ಕರಾವಳಿ

ಅಸೈಗೋಳಿ ಸಮೀಪ ಭೀಕರ ರಸ್ತೆ ಅಪಘಾತ : 20ರ ಯುವಕ ಸ್ಥಳದಲ್ಲೇ ಮೃತ್ಯು

Pinterest LinkedIn Tumblr

ಮಂಗಳೂರು / ಉಳ್ಳಾಲ, ಜೂನ್.13: ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸಮೀಪದ ತಿಬ್ಲಪದವು ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಚಲಾಯಿಸುತ್ತುದ್ದ ಯುವಕನೋರ್ವ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಪಜೀರ್ ಸಮೀಪದ ದೇವಿನಗರ ನಿವಾಸಿ ಹರ್ಷಿತ್ ಶೆಟ್ಟಿ (20) ಎಂದು ಗುರುತಿಸಲಾಗಿದೆ. ಮೃತರು ಪಜೀರು ಗ್ರಾ.ಪಂ ಸದಸ್ಯೆ ಸುಜಾತಾ ಶೆಟ್ಟಿ ಎಂಬವರ ಅವಳಿ-ಜವಳಿ ಪುತ್ರರಲ್ಲಿ ಓರ್ವನಾಗಿದ್ದಾರೆ.

ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ತಾನು ಖರೀದಿಸಿದ್ದ ಹೊಸ ಬೈಕನ್ನು ಮನೆಯಲ್ಲೇ ಬಿಟ್ಟು, ಸ್ನೇಹಿತನ ಬೈಕಿನಲ್ಲಿ ಕೆಲಸಕ್ಕೆ ಹೊರಟಿದ್ದರು ಎನ್ನಲಾಗಿದೆ.

ಮಂಗಳೂರಿನಲ್ಲಿ ಎ.ಸಿ ಟೆಕ್ನೀಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹರ್ಷಿತ್ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಎದುರಿನಲ್ಲಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬಸ್ ಬೈಕಿಗೆ ಢಿಕ್ಕಿ ಹೊಡೆದು, ರಸ್ತೆಗೆಯೆಸೆಯಲ್ಪಟ್ಟ ಹರ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.