ಕರಾವಳಿ

ಬೈಕಿಗೆ ಡಿಕ್ಕಿಯಾದ ಟೆಂಪೋ: ಕುಂದಾಪುರದ ಹೆಡ್‌ ಕಾನ್‌ಸ್ಟೇಬಲ್‌ ದಾರುಣ ಸಾವು

Pinterest LinkedIn Tumblr

ಉಡುಪಿ: ಕರ್ತವ್ಯ ನಿಮಿತ್ತ ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಯತ್ತ ಸಾಗುತ್ತಿದ್ದ ಹೆಡ್‌ ಕಾನ್‌ಸ್ಟೇಬಲ್‌ ಬೈಕಿಗೆ ಹಿಂದಿನಿಂದ ಟೆಂಪೋ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದ ಹೆಡ್‌ ಕಾನ್‌ಸ್ಟೇಬಲ್‌ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಚಂದ್ರಶೇಖರ್ (42) ಮೃತ ದುರ್ದೈವಿ. ಭಾನುವಾರ ಸಂಜೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಬುಕಳ ಬ್ರಿಡ್ಜ್ ಬಳಿ ಈ ಅಪಘಾತ ನಡೆದಿದ್ದು ಟೆಂಪೋ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದ.

ಓವರ್‌ಟೇಕ್‌ ಬರದಲ್ಲಿ ಟೆಂಪೋ ಚಾಲಕ ಚಂದ್ರಶೇಖರ್ ಚಲಾಯಿಸುತ್ತಿದ್ದ ಬೈಕಿಗೆ ಗುದ್ದಿ ಪರಾರಿಯಾಗಿದ್ದ. ಅಪಘಾತದಿಂದ ಚಂದ್ರಶೇಖರ್ ರಸ್ತೆಗೆ ಬಿದ್ದು ಕುತ್ತಿಗೆಗೆ, ತಲೆಗೆ ಹಾಗೂ ಮೈಕೈಗೆ ಗಂಭೀರ ಗಾಯಗಳಾಗಿದ್ದು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಯಾರೂ ಕೂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿರಲಿಲ್ಲ. ಅದೇ ವೇಳೆ ಉಡುಪಿಯಿಂದ ಚುನಾವಣಾ ವಿಚಾರದಲ್ಲಿ ಸಭೆ ಮುಗಿಸಿ ಆ ಮಾರ್ಗವಾಗಿ ಬರುತ್ತಿದ್ದ ಕುಂದಾಪುರ ಪಿಎಸ್ಐ ಹರೀಶ್ ಆರ್, ಹಾಗೂ ಚಾಲಕ ಲೋಕೇಶ್ ಮತ್ತು ಸಿಬ್ಬಂದಿಗಳು ಕೂಡಲೇ ಚಂದ್ರಶೇಖರ್ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಚಂದ್ರ ಅವರು ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಪ್ರಸ್ತುತ ಮೂರಾನ್ಲು ವರ್ಷಗಳಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದರು.

Comments are closed.