ಮಂಗಳೂರು / ಬೆಳ್ತಂಗಡಿ, ಆಗಸ್ಟ್.18 :ಚಾರ್ಮಾಡಿ ಘಾಟಿಯಲ್ಲಿ ಮಾರ್ಗ ಮಧ್ಯೆ ಲಾರಿಯೊಂದು ಪಲ್ಟಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನೂರಾರು ವಾಹನಗಳು ಸಂಚಾರಿಸಲು ಸಾಧ್ಯವಾಗದೇ ಸುಮಾರು ಐದು ಕಿ.ಮೀ ವರೆಗೆ ಸರತಿ ಸಾಲಿನಲ್ಲಿ ನಿಂತಿದ್ದು, ಶನಿವಾರ ಬೆಳಗ್ಗಿನಿಂದ 6 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಾವಿರಾರು ಜನರು ನಿಂತಲ್ಲೇ ನಿಂತು ಪರದಾಡಬೇಕಾಯಿತು.
ತೀವ್ರ ಮಳೆಯಿಂದ ಹಾನಿಗೊಂಡಿರುವ ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟಿಯಲ್ಲಿ ಸಂಪರ್ಕ ಸಾಧ್ಯವಿಲ್ಲದೇ ವಾಹನ ಸಂಚಾರ ನಿಷೇಧಗೊಂಡ ಕಾರಣ ಹೆಚ್ಚಿನ ವಾಹನಗಳು ಚಾರ್ಮಾಡಿ ಘಾಟ್ನಲ್ಲಿ ಬರುತ್ತಿವೆ. 10 ನೇ ತಿರುವಿನಲ್ಲಿ ಟ್ರಕ್ಕೊಂದು ರಸ್ತೆ ಮಧ್ಯದಲ್ಲೇ ಪಲ್ಟಿಯಾದ ಕಾರಣ ಟ್ರಾಫಿಕ್ ಟ್ರಾಫಿಕ್ ಜಾಮ್ ಉಂಟಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ಬೃಹತ್ ವಾಹನಗಳಿಗೆ ಸಂಚಾರಕ್ಕೆ ನಿಷೇಧ ಹೇರಿದರೂ ವಾಹನಗಳು ಸಂಚರಿಸುತ್ತಿರುವುದು ಇತರ ವಾಹನಗಳಿಗೆ ಭಾರೀ ಸಮಸ್ಯೆ ತಂದೊಡ್ಡುತ್ತಿದೆ. ಬಸ್ ಮತ್ತು ಕಾರುಗಳಲ್ಲಿ ಧರ್ಮಸ್ಥಳದತ್ತ ಬರುತ್ತಿದ್ದ ಸಾವಿರಾರು ಯಾತ್ರಿಕರು ಪರದಾಡಿದರು. ಮಳೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿತು.
ಶಿರಾಡಿ ಘಾಟಿ ಮತ್ತು ಸಂಪಾಜೆ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿರುವ ಹಿನ್ನೆಲೆ ಯಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಬೆಂಗಳೂರಿಗೆ ಸಂಚರಿಸುವ ವೊಲ್ವೋ ಬಸ್ಗಳು ಹಗಲಲ್ಲಿ ಕಾರ್ಕಳ, ಕುದುರೆಮುಖ,
ಕಳಸ, ಮೂಡಿಗೆರೆ, ಹಾಸನ ಮೂಲಕ ಸಾಗಬೇಕಾಗಿದೆ.
Comments are closed.