ಕರಾವಳಿ

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಕಲ್ಲು ತೂರಾಟ: ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆ

Pinterest LinkedIn Tumblr

ಕುಂದಾಪುರ: ಕಳೆದ ಗುರುವಾರ ರಾತ್ರಿ ಅಕ್ರಮ ಮರಳು ಸಾಗಾಟ ತಡೆದು ವಾಹನ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಬಂದ ಪೊಲೀಸರ ಮೇಲೆ ಕೈ ಹಾಕಿ ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೇಲೆ ಕಲ್ಲೂ ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಸದ್ಯ ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಘಟನೆಗೆ ಸಂಬಂಧಿಸಿದಂತೆ 19 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಹಿದ್, ಫಹಾದ್, ಅಬ್ದುಲ್ ಹಮೀದ್ ಎನ್ನುವರನ್ನು ಮಂಗಳವಾರ ಬಂಧಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಪರಾರಿಯಾಗಲು ಕುಂದಾಪುರ ರೈಲ್ವೆ ನಿಲ್ದಾಣದಲ್ಲಿದ್ದಾಗ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ (ಘಟನೆ ದಿನ) ಶಾಹಿದ್ ಬೆಟ್ಟೆ (30), ಜಾಕಿರ್ ಹುಸೇನ್ (32), ಕರಾಣಿ ಶಾಕಿರ್ (24), ಬ್ರೇಜ್ ಸಾಹೇಬ್ (26) ಎನ್ನುವರನ್ನು ಬಂಧಿಸಲಾಗಿತ್ತು. ಒಂದೆರಡು ದಿನದ ಹಿಂದೆ ಅಜೀಮ್ ಬಂಧನವಾಗಿತ್ತು.

ಈ ಹಿಂದೆಯೂ ಮರಳಿಗೆ ಬ್ರೇಕ್…
ಜಿಲ್ಲಾದ್ಯಂತ ಮರಳುಗಾರಿಕೆ ನಿಷೇಧವಿದ್ದರೂ ಕೂಡ ಕಂಡ್ಲೂರು ಪರಿಸರದಲ್ಲಿ ರಾತ್ರಿ ವೇಳೆ ಮರಳುಗಾರಿಕೆ ಕದ್ದುಮುಚ್ಚಿ ನಡೆಸಲಾಗುತ್ತಿತ್ತು. ಪಿಎಸ್ಐ ಶ್ರೀಧರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಅಕ್ರಮ ಮರಳುಗಾರಿಕೆ ತಡೆಗೆ ಗಸ್ತು ವ್ಯವಸ್ಥೆ ಹೆಚ್ಚಿಸಿ ಅಲ್ಲಲ್ಲಿ ದಾಳಿ ಕೂಡ ನಡೆಸಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಇಂತಹ ಹಲವು ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳು, ಟಿಪ್ಪರ್ ಹಾಗೂ ದೋಣಿ ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿತ್ತು.

ಪಿಎಸ್ಐ ಶ್ರೀಧರ್ ನಾಯ್ಕ್..
ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಆರಂಭದ ಕೆಲ ದಿನಗಳ ಬಳಿಕ ಇಲ್ಲಿಗೆ ಠಾಣಾಧಿಕಾರಿಯಾಗಿ ಬಂದ ಬಳಿಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮುಂದಾದ ಶ್ರೀಧರ್ ನಾಯ್ಕ್ ಮೊದಲಿಗೆ ದಂಧೆಗಳಿಗೆ ಕಡಿವಾಣ ಹಾಕಲು ಯತ್ನಿಸಿದ್ದರು. ಈ ಭಾಗದಲ್ಲಿ ಅಕ್ರಮ ಗೋ ಸಾಗಾಟ ಹೆಚ್ಚಿದ್ದು ಗಮನಕ್ಕೆ ಬರುತ್ತಲೇ ಬಹಳಷ್ಟು ದಾಳಿ ನಡೆಸಿ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದರು. ಕೋಮು ಸಾಮರಸ್ಯ ಕದಡುವ ವ್ಯಕ್ತಿಗಳಿಗೆ ಎಚ್ಚರಿಕೆ ಹಾಗೂ ತಪ್ಪಿದಲ್ಲಿ ಕಾನೂನು ರೀತಿಯ ಶಿಕ್ಷೆ ವಿಧಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಅವರು ಹಾಗೂ ಸಿಬ್ಬಂದಿಗಳು ಶ್ರಮಿಸಿದ್ದರು, ಇಲ್ಲಿನ ಇನ್ನೊಂದು ಪಿಡುಗಾಗಿದ್ದ ಅಕ್ರಮ ಮರಳುಗಾರಿಕೆ ತಡೆಗೂ ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಂದು ನಡೆದಿದ್ದೇನು?
ಕಂಡ್ಲೂರು ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಕಳೆದ ಗುರುವಾರ ರಾತ್ರಿ KA-20-M-8231 ನಂಬರಿನ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭ ಪಿಎಸ್ಐ ಶ್ರೀಧರ ನಾಯ್ಕ್ ವಾಹನ ವಶಕ್ಕೆ ಪಡೆದು ಠಾಣೆಗೆ ತಂದು ತಾನು ಠಾಣೆಗೆ ಒಳಪ್ರವೇಶಿಸುತ್ತಿರುವಾಗ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ದೌಡಾಯಿಸಿದ ಮರಳು ದಂಧೆಕೋರರು ಹಾಗೂ ಅವರಿಗೆ ಸಹಕರಿಸುವವರು ಪಿಎಸ್ಐ ಹಾಗೂ ಸಿಬ್ಬಂದಿಗಳನ್ನು ಸುತ್ತುಗಟ್ಟಿ ‘ನಮ್ಮ ಹುಡುಗರು ಹೊಯಿಗೆ ಸಾಗಾಟ ಮಾಡಿದರೆ ಅವರನ್ನೆ ಹಿಡಿಯುತ್ತೀರಿ, ನಮ್ಮ ವಾಹನದ ಮೇಲೆ ಕೇಸು ಮಾಡಬೇಡಿ, ಬಿಟ್ಟುಬಿಡಿ’ ಎಂದು ಏರುದನಿಯಲ್ಲಿ ಮಾತನಾಡಿ ಮೈ ಮೇಲೆ ಕೈಹಾಕಿ ತಳ್ಳಿದ್ದಲ್ಲದೇ ಅಲ್ಲಿದ್ದವರು ಠಾಣೆಯ ಮೇಲೆ ಕಲ್ಲನ್ನು ಎಸೆದು ದುಂಡಾವರ್ತನೆ ತೋರಿದ್ದರು. ಎರಡು ವರ್ಷಗಳ ಹಿಂದೆ ಡಿಸಿ ಹಾಗೂ ಎಸಿ ಮೇಲಿನ ಹಲ್ಲೆ ಪ್ರಕರಣದಲ್ಲಿಯೂ ಈ ಕೆಲವು ಆರೋಪಿಗಳಿದ್ದಾರೆ ಎನ್ನಲಾಗಿದೆ.

ಅಂದು ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ಪತ್ತೆಗೆ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ನೇತ್ರತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದರು. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2019 ಕಲಂ: 143, 147, 148,341, 353, 504, 332 ಜೊತೆಗೆ 149 ಐಪಿಸಿ ಮತ್ತು ಕಲಂ: 2 The Prevention of destruction and loss of property Act-1981 ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

ವರದಿ- ಯೋಗೀಶ್ ಕುಂಭಾಸಿ

Comments are closed.