ಕರ್ನಾಟಕ

ಕರ್ನಾಟಕ ರಾಜಕೀಯ ಹೈ ಡ್ರಾಮಾ ; ಸುಪ್ರೀಂ ಸೂಚನೆಯಂತೆ ಸ್ಪೀಕರ್‌ ಕಚೇರಿಗೆ ಓಡೋಡಿ ಬಂದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು

Pinterest LinkedIn Tumblr

ಬೆಂಗಳೂರು: ರಾಜ್ಯ ರಾಜಕೀಯ ಹೈ ಡ್ರಾಮಾ ಮುಂದುವರಿದಿದೆ. ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌, ಜೆಡಿಎಸ್‌ ಪ್ರಯತ್ನಿಸುತ್ತಿದೆ. ಬಿಜೆಪಿ ಕೂಡ ತನ್ನ ಗಾಳ ಬೀಸಿದೆ. ಸರಕಾರದ ಕಥೆ ಏನಾಗುತ್ತದೆ ಎಂಬ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ವಿಧಾನಸಭಾ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರು ಮುಂಬಯಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಂದ ನೇರವಾಗಿ ಸಿಗ್ನಲ್‌ ಫ್ರೀ ಸಾರಿಗೆ ವ್ಯವಸ್ಥೆಯಡಿ ವಿಧಾನಸೌಧಕ್ಕೆ ಆಗಮಿಸಿದರು. ಆರು ಗಂಟೆ ಮೂರು ನಿಮಿಷಕ್ಕೆ ಆಗಮಿಸಿದರು. ಬಸ್‌ನಿಂದ ಇಳಿದು ಶಾಸಕರು ಓಡೋಡಿ ಸ್ಪೀಕರ್‌ ಕಚೇರಿಗೆ ತಲುಪಿದರು.

ಭೈರತಿ ಬಸವರಾಜ್‌, ರಮೇಶ್‌ ಜಾರಕಿಹೊಳಿ, ಶಿವರಾಮ್‌ ಹೆಬ್ಬಾರ್‌, ಬಿಸಿ ಪಾಟೀಲ್‌, ಗೋಪಾಲಯ್ಯ, ನಾರಾಯಣ ಗೌಡ, ವಿಶ್ವನಾಥ್‌, ಮಹೇಶ್‌ ಕುಮಟಳ್ಳಿ, ಮುನಿರತ್ನ,ಎಸ್‌.ಟಿ. ಸೋಮಶೇಖರ್‌, ಪ್ರತಾಪಗೌಡ ಪಾಟೀಲ್ ಸ್ಪೀಕರ್‌ ಕಚೇರಿಗೆ ತಲುಪಿದರು. ಅತೃಪ್ತ ಶಾಸಕರೆಲ್ಲರೂ ಕೈ ಬರಹದಲ್ಲೇ ರಾಜೀನಾಮೆ ಪತ್ರ ಬರೆದು ಮತ್ತೊಮ್ಮೆ ಸಲ್ಲಿಸಿದರು.

ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಅತೃಪ್ತ ಶಾಸಕರು ಗುರುವಾರ ಸಂಜೆ ವಿಧಾನಸೌದಲ್ಲಿ ಸ್ಪೀಕರ್‌ ಮುಂದೆ ಹಾಜರಾಗಲು ಆಗಮಿಸುತ್ತಿದ್ದಾರೆ. ವಿಧಾನಸಭಗೆ ಸ್ಪೀಕರ್‌ ರಮೇಶ್‌ ಕುಮಾರ್ ಆಗಮಿಸಿದ್ದು, ಕೆಲವು ದಿನ ಹಿಂದೆ ರಾಜೀನಾಮೆ ನೀಡಿದ್ದ ರೋಷನ್‌ ಬೇಗ್‌ ಅವರನ್ನು ಭೇಟಿ ಮಾಡಿ ಕೇವಲ ಮೂರೇ ನಿಮಿಷದಲ್ಲಿ ಕೊಠಡಿಯಿಂದ ವಾಪಸಾಗಿದ್ದಾರೆ.

ವಿಧಾನಸಭಾ ಸ್ಪೀಕರ್‌ ಕಚೇರಿಗೆ ಬಿಡುವಂತೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ. ಸ್ಪೀಕರ್‌ ಕಚೇರಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ವಕೀಲರಿಗೆ ಅವಕಾಶ ಕಲ್ಪಿಸಲಾಗಿದೆ. ನಮಗೂ ಒಳಗೆ ಬಿಡಿ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಅಭೂತಪೂವ ಭದ್ರತೆ ನೀಡಲಾಗಿದೆ. ಇಡೀ ಶಕ್ತಿಸೌಧ ಖಾಕಿಸೌಧವಾಗಿ ಹೊರಹೊಮ್ಮಿದೆ. ಶಕ್ತಿಸೌಧಕ್ಕೆ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ವಿಧಾನಸಭಾ ಸ್ಪೀಕರ್‌ ಕೊಠಡಿ ಹಾಗೂ ಆಪ್ತ ಕಾರ್ಯದರ್ಶಿ ಕೊಠಡಿ ಹೊರತುಪಡಿಸಿ ಉಳಿದ ಎಲ್ಲ ಕೊಠಡಿಗಳನ್ನು ಪೊಲೀಸರು ಬಾಗಿಲು ಬಂದ್‌ ಮಾಡಿಸಿದ್ದಾರೆ. ಇಡೀ ಘಟನಾವಳಿಗಳನ್ನು ವೀಡಿಯೋ ರೆಕಾರ್ಡಿಂಗ್‌ ಸಹ ಮಾಡಲಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಅನರ್ಹತೆಗೆ ಚಿಂತನೆ ನಡೆದಿದೆ. ಕಾಂಗ್ರೆಸ್‌ನ ಇಬ್ಬರು ಹಾಗೂ ಜೆಡಿಎಸ್‌ನ ಮೂವರು ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್‌, ಜೆಡಿಎಸ್‌ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.

ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸುವ ಕುರಿತು ವಾದ ಮಂಡಿಸಲು ಜೆಡಿಎಸ್‌ ಪರ ವಕೀಲರು ಆಗಮಿಸಿ ವಾದ ಮಂಡಿಸಿದ್ದಾರೆ.

ಜೆಡಿಎಸ್‌ ಶಾಸಕರಾದ ಎಚ್‌. ವಿಶ್ವನಾಥ್‌, ಗೋಪಾಲಯ್ಯ, ನಾರಾಯಣ ಗೌಡರನ್ನು ಅನರ್ಹಗೊಳಿಸಬೇಕೆಂದು ಕೋರಿ ಜೆಡಿಎಸ್‌ ಪರ ವಕೀಲರು ಸ್ಪೀಕರ್‌ ಮುಂದೆ ವಾದ ಮಂಡಿಸಿದ್ದಾರೆ.

ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರೇ ಮಾಹಿತಿ ನೀಡಿದ್ದಾರೆ.

ಈ ನಡುವೆ ಮುಂಬಯಿಯಿಂದ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.

ಬೆಳಗ್ಗೆಯಿಂದ ನಡೆದ ಕಾನೂನು ಪ್ರಕ್ರಿಯೆಗಳ ನಂತರ ಈಗ ಎಲ್ಲರ ಕಣ್ಣು ವಿಧಾನಸಭಾ ಸ್ಪೀಕರ್‌ ಮೇಲೆ ನೆಟ್ಟಿದೆ.

Comments are closed.