ಕರ್ನಾಟಕ

ಸುದ್ದಿ ವಾಹಿನಿ, ಸಾಮಾಜಿಕ ಜಾಲತಾಣಗಳಲ್ಲಿ ವಾಜಪೇಯಿ ಇನ್ನಿಲ್ಲ ಎಂಬ ವದಂತಿ ! ಶ್ರದ್ಧಾಂಜಲಿ ಸಲ್ಲಿಸುವ ಟ್ವೀಟ್ ಡಿಲೀಟ್ ಮಾಡಿದ ಬಿಎಸ್‌ವೈ

Pinterest LinkedIn Tumblr

ಬೆಂಗಳೂರು: ಅಜಾತ ಶತ್ರು, ನವ ಭಾರತದ ಹರಿಕಾರ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮಧ್ಯಾಹ್ನದ ಹೊತ್ತಿಗೆ ವಾಜಪೇಯಿ ಇನ್ನಿಲ್ಲ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಸುದ್ದಿ ವಾಹಿನಿಗಳಲ್ಲಿಯೂ ಸುದ್ದಿಯಾಗಿ, ಜನರು ಗೊಂದಲಕ್ಕೀಡಾದರು.

ವಾಜಪೇಯಿ ಅವರ ಆರೋಗ್ಯ ಸಂಬಂಧ ಏಮ್ಸ್ ಆಸ್ಪತ್ರೆಯ ವೈದ್ಯರು ಯಾವುದೇ ಅಧಿಕೃತ ಬುಲೆಟಿನ್ ಹೊರಡಿಸಿಲ್ಲ. ಅಷ್ಟರಲ್ಲೇ, ಸುದ್ದಿ ವಾಹಿನಿಗಳಲ್ಲಿ ಇದು ಬಿತ್ತರವಾಗುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂ ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸುವ ಟ್ವೀಟ್ ಮಾಡುವ ಮೂಲಕ ಪ್ರಮಾದ ಎಸಗಿದ್ದಾರೆ.

‘ನನಗೆ ಪ್ರೇರಣೆಯಾಗಿದ್ದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ಮನಸ್ಸು ಭಾರವಾಗಿದೆ. ಶ್ರೇಷ್ಠ ನಾಯಕ ಹಾಗೂ ಅಪ್ರತಿಮ ದೇಶಭಕ್ತರಾಗಿದ್ದ ಅವರ ನಿಧನವು ದೇಶಕ್ಕೆ ಬಹುದೊಡ್ಡ ನಷ್ಟ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ’ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದರು. ಈ ಪ್ರಮಾದದ ಬಳಿಕ ಬಿಎಸ್‌ವೈ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಹಲವು ಸುದ್ದಿವಾಹಿನಿಗಳು ಮಧ್ಯಾಹ್ನವೇ ವಾಜಪೇಯಿ ನಿಧನ ಎಂದು ಸುದ್ದಿ ಬಿತ್ತರಿಸಿ, ಗೊಂದಲ ಸೃಷ್ಟಿಸಿದ್ದವು. ಆಗಸ್ಟ್ 14ರಂದು ಛತ್ತೀಸಗಢ ರಾಜ್ಯಪಾಲರಾಗಿದ್ದ ಬಲರಾಮದಾಸಜೀ ಟಂಡನ್ ಅವರ ನಿಧನದ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದ “ಅವರು ಈಗ ನಮ್ಮೊಂದಿಗಿಲ್ಲ, ಅವರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ” ಎಂದಿರುವುದನ್ನೇ, ಪದೇ ಪದೇ ತೋರಿಸಿ ಗೊಂದಲ ಸೃಷ್ಟಿಸಿದ್ದವು.

ವಿವಿಧ ಮಾಧ್ಯಮಗಳಲ್ಲಿಯೂ ಈ ವದಂತಿ ಹಬ್ಬುತ್ತಿರುವಂತೆಯೇ, ಸಾರ್ವಜನಿಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಅವರೂ ಮೊದಲೇ ಟ್ವೀಟ್ ಮಾಡಿ, ಬಳಿಕ ಕ್ಷಮೆ ಯಾಚಿಸಿದ್ದಾರೆ.

Comments are closed.