ಬೆಂಗಳೂರು: ಹುಣಸಮಾರನಹಳ್ಳಿಯಲ್ಲಿನ ಮಠದಲ್ಲಿ ರಾಸಲೀಲೆ ನಡೆಸಿದ ಆರೋಪ ಕೇಳಿ ಬಂದ ಬಳಿಕ ತಲೆಮರೆಸಿಕೊಂಡಿದ್ದ ದಯಾನಂದ ಸ್ವಾಮೀಜಿ ಪ್ರತ್ಯಕ್ಷರಾಗಿದ್ದಾರೆ.
ದೇವಣಾಪುರ ಮಹಾ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿದ್ದ ದಯಾನಂದ ಸ್ವಾಮೀಜಿ ನಟಿಯೊಂದಿಗೆ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಅ. 26 ರಂದು ಬಯಲಾಗಿತ್ತು. ಅದಾದ ನಂತರ ದಯಾನಂದ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಈಗ ಮತ್ತೆ ಬಂದಿದ್ದಾರೆ.
ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿರುವ ದಯಾನಂದ ಸ್ವಾಮೀಜಿ, ಮಾಧ್ಯಮಗಳಲ್ಲಿ ಬಂದಿದ್ದನ್ನು ನೋಡಿ ಮನಸ್ಸಿಗೆ ನೋವಾಗಿದೆ. 2014 ರಲ್ಲಿ ಪ್ರೀ ಪ್ಲಾನ್ ಮಾಡಿ ಈ ವಿಡಿಯೋ ಮಾಡಲಾಗಿದೆ. ಇದರ ಬಗ್ಗೆ ನನ್ನಲ್ಲಿ ಸಾಕಷ್ಟು ಸಾಕ್ಷಿಗಳಿವೆ. 2014ರ ಜನವರಿ 6 ರಂದು ಕೆಲವರು ಮಾರ್ಗ ಮಧ್ಯೆ ಅಡ್ಡಗಟ್ಟಿ ವಿಡಿಯೋ ಇದೆ ಎಂದು ಬ್ಲಾಕ್ ಮೇಲ್ ಮಾಡಿ ನನಗೆ ವಿಡಿಯೋ ತೋರಿಸಿದ್ದರು. ಇದು ಬಹಿರಂಗವಾಗಬಾರದು ಎಂದರೆ 5 ಕೋಟಿ ಹಣ ಕೊಡಬೇಕು. ಇಲ್ಲವಾದರೆ ಈ ವಿಡಿಯೋವನ್ನು ಎಲ್ಲ ಕಡೆ ಕಳುಹಿಸಿ ನಿಮ್ಮ ಮರ್ಯಾದೆ ಹಾಳು ಮಾಡುತ್ತೇವೆ ಎಂದು ಸೂರ್ಯ ಎಂಬ ವ್ಯಕ್ತಿ ಬೆದರಿಕೆ ಹಾಕಿದ್ದರು ಎಂದು ದಯಾನಂದ ಸ್ವಾಮೀಜಿ ವಿಡಿಯೋದಲ್ಲಿ ಹೇಳಿದ್ದಾರೆ.
ಕಳೆದ 2014ರಲ್ಲಿ ರಾಸಲೀಲೆಯ ವಿಡಿಯೋ ಮಾಡಿಕೊಂಡು ಮಹೇಶ, ಹಿಮಾಚಲ, ಶಂಕರ್, ಸೂರ್ಯ, ಧರ್ಮೇಂದ್ರ ಎನ್ನುವವರು ನನ್ನ ಬಳಿ 85 ಲಕ್ಷ ರೂಪಾಯಿ ಹಣ ತೆಗೆದುಕೊಂಡಿದ್ದಾರೆ ಎಂದು ದಯಾನಂದ ಸ್ವಾಮಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಆರಂಭದಲ್ಲಿ ವಿಡಿಯೋ ಇಂಟರ್ನೆಟ್ನಲ್ಲಿ ಬಿಡುಗಡೆಗೊಳಿಸುವುದಾಗಿ ಬೆದರಿಸಿ ಐದು ಕೋಟಿ ರೂಪಾಯಿ ಹಣ ನೀಡುವಂತೆ ನನ್ನ ಬಳಿ ಇವರು ಡೀಲ್ ಇಟ್ಟಿದ್ದರು. ಆದರೆ, ಐದು ಕೋಟಿ ಕೊಡಲು ಸಾಧ್ಯವಿಲ್ಲವೆಂದಾಗ ಎರಡು ಕೋಟಿ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು ಎಂದು ತಿಳಿಸಿದ್ದಾರೆ.
ಕೊನೆಗೆ ನಾನು 45 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಒಪ್ಪಿಕೊಂಡೆ. ನಂತರ ಅವರಿಗೆ 45 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದೆ. ಆದರೆ, ಪದೇ ಪದೇ ಹಣಕ್ಕಾಗಿ ಒತ್ತಾಯಿಸಿದಾಗ ಇನ್ನೂ 40 ಲಕ್ಷ ರೂಪಾಯಿಗಳನ್ನು ನೀಡಿದ್ದೆ. ಒಟ್ಟು 85 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಮಹೇಶ, ಹಿಮಾಚಲ, ಶಂಕರ್, ಸೂರ್ಯ, ಧರ್ಮೇಂದ್ರ ಇವರ ಕಿರುಕುಳ ತಾಳದೆ ವಿಷಸೇವಿಸಿದೆ. ನನಗೆ ತುಂಬಾ ತೊಂದರೆ ಕೊಟ್ಟು ಇದೀಗ ನನ್ನ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಜಂಗಮ ಮಠದ ದಯಾನಂದ ಸ್ವಾಮಿ ತಿಳಿಸಿದ್ದಾರೆ.
Comments are closed.