ಕರಾವಳಿ

`ವಿಶ್ವ ತುಳು ಸಮ್ಮೇಳನ ದುಬಾಯಿ-2018′ : ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸಾಂಪ್ರದಾಯಿಕ ಆಹ್ವಾನ ಪತ್ರಿಕೆ ನೀಡಿಕೆ

Pinterest LinkedIn Tumblr

ಮುಂಬಯಿ, ನವೆಂಬರ್.15: ಡಿಸೆಂಬರ್ 2009ರಲ್ಲಿ ಉಜಿರೆಯಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನ ತುಳುನಾಡ ಐತಿಹಾಸದಲ್ಲೇ ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹಾಸಮ್ಮೇಳನವಾಗಿ ಮೂಡಿತ್ತು.

ಪ್ರತೀಯೋರ್ವ ತುಳುವರ ಹಿರಿಮೆಯ ಸಮ್ಮೇಳನವೂ ಆಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಇವುಗಳ ಸಾರಥ್ಯದಲ್ಲಿ ಮಂಗಳೂರು ಅಡ್ಯಾರ್‌ನಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನವೂ ಭಿನ್ನವಾಗಿಯೇ ಮೂಡಿತ್ತು.

ಇದು ಸಾಗರೋತ್ತರ ದುಬಾಯಿನಲ್ಲಿ ಜರುಗುವ ಸಮ್ಮೇಳನ ಎಲ್ಲಕ್ಕೂ ಮೀರಿ ಮತ್ತೊಂದು ಮೈಲುಗಲ್ಲು ಆಗಿ ಮೂಡಲಿದೆ ಎನ್ನುವ ಆಶಯ ನನಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಎಂದರು.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವದ ಸಮಸ್ಥ ತುಳುವರ ಬೃಹತ್ ಸಮಾವೇಶ ಆಗಿಸಿ ಇದೇ ನ.23-24ರ ದ್ವಿದಿನಗಳಲ್ಲಿ ದುಬಾಯಿ (ಯು‌ಎ‌ಇ) ಅಲ್ಲಿನ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಎನ್‌ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ.ಆರ್ ಶೆಟ್ಟಿ ಘನಾಧ್ಯಕ್ಷತೆಯಲ್ಲಿ ನಡೆಯಲಿರುವ `ವಿಶ್ವ ತುಳು ಸಮ್ಮೇಳನ ದುಬಾಯಿ 2018‘ ಉದ್ಘಾಟಿಸಲಿರುವ ಡಾ| ವೀರೇಂದ್ರ ಹೆಗ್ಗಡೆ ಅವರು ಸಮ್ಮೇಳನದ ಸಂಘಟಕರಿಂದ ಸಾಂಪ್ರದಾಯಿಕ ಆಮಂತ್ರಣ ಪತ್ರಿಕೆ ಸ್ವೀಕರಿಸಿ ಆಶಯ ವ್ಯಕ್ತ ಪಡಿಸಿದರು.

ಇಂದಿಲ್ಲಿ ಗುರುವಾರ ಬೆಳಿಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿನ ಕಚೇರಿಯಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿನೀಡಿ ಕರ್ನಾಟಕರ ರಾಜ್ಯ ತುಳು ಅಕಾಡಮಿ ಅಧ್ಯಕ್ಷ ಎ.ಸಿ ಭಂಡಾರಿ, ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಗೌ| ಪ್ರ| ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ ಖಾವಂದರರಿಗೆ ಆಮಂತ್ರಣ ಪತ್ರಿಕೆ ನೀಡಿ ಸಮ್ಮೇಳನಕ್ಕೆ ಶುಭಶಂಸನೆಗೈಯುವಂತೆ ತಿಳಿಸಿದರು.

`ವಿಶ್ವ ತುಳು ಸಮ್ಮೇಳನ ದುಬಾಯಿ 2018′

ಎನ್‌ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ.ಆರ್ ಶೆಟ್ಟಿ ಘನಾಧ್ಯಕ್ಷತೆಯಲ್ಲಿ ಕೊಲ್ಲಿ ರಾಷ್ಟ್ರದಲ್ಲಿನ ತುಳುವರ ಒಕ್ಕೂಟ, ಸಾಗರೋತ್ತರ ತುಳುವರ ಕೂಟದ ಮುಖ್ಯಸ್ಥ ಹಾಗೂ ದುಬಾಯಿ ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಮತ್ತು ಬಳಗದ ಸಾಂಘಿಕತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲಭಾರತ ತುಳು ಒಕ್ಕೂಟ ಇವುಗಳ ಸಹಯೋಗದಲ್ಲಿ ಆಯೋಜಿಸ ಲಾದ ದ್ವಿದಿನಗಳ `ವಿಶ್ವ ತುಳು ಸಮ್ಮೇಳನ ದುಬಾಯಿ’ ಈ ಬಾರಿ ತುಳು ಸಾಮ್ರಾಜ್ಯದ ಚರಿತ್ರೆಯಲ್ಲಿ ಒಂದು ಐತಿಹಾಸಿಕ ಸಮಾವೇಶ ನಡೆಸಲಿದೆ.

ಈ ವಿಶ್ವ ತುಳು ಸಮ್ಮೇಳನದ ಎರಡು ದಿನಗಳಲ್ಲಿ ವಿಶ್ವದಾದ್ಯಂತದ ತುಳುವರು ಭಾಗವಹಿಸುವರು. ಸಮ್ಮೇಳನದಲ್ಲಿ ತುಳು ರಂಗಭೂಮಿ ಚಲನಚಿತ್ರ ಗೋಷ್ಠಿ, ತುಳು ಸಾಹಿತ್ಯ, ಮಾಧ್ಯಮ, ಕವಿ ಹಾಸ್ಯ ಗೋಷ್ಠಿಗಳು ನಡೆಯಲಿವೆ.

ಪರಶುರಾಮನ ಸೃಷ್ಠಿಯ ತುಳುನಾಡು ಹೆಸರಾಂತ ತವರೂರ ಕರಾವಳಿಯ ವಿವಿಧ ಕಲಾ ತಂಡಗಳ ಸುಮಾರು 200ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡು ಸಾಂಸ್ಕೃತಿಕ ತುಳು ವೈವಭವನ್ನು ನಡೆಸಲಿವೆ. ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಅತ್ತಾವರ `ತುಳುನಾಡ ಪರ್ಬೊಲು’ ನೃತ್ಯ ರೂಪಕ, ಯು‌ಎ‌ಇ ತುಳುವ ಬಳಗವು `ಪಿಲಿನಲಿಕೆ’, ಯು‌ಎ‌ಇ ತುಳುವ ಇದರ ಯಕ್ಷಮಿತ್ರ ಮಂಡಳಿ `ತುಳು ಯಕ್ಷಗಾನ’, ಪಟ್ಲ ಸತೀಶ್ ಶೆಟ್ಟಿ ಬಳಗವು `ಯಕ್ಷನಾಟ್ಯ-ಗಾನ ವೈಭವ’, ಮಂಗಳೂರು ತಂಡವು ತಾಳಮದ್ದಳೆ, ಸನಾತನ ನಾಟ್ಯಾಲಯವು `ಸತ್ಯನಾಪುರತ ಸಿರಿ’ ತುಳು ನೃತ್ಯ ರೂಪಕ, ನಾಟ್ಯನಿಕೇತನ ಉಳ್ಳಾಲ ತಂಡವು `ಏಳ್ವೆರ್ ದೈವೆರ್’ ತುಳುನಾಟ್ಯ ರೂಪಕ, ಗಮ್ಮತ್ ಕಲಾವಿದರು ದುಬೈ ತಂಡವು `ತುಳು ಹಾಸ್ಯ ಪ್ರಹಸನ’, ಡಾ| ರಾಜೇಶ್ ಆಳ್ವ ಬದಿಯಡ್ಕ ತಂಡವು `ಪಾಡ್ದನೆ ಮೇಳ ಬೊಕ್ಕ ಮಾಂಕಾಳಿ ನಲಿಕೆ’, ಪ್ರಶಂಸಾ ಕಾಪು ಬಳಗವು `ಬಲೆ ತೆಲಿಪಾಲೆ’, ಉಮೇಶ್ ಮಿಜಾರ್ ತಂಡವು `ಬಲೆ ತೆಲಿಪಾಲೆ’, ಯು‌ಎ‌ಇ ತುಳುವೆರ್ ತಂಡ `ತುಳು ರಸಮಂಜರಿ’ ಸೇರಿದಂತೆ ತಾಳಮದ್ದಲೆ, ಯಕ್ಷನಾಟ್ಯ ವೈಭವ, ಭೂತರಾಧನೆ, ತುಳು, ರಸಮಂಜರಿ, ಇತ್ಯಾದಿ ತುಳುನಾಡ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.

ಅಬುಧಾಬಿ ಶಾರ್ಜಾ, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿನ ವಿವಿಧ ಘಟಕಗಳು ತುಳು ಜಾನಪದ ನೃತ್ಯ ಮತ್ತು ತುಳು ಸಾಂಸ್ಕೃತಿಕ ವಸ್ತು ಪ್ರದರ್ಶಿಸಲಿದ್ದು ಇದು ಸಮ್ಮೇಳನದ ಕೇಂದ್ರ ಬಿಂದುವಾಗಲಿದೆ. ದೈವಾರಾಧನೆ, ಭೂತಾರಾಧನೆ, ಯಕ್ಷಗಾನ, ಹಾಸ್ಯ, ಚುಟುಕು, ಕವನ, ತುಳುರಂಗ ಭೂಮಿ, ತುಳು ಚಲನಚಿತ್ರ, ಆನಿವಾಸಿ ತುಳುವರು, ಪರದೇಶದ ತುಳುವರ ಗೋಷ್ಠಿಗಳೂ ನಡೆಯಲಿವೆ. ದುಬಾಯಿಯಲ್ಲಿನ ದೇವೇಶ್ ಆಳ್ವ ಇವರ ನೇತೃತ್ವದಲ್ಲಿ ಬಗೆಬಗೆಯ ತಿಂಡಿ ತಿಸಿಸುಗಳನ್ನು ಉಣಬಡಿಸಲಿದ್ದಾರೆ.

ತುಳುನಾಡು, ತುಳುವರ ಸಂಸ್ಕೃತಿ, ಸಮೃದ್ಧಿಯ ಸಂಕೇತ. ತುಳುವರು‌ಎಲ್ಲೇ ನೆಲೆಯಾದರೂ ತುಳುನಾಡ ಮಣ್ಣಿನ ಸುವಾಸನೆ, ಬಾಂಧವ್ಯವನ್ನು ಬಿಟ್ಟಿರಲಾರರು. ಅಂದರೆ ಈ ತೌಳವ ನೆಲದ ವೈಶಿಷ್ಟ್ಯವೇ ಅಂತಹದ್ದು. ಈ ಸಮ್ಮೇಳನದಲ್ಲಿ ಸುಮಾರು 4000 ಜನರು ಪಾಲ್ಗೊಳ್ಳಲಿರುವ ಈ ಭವ್ಯ ವೈಭವದ ವಿಶ್ವ ತುಳು ಸಮ್ಮೇಳನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕುಲಾಸೊ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ತಿಳಿಸಿದ್ದಾರೆ.

(ಚಿತ್ರ / ವರದಿ : ರೊನಿಡಾ ಮುಂಬಯಿ)

Comments are closed.