ಕ್ರೀಡೆ

140 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಲು ಕಾರಣ ತಿಳಿಸಿದ ಭರತ್‌ ಅರುಣ್‌

Pinterest LinkedIn Tumblr

ಹೊಸದಿಲ್ಲಿ: ಇಡೀ ವಿಶ್ವದ ವೇಗದ ಬೌಲಿಂಗ್‌ ವಿಭಾಗದಲ್ಲಿ ಭಾರತೀಯ ಬೌಲರ್‌ಗಳು ಪ್ರಬಲವಾಗುತ್ತಿದ್ದಾರೆ. ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕೆಡವಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲಾ ಸ್ವರೂಪದಲ್ಲಿ ಮುನ್ನಡೆ ಸಾಧಿಸಿರುವ ಭಾರತ, ಅಗ್ರ ಸ್ಥಾನವನ್ನು ಅಲಂಕರಿಸಿದೆ.

ವೇಗಿಗಳಾದ ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌ ಹಾಗೂ ಉಮೇಶ್‌ ಯಾದವ್‌ ಅವರು ವಿದೇಶಿ ನೆಲಗಳಲ್ಲಿ ಭಾರತ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಈ ಹಿಂದೆ ಟೀಮ್‌ ಇಂಡಿಯಾದಲ್ಲಿ ವೇಗದ ಬೌಲಿಂಗ್‌ ಅಷ್ಟೊಂದು ಬಲಿಷ್ಠವಾಗಿರಲಿಲ್ಲ, ಒಂದು ವೇಳೆ ಬೌಲರ್‌ಗಳು 140ಕ್ಕಿಂತ ಹೆಚ್ಚು ವೇಗವಾಗಿ ಬೌಲಿಂಗ್‌ ಮಾಡಿದರೆ ಬ್ಯಾಟ್ಸ್‌ಮನ್‌ಗಳು ಅಚ್ಚರಿಯಿಂದ ನೋಡುತ್ತಿದ್ದರು. ಆದರೆ, ಕಳೆದ 2-3 ವರ್ಷಗಳಿಂದ ಭಾರತೀಯ ವೇಗದ ಬೌಲಿಂಗ್‌ ವಿಭಾಗ ಅತ್ಯುತ್ತಮ ಬೆಳವಣಿಗೆ ಕಂಡಿದ್ದು, 140ಕ್ಕಿಂತ ಹೆಚ್ಚು ವೇಗವಾಗಿ ಬೌಲಿಂಗ್‌ ಮಾಡುವುದನ್ನು ಮೈಗೂಡಿಸಿಕೊಂಡಿದ್ದಾರೆ.

ಬೌಲರ್‌ಗಳು ತಮ್ಮ ವೇಗವನ್ನು ಹೆಚ್ಚಿಸಲು ಕಳೆದ ಹಲವು ವರ್ಷಗಳಿಂದ ಹಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ಬೌಲರ್‌ಗಳ ಮೇಲೆ ಮ್ಯಾನೇಜ್‌ಮೆಂಟ್‌ ತೆಗೆದುಕೊಂಡಿದ್ದ ಎಲ್ಲಾ ತಂತ್ರಗಳನ್ನು ಟೀಮ್‌ ಇಂಡಿಯಾ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಬಹಿರಂಗಪಡಿಸಿದ್ದಾರೆ.

“ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಮಾತನಾಡುವ ಮುನ್ನ, ನಾವು ಒಬ್ಬ ಬೌಲರ್‌ ಎಷ್ಟು ಓವರ್‌ಗಳು ಬೌಲಿಂಗ್‌ ಮಾಡಿದ್ದಾರೆ ಎಂಬುದನ್ನು ಲೆಕ್ಕ ಹಾಕುತ್ತೇವೆ. ಆದರೆ, ಪಂದ್ಯವೊಂದರಲ್ಲಿ ಬೌಲರ್‌ ಅತಿಯಾದ ಶ್ರಮ ವಹಿಸಬಹುದು ಮತ್ತು ಅದು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದ್ದರಿಂದ ನಾವು ಮೈದಾನದಲ್ಲಿ ಅವರ ಎಲ್ಲಾ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಜಿಪಿಎಸ್ ಟ್ರ್ಯಾಕರ್ ಅನ್ನು ಬಳಸುತ್ತೇವೆ,” ಎಂದು ಹೇಳಿದರು.

“ಉದಾಹರಣೆಗೆ ಬೌಲರ್‌ ಮೈದಾನದಲ್ಲಿ 20 ಕಿ.ಮೀ ಓಡಾಡಿದ್ದರೆ, ಈ ಎಲ್ಲ ದತ್ತಾಂಶ ಹಾಗೂ ಮಾಹಿತಿಯನ್ನು ಟ್ರ್ಯಾಕರ್‌ ಒದಗಿಸುತ್ತದೆ. ಸಿಕ್ಕ ದತ್ತಾಂಶವನ್ನು ವಿಶ್ಲೇಷಿಸುವ ಮೂಲಕ ತರಬೇತಿ ಅವಧಿಯಲ್ಲಿ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ಗೆ ಗಮನ ಕೊಡಲಾಗುತ್ತದೆ. ಮೂಲಭೂತವಾಗಿ ಸರಿಯಾದ ಸಮತೋಲನ ಕಂಡುಹಿಡಿಯುವುದು ಅಗತ್ಯವಿದೆ ಹಾಗೂ ಭಾರತೀಯ ಬೌಲರ್‌ಗಳು ಇಲ್ಲಿಯವರೆಗೆ ಅದನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.’ ಎಂದು ತಿಳಿಸಿದ್ದಾರೆ.

“ಇದೇ ಕಾರಣದಿಂದಾಗಿಯೇ ಭಾರತೀಯ ಬೌಲಿಂಗ್‌ ವಿಭಾಗ ಯಶಸ್ವಿಯಾಗುತ್ತಿದೆ ಹಾಗೂ ಬೌಲರ್‌ಗಳು 140 ಕಿ.ಮೀ ವೇಗದಲ್ಲಿ ನಿಯಮಿತವಾಗಿ ಬೌಲಿಂಗ್‌ ಮಾಡುತ್ತಿದ್ದಾರೆ,” ಎಂದು ಇನ್‌ಸೈಡ್‌ ಔಟ್‌ ಮೂರನೇ ಎಪಿಸೋಡ್‌ನಲ್ಲಿ ಅರುಣ್‌ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಭರತ್‌ ಅರುಣ್‌ ಮಾತನಾಡಿ, ” 2019ರ ವಿಶ್ವಕಪ್‌ ಸೋಲು ಇನ್ನೂ ಎಲ್ಲರಿಗೂ ನೋವು ಕಾಡುತ್ತಿದೆ. ಆದರೆ, ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಗೆಲ್ಲುತ್ತೇವೆ ಎಂದು ಹೇಳಿದ್ದರು.

Comments are closed.