ಬೆಂಗಳೂರು: ನಗರದ ಪ್ರತಿಷ್ಠಿತ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ಹೊಸ ವರ್ಷಾಚರಣೆ ವೇಳೆ ಕೆಲವು ಯುವಕರು ಕುಡಿದ ಅಮಲಿನಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಶಂಕಿತ ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ಸಿಸಿಟಿವ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ನಂತರ ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರು ದೂರು ನೀಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಹೊಸ ವರ್ಷಾಚರಣೆ ದಿನ ಭದ್ರತೆಗಾಗಿ ನೂರಾರು ಪೊಲೀಸರು ಹಾಗೂ 25ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದ್ದರೂ ಇಂತಹ ಘಟನೆ ಘಟಿಸಿದ್ದು ದುರದೃಷ್ಟಕರ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ನಾವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಹೊಸ ವರ್ಷ ಮತ್ತು ಕ್ರಿಸ್ ಮಸ್ ಸಂದರ್ಭದಲ್ಲಿ ಇಂತಹ ಘಟನೆಗಳು ಘಟಿಸಿತ್ತವೆ ಎಂದು ಪರಮೇಶ್ವರ ವಿಷಾದ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆಯಲ್ಲಿ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಯುವಕರ ಗುಂಪಿನಿಂದ ಕೆಲವು ಮಹಿಳೆಯರ ಮಾನಭಂಗ ನಡೆಯಿತು. ಅಳುತ್ತಿದ್ದ ಈ ಮಹಿಳೆಯರು ಮಹಿಳಾ ಪೊಲೀಸರತ್ತ ಧಾವಿಸಿ ದೂರು ನೀಡಿದ್ದು ಕಂಡು ಬಂತು ಎಂದು ಪತ್ರಿಕೆಯೊಂದು ಕೆಲವು ಮಹಿಳೆಯರು ಪೊಲೀಸರು ದೂರು ನೀಡುತ್ತಿದ್ದ ಫೊಟೋ ಸಹಿತವಾಗಿ ವರದಿ ಮಾಡಿತ್ತು.
ಹೊಸ ವರ್ಷದ ಉದಯ ಹತ್ತಿರವಾಗುತ್ತಿದ್ದಂತೆ ಎಲ್ಲೆಲ್ಲಿಂದಲೋ ಕಾರು, ಬೈಕ್ಗಳಲ್ಲಿ ಬಂದ ಪಡ್ಡೆ ಹುಡುಗರ ದಂಡು ಪುಂಡಾಟಕ್ಕೆ ಶುರುವಿಟ್ಟುಕೊಂಡಿತು. ಯುವತಿಯರು ಕಾಣುತ್ತಲೇ ಹೊಲಸು ಭಾಷೆಯಲ್ಲಿ ಕೇಕೆ ಹಾಕುವುದು, ಗುಂಪು ಗುಂಪಾಗಿ ಅವರತ್ತ ನುಗ್ಗಿ ಹಿಡಿದು ಎಳೆದಾಡುವುದು, ಎಲ್ಲೆಂದರಲ್ಲಿಗೆ ಕೈ ಹಾಕುತ್ತಿದ್ದರು ಎನ್ನಲಾಗಿದೆ.
Comments are closed.