ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹೌದು.. ಇಂದು ಬಿಸಿಸಿಐ ಅಧ್ಯಕ್ಷರು ಆಗಿರುವ ಸೌರವ್ ಗಂಗೂಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಈ ಸಭೆಯ ನಂತರ ಅವರು ರಾಜಕೀಯ ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಗಂಗೂಲಿ ಆಪ್ತರು ಮಾತ್ರ ಈ ಭೇಟಿಗೆ ರಾಜಕೀಯ ಲೇಪನ ಬೇಡ ಎಂದು ಹೇಳಿದ್ದು, ಇದು ಕೇವಲ ವೈಯಕ್ತಿಕ ಹಾಗೂ ಸೌಹಾರ್ದ ಭೇಟಿಯಾಗಿತ್ತು ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಗಂಗೂಲಿ ಬಿಜೆಪಿಗೆ ಸೇರುವ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿವೆ. ಏತನ್ಮಧ್ಯೆ, ರಾಜ್ಯಪಾಲ ಜಗದೀಪ್ ಧಂಕರ್ ಅವರೊಂದಿಗಿನ ಗಂಗೂಲಿ ಅವರ ಈ ಭೇಟಿ ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದಾಗಿನಿಂದಲೇ ಅವರ ಬಿಜೆಪಿ ಪ್ರವೇಶದ ಕುರಿತಾದ ಊಹಾಪೋಹಗಳು ತೀವ್ರಗೊಂಡಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಗಂಗೂಲಿ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಮೂಲಗಳು ನೀಡಿರುವ ವರದಿಗಳ ಪ್ರಕಾರ ಜನವರಿ 12ರಂದು ಸ್ವಾಮಿ ವಿವೆಕಾನಂದರ ಜಯಂತಿಯ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವರು ಬಿಜೆಪಿಯಲ್ಲಿ ಶಾಮೀಲಾಗಲಿದ್ದಾರೆ ಎನ್ನಲಾಗುತ್ತಿದೆ. ಗಂಗೂಲಿ ಕೂಡ ಇದೆ ಕಾರ್ಯಕ್ರಮ ವೇಳೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಸೌರವ್ ಗಂಗೂಲಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭೇಟಿಯಾಗಿದ್ದರು. ಈ ಭೇಟಿ ಬಳಿಕ ಸೌರವ್ ಗಂಗೂಲಿ ಬಿಜೆಪಿ ಸೇರ್ಪಡೆ ಕುರಿತು ಮಾತುಗಳು ಕೇಳಿ ಬಂದಿತ್ತು.
Comments are closed.