Photo: Ashok Belman
ದುಬೈ: ದುಬೈನ ಧ್ವನಿ ಪ್ರತಿಷ್ಟಾನ ಸಂಸ್ಥೆ ಏರ್ಪಡಿಸಿದ್ದ “ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ” ಶುಕ್ರವಾರ ಶಾರ್ಜಾದ ಯಕ್ಸ್ಪೋ ಸೆಂಟರ್ ನಲ್ಲಿ ಬಹಳ ಯಶಸ್ವಿಯಾಗಿ ಮೂಡಿ ಬಂತು. ಸಮ್ಮೇಳನವನ್ನು ಜಾನಪದ ತಜ್ಞ ಡಾ. ಗೊ.ರು. ಚೆನ್ನಬಸಪ್ಪ ಉದ್ಘಾಟಿಸಿದರು.
ಸಮ್ಮೇಳನದಲ್ಲಿ ‘ಅನಿವಾಸಿಯ ಅಂತರಾತ್ಮ’ ಗೋಷ್ಠಿಯಲ್ಲಿ ಮಾತನಾಡಿದ ಕುವೈತ್ ತುಳು ಕೂಟದ ಅಧ್ಯಕ್ಷ ಎಲಿಯಾಸ್ ಸಾಂಕ್ಟಿಸ್, ‘ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸವಾಗಿರುವ ಕನ್ನಡಿಗರ ಹಿತರಕ್ಷಣೆಗಾಗಿ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಬೇಕು’ ಎಂದು ಮನವಿ ಮಾಡಿದರು.
ಈಚೆಗೆ ಕುವೈತ್ನಲ್ಲಿ ಸತ್ಯನಾರಾಯಣ ಪೂಜೆ ಮಾಡಿ ದೇಶದಿಂದಲೇ ಹೊರದಬ್ಬಿಸಿಕೊಂಡ ಕನ್ನಡಿಗರ ಸಂಕಷ್ಟವನ್ನು ಪ್ರಸ್ತಾಪಿಸಿದ ಅವರು, ‘ಇಂತಹ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆಗಾಗಿ ದೇಶದ ದೂತಾವಾಸದ ಮೊರೆ ಹೋಗುವುದು ಸುಲಭವಲ್ಲ’ ಎಂದರು.
ಒಮನ್ನ ಉದ್ಯಮಿ ಶಶಿಧರ ಶೆಟ್ಟಿ, ಕತಾರ್ನ ತುಳು ಕೂಟದ ಅಧ್ಯಕ್ಷ ರವಿ ಶೆಟ್ಟಿ ಅವರೂ ಮಾತನಾಡಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅಬುದಾಭಿಯ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ‘ಅನಿವಾಸಿ ಭಾರತೀಯರಿಗೆ ಮತದಾನದ ಅಧಿಕಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ಸಾಹಿತ್ಯ ಮತ್ತು ಸಮಕಾಲೀನತೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಪಂಪನ ಕಾಲದಿಂದಲೂ ಕನ್ನಡ ಸಮಕಾಲೀನ ಪ್ರಜ್ಞೆಯನ್ನು ಉಳಿಸಿಕೊಂಡು ಬಂದಿದೆ’ ಎಂದರು. ‘ಕನ್ನಡ ಭಾಷೆಯನ್ನು ತಂತ್ರಜ್ಞಾನದ ಹೊಸ ಅಗತ್ಯಗಳಿಗೆ ಒಗ್ಗಿಸುವ ಕೆಲಸ ಆಗಬೇಕು’ ಎಂದೂ ಅವರು ಆಶಿಸಿದರು.
ಗೋಷ್ಠಿಯಲ್ಲಿ ದುಬೈನ ಲೇಖಕರಾದ ಸುಧಾಕರ ರಾವ್ ಪೇಜಾವರ, ಗೋಪಿನಾಥ ರಾವ್ ಮತ್ತು ಅಬುದಾಭಿಯ ಬಿ.ಕೆ. ಗಣೇಶ್ ರೈ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜಾನಪದ ತಜ್ಞ ಡಾ. ಗೊ.ರು. ಚೆನ್ನಬಸಪ್ಪ ಅವರು, ದುಬೈನಲ್ಲಿ ಕನ್ನಡದ ಪ್ರಜ್ಞೆಯನ್ನು ವಿಸ್ತರಿಸುತ್ತಿರುವ ಧ್ವನಿ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.
ಕವಿ ಜರಗನಗಳ್ಳಿ ಅಧ್ಯಕ್ಷತೆಯಲ್ಲಿ ನಡೆದ ‘ಕಾವ್ಯಧಾರೆ’ ಕವಿಗೋಷ್ಠಿಯಲ್ಲಿ ಇರ್ಷಾದ್ ಮೂಡುಬಿದಿರೆ, ಆರತಿ ಘಾಟಿಕರ್, ಪ್ರಕಾಶ್ ರಾವ್ ಪಯ್ಯಾರ್, ಅವನೀಶ್ ಭಟ್ ಮುಂತಾದ ಕವಿಗಳು ಹನಿಗವನ ವಾಚನ ಮಾಡಿದರು. ಕಾವೇರಿ ಸಂಕಷ್ಟವೂ ಇಲ್ಲಿಯೂ ಪ್ರಸ್ತಾಪವಾಯಿತು.
‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅಧ್ಯಕ್ಷತೆಯಲ್ಲಿ ನಡೆದ ‘ಮಾಧ್ಯಮ ಮತ್ತು ಇತ್ತೀಚಿನ ಸವಾಲುಗಳು’ ಗೋಷ್ಠಿಯಲ್ಲಿ ಪತ್ರಕರ್ತರಾದ ಶಿವಾನಂದ ತಗಡೂರು, ವಾಲ್ಟರ್ ನಂದಳಿಕೆ, ವಿನಯ್ ಕುಮಾರ್ ನಾಯಕ್ ಭಾಗವಹಿಸಿದ್ದರು. ಜಾಹೀರಾತು ಮತ್ತು ಸುದ್ದಿಯ ನಡುವಿನ ಅಂತರ ತೆಳುವಾಗುತ್ತಿರುವ ಬಗ್ಗೆ ಗೋಷ್ಠಿಯಲ್ಲಿ ಆತಂಕ ವ್ಯಕ್ತವಾಯಿತು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ‘ಧ್ವನಿ ಶ್ರೀ ರಂಗ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅವರ ಅನುಪಸ್ಥಿತಿಯಲ್ಲಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಸ್ವೀಕಾರ ಮಾಡಿದರು. ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಉಮಾಶ್ರೀ ನಡೆದು ಬಂದ ದಾರಿಯನ್ನು ಪರಿಚಯಿಸಿದರು.
ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ಯುಎಇ ಎಕ್ಸ್ಚೇಂಜ್ ಅಧ್ಯಕ್ಷ ವೈ. ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಪುರಸ್ಕರಿಸಲಾಯಿತು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರುಗೇಶ್ ಗಾಜರೆ ವಂದಿಸಿದರು. ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸಮ್ಮೇಳನಕ್ಕೆ ಕಳೆ ತುಂಬಿದರು.
Comments are closed.