ಉಡುಪಿ: ಇತ್ತೀಚೆಗೆ ಮಲ್ಪೆಯ ಬಂದರಿನಲ್ಲಿ ನಡೆದ ಮೀನು ವ್ಯಾಪಾರಿ ಬಂಟ್ವಾಳ ಫರಂಗಿಪೇಟೆ ಪುದು ಗ್ರಾ.ಪಂ. ಸದಸ್ಯ ಕೆ. ಮಹಮ್ಮದ್ ರಿಯಾಝ್(34) ಅವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಉಡುಪಿ ಪೊಲೀಸರು ಸೋಮವಾರ ಬೆಳಗ್ಗೆ ಬೇಲೂರಿನಲ್ಲಿ ಹಿಡಿದು ಬಂಧಿಸಿದ್ದಾರೆ.
ಫರಂಗಿಪೇಟೆಯ ಇಸ್ಮಾಯಿಲ್ (45), ಆತನ ಸಹೋದರ ಮಹಮ್ಮದ್ ಗೌಸ್ (35), ಮಹಮ್ಮದ್ ಕೈಸರ್ (60), ಮುನೀರ್ (25) ಮತ್ತು ಅನ್ವರ್(25) ಬಂಧಿತ ಆರೋಪಿಗಳು. ಇವರಲ್ಲಿ ಪ್ರಕರಣದ ಪ್ರಮುಖ ಸೂತ್ರಧಾರಿ ಇಸ್ಮಾಯಿಲ್ ಎಂಬಾತ ರಿಯಾಝ್ ಕೊಲೆಗೆ ಸುಪಾರಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಮಂಗಳವಾರ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಪೈಕಿ ಇಸ್ಮಾಯಿಲ್, ಗೌಸ್ ಹಾಗೂ ಮುನೀದ್ ಎಂಬುವವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ ಎಂದು ತಿಳಿದುಬಂದಿದೆ.
ಅಂದು ನಡೆದಿದ್ದೇನು?
ಜೂ. 7ರಂದು ರಿಯಾಝ್ ಅವರು ಮೀನಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಸುಕಿನ ವೇಳೆ ಅಬ್ದುಲ್ ನಿಸಾರ್, ಜಾವೇದ್ ಮತ್ತು ಮೊಯಿದೀªನ್ ಅವರ ಜತೆ ಮೀನಿನ ವಾಹನದಲ್ಲಿ ಮಲ್ಪೆ ಮೀನುಗಾರಿಕೆ ಬಂದರಿಗೆ ಬಂದಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳ ತಂಡವೊಂದು ಮುಖಕ್ಕೆ ಮುಸುಕು ಹಾಕಿ ಬಂದು ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ತನಿಖೆ ಕೈಗೊಂಡ ಪೊಲೀಸರು ಮೂರು ತಂಡವನ್ನು ರಚಿಸಿ ಒಂದು ತಂಡವನ್ನು ಬೆಂಗಳೂರಿಗೆ ಕಳುಹಿಸಿದ್ದರು. ಆರೋಪಿಗಳು ಬೇಲೂರಿನಲ್ಲಿ ತಲೆ ಮರೆಸಿಕೊಂಡ ಮಾಹಿತಿಯನ್ನು ಪಡೆದು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪೂರ್ವ ದ್ವೇಷವೇ ಕಾರಣ
ಹಳೆ ದ್ವೇಷದಿಂದಲೇ ಕೊಲೆಗೆ ಸುಪಾರಿ ಕೊಡಲಾಗಿದೆ. ಫರಂಗಿಪೇಟೆಯ ಮಳಿಗೆ ಹಾಗೂ ಮೀನಿನ ವ್ಯಾಪಾರಕ್ಕೆ ಸಂಬಂಧಿಸಿ ಕೆ. ಮೊಹಮ್ಮದ್ ರಿಯಾಝ್ ಹಾಗೂ ಇಸ್ಮಾಯಿಲ್ನ ಗುಂಪಿನ ನಡುವೆ ಪದೇ ಪದೇ ಜಗಳವಾಗುತ್ತಿತ್ತೆನ್ನಲಾಗಿದೆ. ಗುಂಪಿನಲ್ಲಿ ಅನೇಕರಿದ್ದರೂ ರಿಯಾಝ್ ಗ್ರಾ.ಪಂ. ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ರಿಯಾಜ್ ಅವರನ್ನೇ ಟಾರ್ಗೆಟ್ ಮಾಡಿ ಕೊಲೆಗೆ ಸಂಚು ರೂಪಿಸಲಾಗಿತ್ತು. ಹಿಂದಿನ ಜಗಳದ ಅನುಮಾನದ ಮೇರೆಗೆ ಪೊಲೀಸರು ಇಸ್ಮಾಯಿಲ್ಗೆ ನೋಟಿಸ್ ಕೊಟ್ಟಿದ್ದು, ಸುಪಾರಿ ಕೊಟ್ಟಿರುವ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
Comments are closed.