ಕರಾವಳಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ 33 ಫಲಾನುಭವಿಗಳಿಗೆ ಪರಿಹಾರ ಧನ ವಿತರಣೆ

Pinterest LinkedIn Tumblr

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮೂವತ್ತಮೂರು ಮಂದಿ ಫಲಾನುಭವಿಗಳಿಗೆ ಸುಮಾರು 10 ಲಕ್ಷಕ್ಕೂ ಮಿಕ್ಕಿದ ಪರಿಹಾರ ಧನವನ್ನು ಬಂಟ್ಸ್ ಹಾಸ್ಟೆಲ್ ಬಳಿ ಇರುವ ಅಮೃತೋತ್ಸವ ಕಟ್ಟಡದಲ್ಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು 9 ಮಂದಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ, ಎಂಟು ಮಂದಿಗೆ ಮನೆ ರಿಪೇರಿಗೆ, 14 ಮಂದಿಗೆ ವೈದ್ಯಕೀಯ ಚಿಕಿತ್ಸೆಗೆ ಮತ್ತು ಮನೆ ಕಟ್ಟಲು ಸಹಾಯಧನ, ಮದುವೆಗೆ ಮತ್ತು ಕ್ರೀಡೆಗೆ ಆರ್ಥಿಕ ನೆರವು ವಿತರಿಸಿದರು.
ಕಳೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಹಜ್ ಆಳ್ವ, ಸಮೀಕ್ಷಾ ಶೆಟ್ಟಿ, ದೇವಿಕಾ ಸಂತೋಷ್ ರೈ ಕುಮುಟಾ, ಕಾರ್ತಿಕ್ ಶೆಟ್ಟಿ, ಪ್ರಜೀತ್ ಶೆಟ್ಟಿ, ಸಮಿತಾ ಎಸ್. ಹೆಗ್ಡೆ, ಐಶ್ವರ್ಯ ಎಂ. ಶೆಟ್ಟಿ, ಪ್ರತೀತಾ ಪಿ ಶೆಟ್ಟಿ ಮತ್ತು ಸಿಂಚನಾ ಶೆಟ್ಟಿ ಅವರಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ನೀಡಿ ಸಮಾರಂಭದಲ್ಲಿ ಗೌರವಿಸಲಾಯಿತು.

ಥಾಯಿಲ್ಯಾಂಡ್‌ನ ಬ್ಯಾಂಕಕ್‌ನಲ್ಲಿ ನಡೆಯಲಿರುವ ಐ‌ಎಂಎಫ್‌ಎ ಸೀನಿಯರ್ ವಲ್ಡ್ ಮೊತಾ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದ ಅನ್ವಿತಾ ಆಳ್ವ ಸುರತ್ಕಲ್ ಅವರಿಗೆ ೨೫ ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಒಕ್ಕೂಟ ಗುರುತಿಸಿ ಸಹಾಯ ಹಸ್ತ ನೀಡುತ್ತಿದೆ. ಮುಖ್ಯವಾಗಿ ಒಕ್ಕೂಟಕ್ಕೆ ಆರ್ಥಿಕ ಸಹಾಯ ಕೇಳಿ ಬರುತ್ತಿರುವ ಅರ್ಜಿಗಳನ್ನು 15 ದಿನಗಳಿಗೊಮ್ಮೆ ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ ಎಂದರು. ಮುಖ್ಯವಾಗಿ ವಿದ್ಯಾಭ್ಯಾಸ , ವೈದ್ಯಕೀಯ ಚಿಕಿತ್ಸೆಗೆ ನೆರವು ಮನೆ ನಿರ್ಮಾಣಕ್ಕೆ, ಮದುವೆ ಮೊದಲಾದ ಕಾರ್ಯಕ್ಕೆ ಒಕ್ಕೂಟದಿಂದ ಸಹಾಯಧನವನ್ನು ನೀಡಲಾಗುತ್ತಿದೆ ಎಂದವರು ತಿಳಿಸಿದರು.

ಬಂಟರ ಸಂಘಗಳ ಒಕ್ಕೂಟವು ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದು, ಸಮಾಜದಲ್ಲಿರುವ ಬಡಜನರಿಗೆ ನಿರಂತರವಾಗಿ ಸಹಾಯ ಹಸ್ತವನ್ನು ಮಾಡುತ್ತಾ ಬಂದಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ತಿಳಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ವಂದಿಸಿದರು.

ಸಮಾರಂಭದಲ್ಲಿ ಒಕ್ಕೂಟದ ಮಾಜೀ ಕೋಶಾಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಸುರತ್ಕಲ್ ಬಂಟರ ಸಂಘದ ಮಾಜೀ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಸುರೇಶ್ ಶೆಟ್ಟಿ ಪುಚ್ಚಾಡಿ ಮೊದಲಾದವರು ಉಪಸ್ಥಿತರಿದ್ದರು.

Comments are closed.