ಕರಾವಳಿ

‘ಬೃಂದಾವನಸ್ಥರಾದ ಶೀರೂರು ಶ್ರೀ’; ಸಕಲ ಧಾರ್ಮಿಕ ವಿಧಿವಿಧಾನ: ತಡವಾಗಿಯೂ ಬಂದ್ರು ಮೂವರು ಯತಿಗಳು

Pinterest LinkedIn Tumblr

ಉಡುಪಿ: ಇಲ್ಲಿನ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಇಂದು ವಿಧಿವಶರಾಗಿದ್ದು ಅವರ ಅಂತಿಮ ಸಂಸ್ಕಾರ ಸಕಲ ಧಾರ್ಮಿಕ ವಿಧಿವಿಧಾನದಂತೆ ಮಾಧ್ವ ಸಂಪ್ರದಾಯದಂತೆ ಗುರುವಾರ ರಾತ್ರಿ ವೇಳೆ ಹಿರಿಯಡಕದ ಶೀರೂರು ಮೂಲ ಮಠದ ಆವರಣದಲ್ಲಿ ನಡೆದಿದ್ದು ಜನರ ಸ್ವಾಮೀಜಿ ಎಂದೇ ಖ್ಯಾತರಾಗಿದ್ದ ಶ್ರೀಗಳು ಬೃಂದಾವನಸ್ಥರಾಗಿದ್ದಾರೆ.

ಹತ್ತಿ ಬುಟ್ಟಿಯಲ್ಲಿ ಪಾರ್ಥೀವ ಶರೀರ…
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶಿರೂರು ಶ್ರೀಗಳ ಪಾರ್ಥಿವ ಶರೀರವನ್ನು ಹತ್ತಿಯ ಬುಟ್ಟಿಯಲ್ಲಿ ಇರಿಸಲಾಯಿತು. ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಬುಟ್ಟಿಯಲ್ಲಿ ಪಾರ್ಥೀವ ಶರೀರವಿಟ್ಟು ಮಠದ ಭಕ್ತರು ಮಣೀಪಾಲ ಶವಾಗಾರದಿಂದ ಹೊತ್ತು ಬಂದರು. ಅಲ್ಲಿಂದ ಉಡುಪಿ ಶ್ರೀಕೃಷ್ಣ ಮಠದವರೆಗೂ ಪುಷ್ಪಾಲಂಕೃತ ಜೀಪಿನಲ್ಲಿ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಗಿದ್ದು ಉಡುಪಿ ಮಠದ ಸಂಪ್ರದಾಯದಂತೆ ಶ್ರೀಗಳ ಶರೀರವನ್ನು ಕೃಷ್ಣಮಠಕ್ಕೆ ಕೊಂಡೊಯ್ಯಲಾಯಿತು.

ಗೋವಿಂದ ನಾಮಾವಳಿ……
ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ಶ್ರೀಗಳ ಪಾರ್ಥೀವ ಶರೀರವನ್ನು ಕೃಷ್ಣ ಮಠಕ್ಕೆ ತರಲಾಯಿತು. ಕೃಷ್ಣ ಮಠದಲ್ಲಿ ಎಲ್ಲಾ ಗಂಟೆ ಜಾಗಟೆಗಳನ್ನು ಮೊಳಗಿಸಿ ಶ್ರೀಗಳಿಗೆ ಅಂತಿಮ ಗೌರವ ಅರ್ಪಿಸಲಾಯಿತು. ಬಳಿಕ ರಥಬೀದಿಯಲ್ಲಿ ಶಿರೂರು ಶ್ರೀಗಳ ಪಾರ್ಥೀವ ಶರೀರವನ್ನು ಪ್ರದಕ್ಷಿಣೆ ಹಾಕಿಸಲಾಯಿತು. ಬಳಿಕ ಕನಕನ ಕಿಂಡಿಯ ಮೂಲಕ ಶ್ರಿಕೃಷ್ಣನ ದರ್ಶನ ಮಾಡಿಸಲಾಯಿತು. ಇನ್ನು ಶಿರೂರು ಶ್ರೀಗಳ ಪಾರ್ಥೀವ ಶರೀರ ಕೃಷ್ಣ ಮಠಕ್ಕೆ ಆಗಮಿಸುತ್ತಿದ್ದಂತೆ ಅಂತಿಮ ದರ್ಶನಕ್ಕಾಗಿ ನೂರಾರು ಜನರು ಕಾದು ಕುಳಿತಿದ್ದರು. ಉಡುಪಿ ಶ್ರಿಕೃಷ್ಣ ಮಠದ ಆವರಣದಲ್ಲಿ ಸೇರಿದ ನೂರಾರು ಭಕ್ತರು, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಚಂದ್ರಮೌಳೇಶ್ವರನ ದರ್ಶನದ ಬಳಿಕ ಉಡುಪಿಯಿಂದ 25 ಕಿಲೋಮೀಟರ್ ದೂರವಿರುವ ಹಿರಿಯಡ್ಕದಲ್ಲಿರುವ ಶಿರೂರು ಮೂಲ ಮಠಕ್ಕೆ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಮೂಲಮಠದಲ್ಲಿ ಅಂತಿಮ ವಿಧಿ….
ಮೂಲ ಮಠದಲ್ಲಿ 10 ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿರೂರು ಮೂಲ ಮಠದ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡಿಸಿ, ಆರತಿ ಬೆಳಗಲಾಯಿತು. ಶ್ರೀಗಳ ಪೂಜಾ ಸಾಮಾಗ್ರಿಗಳನ್ನು ಶರೀರದ ಜೊತೆ ಇರಿಸಿ, ಬೃಂದಾವನ ನಿರ್ಮಿಸಲಾಯಿತು. ಅದರಲ್ಲಿ ಉಪ್ಪು ಹತ್ತಿ ಕಾಳು ಮೆಣಸು ಕರ್ಪೂರಗಳನ್ನು ಹಾಕಿ ಶಿರೂರು ಮೂಲ ಮಠದ ಸ್ವರ್ಣಾ ನದಿ ತಟದಲ್ಲಿ ಸಮಾಧಿ ಮಾಡಲಾಯಿತು. ಮಧ್ವ ಸಂಪ್ರದಾಯದಂತೆ ಮೂಲಮಠದ ಬೃಂದಾವನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಶಿರೂರು ಮಠದ ದ್ವಂದ್ವ ಮಠ ಸೋದೆ ಮಠದವರು ಎಲ್ಲಾ ಕ್ರಿಯಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ತಡವಾಗಿ ಆಗಮಿಸಿದ್ರು ಮೂವರು ಯತಿಗಳು..
ಶೀರೂರು ಮೂಲಮಠಕ್ಕೆ ತಡವಾಗಿ ಮೂವರು ಯತಿಗಳು ಆಗಮಿಸಿದ್ದಾರೆ. ಅದಮಾರು, ಕಾಣಿಯೂರು ಹಾಗೂ ಸೋದೆ ಶ್ರೀಗಳು ಆಗಮಿಸಿ ಅಂತಿಮ ದರ್ಶನ ಪಡೆದರು.

Comments are closed.