ಕರಾವಳಿ

ಜೂ. 8-9: ಪಿಲಿಕುಳ ನಿಸರ್ಗಧಾಮದಲ್ಲಿ ‘ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ’

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು : ಮಂಗಳೂರಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ದಿನಾಂಕ 08.06.2019 ಮತ್ತು 09.06.2019 (ಶನಿವಾರ ಮತ್ತು ಆದಿತ್ಯವಾರ) ರಂದು ‘ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ’ ವನ್ನು ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಆಚರಿಸಲು ಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಪ್ರಾದೇಶಿಕವಾದ ಹಲಸು, ಮಾವು ಹಾಗೂ ಇತರ ಹಣ್ಣುಗಳಲ್ಲದೆ ರಾಜ್ಯದ ಇತರೆ ಕಡೆಯ ಮೌಲ್ಯವರ್ದಿತ ಹಣ್ಣುಗಳನ್ನು ಬೆಳೆಗಾರರೇ ತಂದು ಪ್ರದರ್ಶಿಸಿ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ವಿವಿಧ ಹಣ್ಣುಗಳು, ಔಷದೀಯ ಸಸಿಗಳು, ಕಸಿ ಗಿಡಗಳು, ಬೀಜಗಳು, ಖಾದಿ ಬಟ್ಟೆಗಳು, ಮಂಜಿಷ್ಟ, ದಾಳಿಂಬೆ ಸಿಪ್ಪೆ, ಅಳಲೆಕಾಯಿ, ನೀಲಿ, ಕಸಿನ್‌ಕಾರಿ ಮತ್ತು ಅಡಿಕೆ ಚೊಗರು ಮುಂತಾದ ಸಹಜ ಬಣ್ಣದಿಂದ ಸಂಸ್ಕೃರಿಸಲ್ಪಟ್ಟ ಕೈಮಗ್ಗಗಳ ವಸ್ತ್ರಗಳು, ಉಡುಪಿ ಸೀರೆಗಳು ಸಾವಯವ ಬಳಗದ ವಿವಿಧ ಆಹಾರ ಮತ್ತಿತ್ತರ ಪದಾರ್ಥಗಳು ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಹಣ್ಣುಗಳಿಂದ ತಯಾರಿಸಲ್ಪಡುವ ವಿವಿಧ ಖಾದ್ಯಗಳು ಹಾಗೂ ಪಾನೀಯಗಳನ್ನು ಕೂಡಾ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಈ ಎರಡು ದಿನಗಳಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಮೌಲ್ಯವರ್ದಿತ ಮೀನು ಮತ್ತು ಮೀನಿನ ಖಾದ್ಯಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುವುದು ಎಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ.

Comments are closed.