ್ ಕಂದಕ್, ನಾಸಿರ್ ಲಕ್ಕಿಸ್ಟಾರ್ ಮುಂತಾದವರು ಉಪಸ್ಥಿತರಿದ್ದರು.

Comments are closed.