ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ‘ರೆಬಲ್’ ಆಗಿರುವ ಮಾಜಿ ಸಚಿವ ಅಂಬರೀಷ್ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ದುಬೈನಲ್ಲಿ ಕಾರ್ಯ ಕ್ರಮವೊಂದರಲ್ಲಿ ಅಂಬರೀಷ್ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸತೀಶ್ ರೆಡ್ಡಿ ಸಹ ಜತೆಗಿದ್ದು, ಪಕ್ಷಕ್ಕೆ ಆಗಮಿಸಿದರೆ ರಾಜ್ಯಸಭೆಗೆ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಅಂಬರೀಷ್ ಬಿಜೆಪಿಗೆ ಆಗಮಿಸಬೇಕು ಎಂಬ ಪ್ರಯತ್ನ ಕಳೆದ ಮೂರು ತಿಂಗಳಿಂದಲೇ ನಡೆಯುತ್ತಿದೆ.
ವೈಯಕ್ತಿಕ ಆಸಕ್ತಿ ಹಾಗೂ ಒಕ್ಕಲಿಗ ಸಮುದಾಯದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಲು ಆರ್. ಅಶೋಕ್ ಪ್ರಯತ್ನದಲ್ಲಿದ್ದಾರೆ. 3 ತಿಂಗಳ ಹಿಂದೊಮ್ಮೆ ಅಂಬರೀಷ್ರನ್ನು ಭೇಟಿಯಾಗಿ ಆಹ್ವಾನಿಸಿದ್ದರೂ ಆ ಸಮಯದಲ್ಲಿ ಒಪ್ಪಿರಲಿಲ್ಲ.
ಇದೀಗ ಮಾಜಿ ಸಿಎಂ ಎಸ್.ಎಂ. ಕೃಷ್ಣ ಕಾಂಗ್ರೆಸ್ ತೊರೆದಾಗಿನಿಂದ ಅಂಬರೀಷ್ ಅಸಮಾಧಾನ ಹೆಚ್ಚಾಗಿದೆ. ಈ ಸಮಯದಲ್ಲಿ ಪಕ್ಷಕ್ಕೆ ಆಹ್ವಾನಿಸಿದರೆ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿ ಮಾತುಕತೆ ನಡೆದಿದೆ. ಧನಾತ್ಮಕ ವಾತಾವರಣ ಮೂಡಿದರೆ ಪಕ್ಷದಿಂದ ಆಹ್ವಾನ ರವಾನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯ ರಾಜಕೀಯದಲ್ಲಿ ತಮ್ಮದೇ ಬಣ ಸೃಷ್ಟಿಸಿಕೊಂಡು ಪರಸ್ಪರರ ವಿರುದ್ಧ ಹರಿಹಾಯುವ ಎಸ್.ಎಂ. ಕೃಷ್ಣ ಹಾಗೂ ಅಂಬರೀಷ್ ಇಬ್ಬರೂ ಪಕ್ಷಕ್ಕೆ ಆಗಮಿಸಿದರೆ ಏನು ಮಾಡುವುದು ಎಂಬ ಜಿಜ್ಞಾಸೆಯೂ ಮೂಡಿದೆ. ಇವೆಲ್ಲ ವಿಚಾರ ಹಾಗೂ ಇತ್ತೀಚೆಗಷ್ಟೆ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಕುರಿತ ವಿವಾದದ ಬಗ್ಗೆ ರ್ಚಚಿಸಲು ಫೆ.13ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ಸೇರಲಿದೆ. ಬಿಎಸ್ವೈ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ 3ನೇ ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳು ಹೊರಬೀಳಲಿವೆ.
Comments are closed.