Karavali

ಕುಂದಾಪುರ, ಬೈಂದೂರು ಕಡಲಾಮೆಗಳ ‘ಹಾಟ್‌ಸ್ಫಾಟ್’ | ಅಳಿವಿನಂಚಿನಲ್ಲಿರುವ ‘ಕಡಲಾಮೆ’ಗಳ ಬಗ್ಗೆ ಇಂಟರೆಸ್ಟಿಂಗ್ ಸ್ಟೋರಿ!

Pinterest LinkedIn Tumblr

(ವಿಶೇಷ ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: ಪ್ರತಿ ವರ್ಷಾಂತ್ಯದಲ್ಲಿ ತಿಂಗಳು ಬಂತೆಂದರೆ ಕಡಲಾಮೆಗಳು ಮೊಟ್ಟೆಯಿಡಲು ಕಿನಾರೆಯತ್ತ ಮರಳಿ ಬರುತ್ತದೆ. ಅಂತೆಯೇ ಈ ವರ್ಷವೂ ಕೂಡ ಕುಂದಾಪುರದ ಕೋಡಿ, ಬೈಂದೂರು ವಲಯದ ಮರವಂತೆ ಹಾಗೂ ತಾರಾಪತಿಯಲ್ಲಿ ಕಡಲಾಮೆ‌ಗಳು ಮೊಟ್ಟೆಯಿಟ್ಟು ಹಲವು ಸಂಖ್ಯೆಗಳಲ್ಲಿ ಮರಿಗಳು ಸಮುದ್ರಕ್ಕೆ ಸೇರಿದೆ. ಬೈಂದೂರು ಭಾಗದಲ್ಲಿ ಕಡಲಾಮೆಗಳ ಓಡಾಟ ಹಾಗೂ ಹ್ಯಾಚರಿ ನಿರ್ಮಾಣ ಇತಿಹಾಸದಲ್ಲೆ ಮೊದಲು.

ಕಡಲಾಮೆಗಳು ಆರೋಗ್ಯಪೂರ್ಣ ಸಮುದ್ರದ ಜೀವಕೊಂಡಿಯಾಗಿದೆ. ಜೆಲ್ಲಿ ಫಿಶ್‌ಗಳ ಸಂಖ್ಯೆ ವೃದ್ಧಿಯಾಗದಂತೆ ಕಾಯುವುದರೊಂದಿಗೆ ಸಮುದ್ರದ ಜೈವಿಕ ವ್ಯವಸ್ಥೆಯನ್ನು ಸಮತೋಲನದಲ್ಲಿಡುವ ಮೂಲ ಬೇರು ಕಡಲಾಮೆಗಳು. ಒಟ್ಟು 7 ಬಗೆಯ ಸಮುದ್ರ ಆಮೆಗಳಿದ್ದು ಕರ್ನಾಟಕ ರಾಜ್ಯದಲ್ಲಿ ಆಲಿವ್ ರೀಡ್ಲೆ ಹೆಚ್ಚಾಗಿ ಕಂಡುಬರುವ ಕಡಲಾಮೆ ಎನ್ನಲಾಗಿದೆ.

ಕಡಲಾಮೆ ಸಂತಾನೋತ್ಪತ್ತಿ: ಕಡಲಾಮೆಯ ಸಂತಾನೋತ್ಪತ್ತಿ ಪ್ರಕ್ರಿಯೆ ಅದ್ಭುತ ಎಂದು ಬಣ್ಣಿಸಲಾಗುತ್ತದೆ. ನವೆಂಬರ್‌ನಿಂದ ಜನವರಿಯವರೆಗೆ ಮೊಟ್ಟೆಯಿಡಲು ಸಮುದ್ರ ತೀರದತ್ತ ವಯಸ್ಕ ಹೆಣ್ಣಾಮೆ ಸಾಗಿ ಬರುತ್ತದೆ. ಚಂದ್ರನ ಸುತ್ತ ವೃತ್ತಾಕಾರದ ಕೊಡೆಯಂತ ಚಿತ್ತಾರ ಮೂಡಿದ ರಾತ್ರಿ ಆಮೆ ಮೊಟ್ಟೆಯಿಡಲು ಬರುತ್ತೆನ್ನುವುದು ಹಿರಿಯರ ನಂಬಿಕೆ. ಸಮುದ್ರದ ಅಲೆ ಬೀಳುವ ಜಾಗದಿಂದ 50-100 ಅಡಿ ದೂರದ ಪ್ಲ್ಯಾಸ್ಟಿಕ್ ಕಸ ಇರದ ತೀರ ಆಯ್ದುಕೊಳ್ಳುವ ಆಮೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತದೆ. ನಂತರ ತನ್ನ ಕಾಲುಗಳ ಸಹಾಯದಿಂದ  ಮರಳು ಅಗೆದು 3-4 ಅಡಿ ಹೊಂಡದೊಳಗೆ 100-120 ಮೊಟ್ಟೆಗಳನ್ನು ಇಟ್ಟು ಮರಳನ್ನು ಪುನಃ ಮುಚ್ಚುತ್ತದೆ. ತಾನು ‌ಮೊಟ್ಟೆಯಿಟ್ಟ ಕುರುಹು ಯಾರಿಗೂ ಸಿಗದಂತೆ ತನ್ನ ಹೆಜ್ಜೆ ಗುರುತು ಆಚೀಚೆ ಗೊಂದಲಕಾರಿಯಾಗಿ ಮೂಡಿಸಿ ಕಡಲೊಡಲನ್ನು ಸೇರುತ್ತದೆ. ಸ್ಥಳೀಯ ಹಿರಿಯ ಅನುಭವಿಗಳಿಗೆ ಹೊರತು ಪಡಿಸಿದರೆ ಮತ್ಯಾರಿಗೂ ಇದನ್ನು ಗುರುತಿಸುವುದು ಸುಲಭವಿಲ್ಲ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್‌ ಕುಮಾರ್‌ ಮಾಹಿತಿ ನೀಡಿದರು.

ಮೊಟ್ಟೆಯೊಡೆದ ಬಳಿಕದ ಪ್ರಕ್ರಿಯೆ: ಮೊಟ್ಟೆಯಿಟ್ಟ ದಿನದಿಂದ 40-60 ದಿನದೊಳಗೆ ಮೊಟ್ಟೆಯೊಡೆದು ಹೊರಬಂದು ಉಳಿದ ಮರಿಗಳು ವಿಸ್ತಾರದ ಸಮುದ್ರ ಸೇರುತ್ತದೆ. ಹುಟ್ಟುವ ಮರಿ ಗಂಡೋ ಅಥವಾ ಹೆಣ್ಣೋ ಅನ್ನುವುದು ನಿರ್ಧರಿತವಾಗುವುದು ಸೂರ್ಯನಿಂದ ಎನ್ನುವುದು ಇಲ್ಲಿ ಪ್ರಕೃತಿಯ ವೈಶಿಷ್ಟ್ಯ.  ಮೊಟ್ಟೆಯ ಮೇಲೆ ಬೀಳುವ ಉಷ್ಣತೆ ಮೇಲೆ ಲಿಂಗ ನಿರ್ಧಾರವಾಗುತ್ತದೆ ಅನ್ನುವುದು ಸೋಜಿಗದ ವಿಚಾರ. ಮೊಟ್ಟೆಗಳಿಗೆ ಕಾವು ಕೊಡುವ ಸೂರ್ಯನ ಉಷ್ಣತೆ ಇದರ ಮೇಲೆ 27.7° ಸೆಲ್ಸಿಯಸ್ ಗಿಂತ ಕಡಿಮೆ ಇದ್ದರೆ ಹುಟ್ಟುವ ಮರಿಗಳೆಲ್ಲಾ ಗಂಡಾಗುತ್ತವೆ. 31° ಸೆಲ್ಸಿಯಸ್ ಗಿಂತ ಜಾಸ್ತಿ ಇದ್ದರೆ ಹುಟ್ಟುವ ಮರಿಗಳೆಲ್ಲಾ ಹೆಣ್ಣಾಗುತ್ತವೆ ಎನ್ನುವುದು ವೈಜ್ಞಾನಿಕ ವಾಸ್ತವ ಎನ್ನುತ್ತಾರೆ ಬಲ್ಲವರು.

ಎಲ್ಲವೂ ಕೌತುಕ!: 50 ರಿಂದ 60 ದಿನ ದಾಟಿದ ಮೇಲೆ ಪೂರ್ಣ ಬಲಿತ ಮರಿಗಳು ಮೊಟ್ಟೆಯೊಡೆದು ಹೆಚ್ಚಾಗಿ ರಾತ್ರಿ ಚಂದ್ರನ ಬೆಳದಿಂಗಳು ಮೂಡಿದ ಮೇಲೆ ಹೊರಬರುತ್ತದೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ರಾತ್ರಿ ಸಮುದ್ರ ಸೇರುವಂತೆ ಸಮಯ ಆಯ್ದುಕೊಳ್ಳಲು ಆ ಮರಳ ಅಡಿ ಹೂತಿರುವ ಪ್ರಪಂಚ ಕಣ್ಣಿಟ್ಟು ನೋಡದ ಆಮೆ ಮರಿಗಳ ಆ ಪುಟ್ಟ ಕಾಲುಗಳು 4-5 ಅಡಿಯಷ್ಟಿರುವ ಮರಳು ರಾಶಿ ಸರಿಸಿ ಹೊರ ಬಂದು ಬೆಳದಿಂಗಳ ಬೆಳಕಿಗೆ ಕರೆಯುವ ಅಲೆಗಳ ಸೆಳೆತದತ್ತ ಸಾಗುತ್ತದೆ. ಹ್ಯಾಚರಿಯಿಂದ 50-100 ಅಡಿ ಸಾಗಿ ಸಮುದ್ರ ಸೇರುವುದು ಮರಿಗಳಿಗೆ ಸಾಹಸ. ಕಡಲು ಸೇರಿದ ಮೇಲೆ ಕಣ್ಣೆದುರು ಕಾಣುವ ರಾಕ್ಷಸಾಕಾರದ ಅಲೆಗಳನ್ನು ದಾಟಲೇಬೇಕು. ಆಳ ಸಮುದ್ರ ಸಾಗುವವರೆಗೆ ಮೀನುಗಳು, ಏಡಿಯಿಂದ ಹಿಡಿದು ಬಲೆ, ಪ್ಲ್ಯಾಸ್ಟಿಕ್ ಹೀಗೆ ಸಾವಿರ ಅಡ್ಡಿಗಳು. ಇದೆಲ್ಲವನ್ನೂ ಮೀರಿ ಬದುಕುವುದು ಮಾತ್ರ ಕೆಲವೇ ಕೆಲವು ಆಮೆಗಳು ಎಂಬುದು ನಂಬಬೇಕಾದ ಸತ್ಯ.

ಕಡಲಾಮೆ ರಕ್ಷಣೆಗೆ ‘ಹ್ಯಾಚರಿ ನಿರ್ಮಾಣ’: ಇತ್ತೀಚಿನ ವರ್ಷಗಳಲ್ಲಿ ಹವಮಾನ ವೈಪರಿತ್ಯ, ಅವೈಜ್ಞಾನಿಕ ಮೀನುಗಾರಿಕೆ, ಪ್ಲ್ಯಾಸ್ಟಿಕ್ ಕಸ-ತ್ಯಾಜ್ಯಗಳು, ಇತರೆ ಪರಿಸರ ವಿರೋಧಿ ಚಟುವಟಿಕೆಗಳಿಂದ ಈ ಆಲಿವ್ ರೀಡ್ಲೆ ಕಡಲಾಮೆ ಅಳಿವಿನಂಚಿಗೆ ತಲುಪಿದೆ. ಅಲ್ಲದೆ ಕಡಲ ತೀರದಲ್ಲಿ ನಾಯಿಗಳು, ಇತರ ಪ್ರಾಣಿ ಪಕ್ಷಿಗಳಿಂದ ಕಡಲಾಮೆ ಸಂತತಿಗೆ ಮಾರಕವಿದೆ. ಇದಕ್ಕಾಗಿ ಅರಣ್ಯ ಇಲಾಖೆಯವರು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಕಡಲಾಮೆ ರಕ್ಷಣೆಗೆ ‘ಹ್ಯಾಚರಿ’ ನಿರ್ಮಾಣ ಮಾಡುತ್ತಿದ್ದಾರೆ. ಕಡಲಾಮೆಗಳು ಮೊಟ್ಟೆ ಇಟ್ಟ ಸ್ಥಳದಲ್ಲಿ 1 ಅಡಿ ಆಳ ನಾಲ್ಕು ಕಡೆ ರಕ್ಷಣಾ ಬೇಲಿಗಳಂತೆ ಬೋನಿನ ಮಾದರಿಯಲ್ಲಿ ಮೇಲ್ಭಾಗದಲ್ಲೂ ಬಲೆ ಅಳವಡಿಸಿ ಮೊಟ್ಟೆಗಳನ್ನು ಸಂರಕ್ಷಿಸಲಾಗುತ್ತದೆ. ನಡೆದಾಡುವ ಜನರಿಗೆ ಹ್ಯಾಚರಿ ಬಗ್ಗೆ ಅರಿವು ಮೂಡಿಸಲು ಸೂಚನಾ ಫಲಕಗನ್ನು ಹ್ಯಾಚರಿಗೆ ಅಳವಡಿಸಿ ನಿತ್ಯ ಅದನ್ನು ಅರಣ್ಯ ವೀಕ್ಷಕ ಸಿಬ್ಬಂದಿ ಕಾಯುತ್ತಾರೆ. ಈ ಬಾರಿ ಕುಂದಾಪುರ, ಬೈಂದೂರು, ಉಡುಪಿಯಲ್ಲಿ ಅಂದಾಜು 23 ಹ್ಯಾಚರಿ ನಿರ್ಮಿಸಿದ್ದು ಈಗಾಗಾಲೇ ಸಾವಿರಾರು ಕಡಲಾಮೆ ಮರಿಗಳು ಸಮುದ್ರ ಸೇರಿದೆ.  ಅಲ್ಲದೆ ಪ್ರತಿವರ್ಷ ಮೊಟ್ಟೆಯಿಟ್ಟು ಹ್ಯಾಚರಿ ನಿರ್ಮಿಸುವ ಆಯಕಟ್ಟಿನ ಸ್ಥಳದಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರು, ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮವಹಿಸಿದೆ.

  • ಕುಂದಾಪುರ-ಬೈಂದೂರು ಕಡಲಾಮೆಗಳ ಹಾಟ್ ಸ್ಫಾಟ್!: ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ವ್ಯಾಪ್ತಿಗೆ  ಬರುವ ಉಡುಪಿ ಹಾಗೂ ಕುಂದಾಪುರ ವಲಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸುವ (ಹ್ಯಾಚರಿ ನಿರ್ಮಾಣ) ಕೆಲಸ ನಡೆದಿತ್ತು. ಆದರೆ ಬೈಂದೂರು ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ 300ಕ್ಕೂ ಅಧಿಕ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಸೇರಿಸಲಾಗಿದೆ. ಬೈಂದೂರು ವ್ಯಾಪ್ತಿಯಲ್ಲಿ ಸಾರ್ವಜನಿಕರು ಮತ್ತು ಶಾಸಕರ ನೇತೃತ್ವದಲ್ಲಿ ಕ್ಲೀನ್ ಕಿನಾರ ಮೊದಲಾದ ಸಂಘಟನೆಗಳ ವತಿಯಿಂದ ಸಮುದ್ರ ತೀರದ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಈ ಕಾರಣದಿಂದ ಕಡಲಾಮೆಗಳು ಮೊಟ್ಟೆ ಇರಿಸಲು ಬೈಂದೂರು ವ್ಯಾಪ್ತಿಗೂ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉಡುಪಿ ಕುಂದಾಪುರ ಬೈಂದೂರು ವ್ಯಾಪ್ತಿಯಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಲಾಗಿದೆ. ಕಡಲಾಮೆಗಳ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು. -ಗಣಪತಿ ಕೆ.,  ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ

Comments are closed.