ಮಂಗಳೂರು : ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾದ ಬಳಿಕ ಅಪವಿತ್ರ ಮೈತ್ರಿಯ ಅಭ್ಯರ್ಥಿಗಳಿಗೆ ಕರಾವಳಿ ಜನತೆ ಮತ ನೀಡದಿರುವುದರಿಂದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಹಿನ್ನಡೆ ಅನುಭವಿಸಲು ಕಾರಣ ಎನ್ನುವ ಲೋಕೋಪಯೋಗಿ ಸಚಿವ ರೇವಣ್ಣ ಅವರ ಅತ್ಯಂತ ಅಪ್ರಭುದ್ಧ ಹಾಗೂ ಬೇಜವಾಬ್ದಾರಿ ಹೇಳಿಕೆ ಕಳೆದ ಎರಡು ಮೂರು ದಶಕಗಳಿಂದ ನಿರಂತರವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶಗಳಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನಗಳಿಸುತ್ತಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆಗೆ ಹಾಗೂ ಈ ಭಾಗದ ವಿದ್ಯಾರ್ಥಿಗಳಿಗೆ ಮಾಡಿರುವ ಅವಮಾನ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಕ್ರೋಷವ್ಯಕ್ತಪಡಿಸಿದ್ದಾರೆ.
ಕೈಯಲ್ಲಿ ಸದಾ ನಿಂಬೆಹಣ್ಣು ಹಿಡಿದುಕೊಂಡು ಚುನಾವಣೆಯ ಸೋಲಿನ ಭೀತಿಯಲ್ಲಿರುವ ರೇವಣ್ಣ, ರಾಜಕೀಯ ಚದುರಂಗದಾಟದಲ್ಲಿ ಆಕಸ್ಮತ್ ಪ್ರಧಾನಮಂತ್ರಿಯಾದ ದೇವೇಗೌಡ ಹಾಗೂ ಸಾಂದರ್ಭಿಕ ಮುಖ್ಯಮಂತ್ರಿಯಾಗುವ ಅವಕಾಶಗಿಟ್ಟಿಸಿಕೊಂಡಿದ್ದ ಕುಮಾರಸ್ವಾಮಿ ಕರಾವಳಿ ಜಿಲ್ಲೆಯ ಜನತೆಯಿಂದ ತಿರಸ್ಕೃತರಾಗಿರುವ ಈ ಕುಟುಂಬದ ಸದಸ್ಯರು ಕರಾವಳಿಗರ ಬಗ್ಗೆ ಕೀಳಾಗಿ ಮಾತನಾಡುವುತ್ತಿರುವುದು ಅಸಹ್ಯಕರ ವರ್ತನೆಯಾಗಿದ್ದು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಾರ್ಣಿಕ್ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯಿಂದ Third Class Pass ಆಗಿದ್ದರೂ ಮುಖ್ಯಮಂತ್ರಿಯಾಗುವ ಲಾಟರಿ ಪಡೆದ ನಂತರ ಆಂತರಿಕ ಸಮಸ್ಯೆಗಳಲ್ಲಿ ಮುಳುಗಿರುವ ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ಕೊಡದೆ ತನ್ನ ಪಕ್ಷಕ್ಕೆ ಕರಾವಳಿಯಲ್ಲಿ ನೆಲೆಯಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಕರಾವಳಿ ಜನರಿಗೆ ತಿಳುವಳಿಕೆ ಕಡಿಮೆ ಎನ್ನುವ ಅತ್ಯಂತ ಕೀಳುಮಟ್ಟದ ಅವಮಾನಕಾರಿ ಹೇಳಿಕೆ ನೀಡಿರುವುದು ಕರಾವಳಿ ಜನತೆಗೆ ಮಾಡಿರುವ ಅಪಮಾನ ಎಂದು ಕಾರ್ಣಿಕ್ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಉತ್ತಮ ಫಲಿತಾಂಶಕ್ಕಾಗಿ ತಮ್ಮ ಪತ್ನಿಯನ್ನ ಅಭಿನಂದಿಸಿರುವ ಮಾನ್ಯ ಲೋಕೋಪಯೋಗಿ ಸಚಿವರು ಕಳೆದ ಹತ್ತಾರು ವರ್ಷಗಳ ಹಿನ್ನಡೆಯ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವರೆಂದು ಭಾವಿಸುತ್ತೇನೆ ಜೊತೆಗೆ ಕರಾವಳಿ ಕರ್ನಾಟಕದಲ್ಲಿ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅವರ ಅಭ್ಯರ್ಥಿಗಳ ಸೋಲನ್ನು ಒಪ್ಪಿಕೊಂಡಿರುವುದಕ್ಕಾಗಿ ಅಭಿನಂದಿಸುತ್ತೇನೆ.
ರಾಜ್ಯದ ಬೆರಳೆಣಿಕೆಯ ಜಿಲ್ಲೆಗಳಿಗೆ ಸೀಮಿತವಾಗಿರುವ ಮುಖ್ಯಮಂತ್ರಿಗಳ ಕುಟುಂಬ ಇನ್ನಾದರೂ ಎಚ್ಚೆತ್ತುಕೊಂಡು ಕರ್ನಾಟಕದ ರಾಜಕಾರಣದಲ್ಲಿ ಅವರ ಅಲ್ಪ ಪ್ರಮಾಣದ ಇರುವಿಕೆ, ಕೊಡುಗೆ ಹಾಗೂ ವ್ಯಾಪ್ತಿಯನ್ನು ಮನಗಂಡು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ, ಹೆತ್ತವರ, ಶಿಕ್ಷಕರ ಹಾಗೂ ಮಹಾ ಜನತೆಯ ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತೇನೆ. ನಿಮ್ಮ ಈ ರೀತಿಯ ಹೇಳಿಕೆಗಳು ನೀವು ಸಾಂದರ್ಭಿಕವಾಗಿ ಅಲಂಕರಿಸಿರುವ ಶಾಸನ ಬದ್ದ ಸ್ಥಾನಗಳಿಗೆ ಶೋಭೆ ತರುವುದಿಲ್ಲ ಎನ್ನುವ ವಾಸ್ತವ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.