ಕರಾವಳಿ

ಮಂಗಳೂರಿನಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪನೆ : ಕ್ರೀಡಾ ಸಚಿವ ರಹೀಂ ಖಾನ್

Pinterest LinkedIn Tumblr

ಮಂಗಳೂರು ಫೆಬ್ರವರಿ,06: ಮಂಗಳೂರಿನಲ್ಲಿ ರೂ. 150.00 ಲಕ್ಷ ವೆಚ್ಚದಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ರಹೀಂ ಖಾನ್ ಹೇಳಿದರು.

ಅವರು ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಸಕ್ತರು ಮತ್ತು ತರಬೇತುದಾರರೊಡನೆ ಮಾತುಕತೆ ನಡೆಸಿ ಸ್ಟೇಡಿಯಂ ಪರಿಶೀಲನೆ ನಡೆಸಿದರು.

ಕ್ರೀಡಾ ಹಾಸ್ಟೆಲ್‍ಗಳಿಗೆ ತರಬೇತುದಾರರ ನೇಮಕ ಸೇರಿದಂತೆ, ಗುಣಮಟ್ಟದ ಆಹಾರ ಪೂರೈಕೆ ಬಾಲಕ ಬಾಲಕಿಯರ ಪ್ರತ್ಯೇಕ ಹಾಸ್ಟೇಲ್ ಸಹಿತ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಈ ಬಾರಿಯ ಬಜೆಟ್‍ನಲ್ಲಿ 500.00 ಕೋಟಿ ರೂ. ಒದಗಿಸುವಂತೆ ಬಜೆಟ್ ಪೂರ್ವ ಸಭೆಯಲ್ಲಿ ಸರಕಾರಕ್ಕೆ ಬೇಡಿಕೆ ಮಂಡಿಸಲಾಗಿದೆ ಅಹವಾಲು ಆಲಿಸಿ ಉತ್ತರಿಸಿದರು..

ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ ಪ್ರಸ್ತಾವನೆ ಉನ್ನತ ಶಿಕ್ಷಣ ಇಲಾಖೆಯ ಮುಂದಿದೆ. ಉನ್ನತ ಶಿಕ್ಷಣ ಇಲಾಖೆಯ ವರದಿ ಬಂದ ಬಳಿಕ ಮಂದಿನ ಪ್ರಕ್ರಿಯೆಗಳನ್ನು ನಡೆಸಲಾಗುವುದು; ಕ್ರೀಡಾ ವಿಶ್ವವಿದ್ಯಾನಿಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದರು. ಎಲ್ಲರ ಅಹವಾಲು ಆಲಿಸಿದ ಅವರು ಬೆಂಗಳೂರಿನಲ್ಲಿ ಸಂಬಂಧಪಟ್ಟು ಅಧಿಕಾರಿಗಳ ವಿಶೇಷ ಸಭೆ ನಡೆಸಿ ಸಮಸ್ಯೆ ಪರಿಹಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಸಮಗ್ರ ಕ್ರೀಡಾಂಗಣ ಅಭಿವೃದ್ಧಿಗೆ 3.35 ಕೋಟಿ ಅನುದಾನ ಬಿಡುಗಡೆಗೆ ಕೋರಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರೀಡಾ ಇಲಾಖೆ ಅನುದಾನ ಬಳಸಿ ಮಾಡುವ ಕಾಮಗಾರಿ ಅನಿವಾರ್ಯ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದ್ದು, ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಅನುದಾನ ಲೋಪವಾಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಸಚಿವರನ್ನು ವಿನಂತಿಸಿದರು. ಎಮ್ಮೆಕೆರೆಯನ್ನು ಅಂತರರಾಷ್ಟ್ರೀಯ ಈಜುಕೊಳವನ್ನಾಗಿಸಲು ಅನುದಾನದ ಅಗತ್ಯ, ಮತ್ತು ನಗರಕ್ಕೆ ಈಜುಕೊಳದ ಅಗತ್ಯವನ್ನು ಸಭೆಯಲ್ಲಿ ವಿವರಿಸಿದರು.

ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಕಲ್ಪನಾ. ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮಂಜುನಾಥ್ ಭಂಡಾರಿ ಹಾಗೂ ಇಲಾಖೆಯ ವಿವಿಧ ಅಧಿಕಾರಿಗಳು ಕ್ರೀಡಾಸಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಲಾಖೆಯ ಉಪನಿರ್ದೇಶಕರಾದ ಪ್ರದೀಪ್ ಡಿ ಸೋಜಾ ಅವರು ಮಾತನಾಡಿ, ಕ್ರೀಡಾ ಹಾಸ್ಟೆಲ್‍ನಲ್ಲಿ ಕಬ್ಬಡಿ ಕ್ರೀಡಾಳುಗಳ ವಾಸ್ತವ್ಯಕ್ಕೆ ಅವಕಾಶ ಹಾಗೂ ಬಂಟ್ವಾಳದ ಬೆಂಜನಪದವಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರಕಿದ್ದು ಅನುದಾನ ಬಿಡುಗಡೆಗೆ ಕೋರಿದರು.

ಕ್ರೀಡಾಂಗಣ ನಿರ್ವಹಣೆಗೆ ಸಂಪನ್ಮೂಲ ಕೊರತೆ ಇರುವುದನ್ನು ಅವರು ಈ ಸಂದರ್ಭದಲ್ಲಿ ಸಚಿವರ ಗಮನಕ್ಕೆ ತಂದರು. ನೆಹರು ಮೈದಾನದಲ್ಲಿ ಫುಟ್‍ಬಾಲ್ ಅಂಕಣ ಅಭಿವೃದ್ಧಿಗೆ ಸರ್ಕಾರ ಈಗಾಗಲೇ 100 ಲಕ್ಷ ರೂ.ಗಳಿಗೆ ಮಂಜೂರಾತಿ ನೀಡಿದ್ದು ತಾಂತ್ರಿಕ ಕಾರಣಗಳಿಂದಾಗಿ ಕಾರ್ಯಪ್ರಗತಿ ಸ್ಥಗಿತಗೊಂಡಿದ್ದು, ಯೋಜನೆಯನ್ನು ಪರಿಷ್ಕರಿಸಿ 125 ಲಕ್ಷ ರೂ.ಗಳ ಮಂಜೂರಾತಿಗೆ ಅನುಮೋದನೆ ನೀಡಲು ಕಳುಹಿಸಿದ್ದು ಸರ್ಕಾರದ ಮಟ್ಟದಲ್ಲಿದೆ. ಇದನ್ನು ಶೀಘ್ರ ಅನುಮೋದನೆಗಾಗಿ ಸಚಿವರಲ್ಲಿ ಮನವಿ ಮಾಡಿದರು.

Comments are closed.