ಮಂಗಳೂರು, ಅಕ್ಟೋಬರ್.16: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿಮೊಗರು ಗ್ರಾಮದ ಕಡೆಕಾರ್ ಎಂಬಲ್ಲಿರುವ ರಿವರ್ ಡೇಲ್ ಸಮೀಪ ನೇತ್ರಾವತಿ ನದಿ ಕಿನಾರೆ ಬಳಿ ಸಾರ್ವಜನಿಕ ಸ್ಧಳದಲ್ಲಿ ಉಲಾಯಿ- ಪಿದಾಯಿ ( (ಅಂದರ್ ಬಾಹರ್ – ಜೂಜಾಟ) ಆಡುತ್ತಿದ್ದ ಏಳು ಮಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ಸೋಮೇಶ್ವರದ ಯತಿಂಖಾನ ಬಳಿಯ ಕುಂಪಲ ನಿವಾಸಿ ನಾಸಿರ್ (52), ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಫಾರೂಕ್ (54), ಕುಂಜತ್ ಬೈಲ್ ಮರಕಡ ನಿವಾಸಿ ತಯ್ಯೂಬ್ ಹುಸೈನ್ (50), ಉಳ್ಳಾಲ ಉಳಿಯ ನಿವಾಸಿ ಅಬ್ದುಲ್ಲತೀಫ್ (55) ಬೋಳೂರು ಕಟ್ಟೆ ತಿಂಗಳಾಯ ಕಂಪೌಂಡ್ ನಿವಾಸಿ ಪ್ರಶಾಂತ್ (34), ಬೆಂದೂರು ನಿವಾಸಿ ನೈಜಿಲ್ ಮೊಂತೆರೋ (36) ಹಾಗೂ ಬೋಳಾರ ಎಮ್ಮೆಕೆರೆ ನಿವಾಸಿ ಝಮೀರ್ ಅಹ್ಮದ್ (42) ಎಂದು ಗುರುತಿಸಲಾಗಿದೆ.
ಆರೋಪಿಗಳು ದಿನಾಂಕ: 15-10-2018 ರಂದು ಜಪ್ಪಿಮೊಗರು ಸಮೀಪದ ನೇತ್ರಾವತಿ ಸೇತುವೆ ಕೆಳಭಾಗದಲ್ಲಿರುವ ರಿವರ್ ಡೇಲ್ ಸಮೀಪದ ನದಿ ಕಿನಾರೆ ಬಳಿ ಉಲಾಯಿ ಪಿದಾಯಿ ಆಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಸಿಕ್ಕಿದ ಖಚಿತ ಮಾಹಿತಿ ಮೇರೆ ಸ್ಥಳಕ್ಕೆ ದಾಳಿ ನಡೆಸಿ ಜುಗಾರಿ ಆಟ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 6 ಮೊಬೈಲ್ ಹ್ಯಾಂಡ್ ಸೆಟ್ ಹಾಗೂ ಉಲಾಯಿ-ಪಿದಾಯಿ [ಅಂದರ್-ಬಾಹರ್] ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಒಟ್ಟು 30,090/- ರೂಪಾಯಿ ನಗದು ಹಣ ಮತ್ತು ಆಟಕ್ಕೆ ಬಳಸಿದ 52 ಇಸ್ಪೀಟ್ ಕಾರ್ಡ್ಗಳನ್ನು ಹಾಗೂ 4 ಮೋಟಾರ್ ಸೈಕಲ್ ಗಳನ್ನು ಪೊಲೀಸರು ಸ್ವಾದೀನ ಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಸಹಾಯಕ ಆಯುಕ್ತರಾದ ರಾಮರಾವ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಶೋಕ್ ಪಿ., ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್. ಹಾಗೂ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Comments are closed.