ಕರಾವಳಿ

ಮಲ್ಪೆ ಬೀಚ್’ನಲ್ಲಿ ಮುಳುಗುತ್ತಿದ್ದವರ ರಕ್ಷಣೆ ಮಾಡಿದ ಇಲಾಖೆ- ಇದು ನಿಜವಲ್ಲ, ಅಣಕು ಪ್ರದರ್ಶನ!

Pinterest LinkedIn Tumblr

ಉಡುಪಿ: ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು ಮತ್ತು ಸಂಬಂದಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತ ಅಣುಕು ಪ್ರದರ್ಶನ ಶನಿವಾರ ಮಲ್ಪೆಯ ಹನುಮಾನ್ ಭಜನಾ ಮಂದಿರದ ಬಳಿ ನಡೆಯಿತು.

ಅಣಕು ಪ್ರದರ್ಶನದಲ್ಲಿ ಬೆಳಗ್ಗೆ 10.40 ಕ್ಕೆ ಸುನಾಮಿ ಕುರಿತ ಎಚ್ಚರಿಕೆ ಸ್ವೀಕರಿಸಿದ ಕೂಡಲೇ 2 ನಿಮಿಷದ ಅವಧಿಯಲ್ಲಿ ಉಡುಪಿ ಅಗ್ನಿಶಾಮಕ ಇಲಾಖೆಯ 2 ವಾಹನಗಳು ಸಮುದ್ರ ತೀರದ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡುತ್ತಾ, ಸಮುದ್ರ ತೀರಕ್ಕೆ ಆಗಮಿಸಿದವು, ಇದೇ ವೇಳೆ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು , ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ನೀರಿಗಳಿದು ಮೇಲೆ ತಂದರು. ಅವರಿಗೆ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಿದ್ದವರನ್ನು ಆದ್ಯತೆಯ ಮೇಲೆ ಗುರುತಿಸಿ , ಮಲ್ಪೆಯ ಏಳೂರು ಮೊಗವೀರ ಸಭಾ ಭವನದಲ್ಲಿ ತೆರೆದಿದ್ದ ನಿರಾಶ್ರಿತರ ಕೇಂದ್ರದಲ್ಲಿನ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಆರೋಗ್ಯ ಇಲಾಖೆಯ 2 ಆಂಬುಲೈನ್ಸ್ ಗಳು ಹಾಗೂ ಅಗ್ನಿಶಾಮಕ ಇಲಾಖೆಯ ಎರಡು ವಾಹನಗಳು ಈ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದವು.

ನಂತರ ಕೂಡಲೇ ಸ್ಥಳಕ್ಕೇ ಆಗಮಿಸಿದ ಕಂದಾಯ ಇಲಾಖೆಯ ಸಿಬ್ಬಂದಿ, ತೀರ ಸಮೀಪದ ಜನರನ್ನು ಏಳೂರು ಮೊಗವೀರ ಸಮಾಜದಲ್ಲಿನ ನಿರಾಶ್ರಿತರ ಕೇಂದ್ರಕ್ಕೆ ಬಸ್ ಮೂಲಕ ಸಾಗಿಸಿದರು, ನಿರಾಶ್ರಿತರಿಗೆ ಅಲ್ಲಿ ಊಟೋಪಚಾರ ಮತ್ತು ವಸತಿ ಮತ್ತು ಆರೋಗ್ಯ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು.

ಈ ಅಣುಕು ಕಾಯಾಚರಣೆಯ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ , ಸುನಾಮಿ ಸೇರಿದಂತೆ ಯಾವುದೇ ಪ್ರಕೃತಿಕ ವಿಕೋಪದ ಸಂದರ್ಭದಲ್ಲಿ ಜಿಲ್ಲಾಡಳಿತ ಯಾವ ರೀತಿಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಿದ್ದವಾಗಿದೆ ಎಂಬುದನ್ನು ಪರಿಶೀಲಿಸಲು ಮತ್ತು ಎಲ್ಲಾ ಇಲಾಖೆಗಳು ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆಗೆ ಸಿದ್ದವಾಗಿರುವಂತೆ ಮತ್ತು ಅಣಕು ಪ್ರದರ್ಶನದಲ್ಲಿ ಕಂಡು ಬರುವ ದೋಷಗಳನ್ನು , ಪರಿಶೀಲಿಸಿ , ನೈಜ ಕಾರ್ಯಾಚರಣೆ ವೇಳೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಗದಂತೆ ಕಾರ್ಯ ನಿರ್ವಹಿಸಲು ಇದು ಸಹಕಾರಿಯಾಗಿದ್ದು, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ಈಗಾಗಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹೂಳು ತೆಗೆಯುವ ಕಾರ್ಯಗಳು, ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಳಾಗದಂತೆ ತಡೆಯಲು ಮೆಸ್ಕಾಂ ವತಿಯಿಂದ ಈಗಾಗಲೇ ಮರಗಳ ಕೊಂಬೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಸಮಸ್ಯೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ, ಅಗ್ನಿಶಾಮಕ, ಹೋಂ ಗಾರ್ಡ್, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಗೆ ಸದಾ ಸನ್ನದ್ದರಾಗಿರುವಂತೆ ಸೂಚಿಸಲಾಗಿದೆ ಹಾಗೂ ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಅಗತ್ಯವಿರುವ ಎಲ್ಲಾ ರಕ್ಷಣಾ ಉಪಕರಣಗಳನ್ನು ಸಂಬಂದಪಟ್ಟ ಇಲಾಖೆಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ಥರಿಗೆ ಸೂಕ್ತ ಪುರ್ನವಸತಿ ಕಲ್ಪಿಸಲು ಮತ್ತು ಸಂತ್ರಸ್ಥರ ರಕ್ಷಣೆಗೆ ಅಗತ್ಯವಿರುವ ರಕ್ಷಣಾ ಉಪಕರಣಗಳನ್ನು ವಿತರಿಸಲು ಈಗಾಗಲೇ ಕ್ರಮ ಕೈಗೊಂಡಿದೆ , ವಿಕೋಪ ಸಂದರ್ಭದಲ್ಲಿ ರಕ್ಷಿಸಿದವರನ್ನು , ಪ್ರಥಮ ಚಿಕಿತ್ಸೆ ನೀಡಿದ ಬಳಿಕೆ , ಆದ್ಯತೆ ಮೇಲೆ ಚಿಕಿತ್ಸೆ ನೀಡಲು ರೆಡ್ (ತುರ್ತು) , ಎಲ್ಲೊ (ಕಡಿಮೆ ತುರ್ತು ) , ಗ್ರೀನ್ (ಅತಿ ಕಡಿಮೆ ತುರ್ತು )ಮತ್ತು ಬ್ಲಾಕ್ (ಸಾವು) ರಿಬ್ಬನ್ ಗಳನ್ನು ಅವರಿಗೆ ತೊಡಿಸುವ ಮೂಲಕ ಶೀಘ್ರದಲ್ಲಿ ಅಗತ್ಯವಿರುವ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಣಕು ಕಾರ್ಯಾಚರಣೆಯಲ್ಲಿ, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಡಿವೈಎಸ್ಪಿ ಜೈ ಶಂಕರ್, ಮಲ್ಪೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಧು, ಡಿಹೆಚ್ಓ ಎಂ.ಜಿ.ರಾಮ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಜಿಲ್ಲಾ ಅಗ್ನಿಶಾಮಕ ಇಲಾಖೆ ಅಧಿಕಾರಿ ವಸಂತ ಕುಮಾರ್ , ಹೋಂ ಗಾರ್ಡ್ ನ ಸಹಾಯಕ ಕಮಾಂಡೆಂಟ್ ರಮೇಶ್, ಮತ್ತು ನಗರಸಭೆಯ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಉಡುಪಿ ರೆಡ್ಕ್ರಾಸ್ ನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸುರೇಶ್ ಶೆಣ್ಯೆ , ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Comments are closed.