ಕರಾವಳಿ

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ; ಮತ್ತೆ ಐವರ ಬಂಧನ – ರೂ.54 ಲಕ್ಷ ರೂಪಾಯಿ ನಗದು ವಶ

Pinterest LinkedIn Tumblr

ಮಂಗಳೂರು : ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್’ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐವರು ಬುಕ್ಕಿಗಳನ್ನು ಮಂಗಳೂರು ನಗರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ರೂ.54 ಲಕ್ಷ ರೂಪಾಯಿ ನಗದು ಹಾಗು ಮೊಬೈಲ್ ಫೋನ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಕುಲಶೇಖರ ನಿವಾಸಿ ಉದಯ್ (40), ಅಡ್ಯಾರ್ ನಿವಾಸಿ ಅಶೋಕ್ (40), ಪಾಂಡೇಶ್ವರ ನಿವಾಸಿ ರವಿ (35), ವಾಮಂಜೂರು ನಿವಾಸಿಗಳಾದ ರಾಧಾಕೃಷ್ಣ(35) ಹಾಗೂ ದಿತ್ತು (30) ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದಲ್ಲಿ ಮೊಬೈಲ್ ಆಯಪ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕರುಣಾಕರ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಹೊರಗಿನಿಂದ ನಡೆಸುತ್ತಿದ್ದಾನೆ ಎನ್ನಲಾಗಿದೆ. ಕರುಣಾಕರ್ ಭಂಡಾರಿ ದುಬೈನಲ್ಲಿದ್ದು, ‘ಆರೆಂಜ್ 333’ ಆಯಪ್ ಮೂಲಕ ಐಪಿಎಲ್, ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ವಾರಕ್ಕೆ ಎರಡರಿಂದ ಮೂರು ಬಾರಿ ನಗರಕ್ಕೆ ಬಂದು ಬೆಟ್ಟಿಂಗ್ ವ್ಯವಹಾರದ ಹಣ ಪಡೆದು ಲೆಕ್ಕಪತ್ರ ಚುಕ್ತಾ ಮಾಡುತ್ತಿದ್ದ. ಈ ಬೆಟ್ಟಿಂಗ್ ದಂಧೆಯ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಟ್ಟಿಂಗ್ ದಂಧೆಯ ರೂವಾರಿ ಕರುಣಾಕರ್ ಭಂಡಾರಿಗೆ ಅಡ್ಯಾರ್ ಅಶೋಕ್ ನಗರದಲ್ಲಿ ಪ್ರಮುಖ ಏಜೆಂಟ್ ಆಗಿದ್ದು, ಆತನನ್ನು ಆಯಪ್‌ನ ಎಡ್ಮಿನ್‌ಆಗಿ ಮಾಡಿದ್ದ. ಈತನ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಇದೇ ಮಾದರಿ ಹಲವರು ಎಡ್ಮಿನ್‌ಗಳನ್ನು ಮಾಡಿರುವ ಸಾಧ್ಯತೆಯಿದೆ. ಆರೋಪಿಗಳಾದ ಕರುಣಾಕರನ್ ಸಂಬಂಧಿ ರವಿ ಮತ್ತು ಉದಯ್ ಏಜೆಂಟ್‌ಗಳಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೇ ವೇಳೆ ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಕರುಣಾಕರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಅಶೋಕ್, ರಾಧಾಕೃಷ್ಣ, ದಿತ್ತು ಎಂಬವರನ್ನು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ ಎರಡು ಲಕ್ಷ ರೂ. ವಶಪಡಿಸಿಕೊಂಡರೆ, ಉದಯ್ ಮತ್ತು ರವಿಯನ್ನು ಬಂದರು ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ 52 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಈ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ, ಪಿಎಸ್ಸೈ ಕಬ್ಬಾಳ್‌ರಾಜ್, ಎಎಸ್ಸೈ ಮೋಹನ್, ಆಶಿತ್, ರಾಜಾ, ಮಣಿ, ವಿಶ್ವನಾಥ್ ಭಾಗವಹಿಸಿದ್ದರು.

ನಗರ ಪೊಲೀಸ್ ಆಯುಕ್ತ ಸಂದೀಪ ಪಾಟೀಲ ಅವರು ಬೆಟ್ಟಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು‌ ಮಾಹಿತಿ ನೀಡುವಂತೆ ಕೋರಿದ್ದರು. ಸದ್ಯ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಚರಣೆ ಮುಂದುವರೆಸಿದ್ದಾರೆ.

Comments are closed.