ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿಚಾರವಾಗಿ ಜಾಮಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ದೇಶಾದ್ಯಂತ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಅನೇಕ ಗಣ್ಯರು ಸಾಥ್ ನೀಡಿದ್ದಾರೆ. ಹೀಗೆ ವಿದ್ಯಾರ್ಥಿಗಳ ಪರ ಟ್ವೀಟ್ ಮೂಲಕ ಧ್ವನಿಯೇರಿಸಿ ಕೆಲವರಿಂದ ಟೀಕೆಗೆ ಗುರಿಯಾಗಿದ್ದ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಾತಿನ ಮೂಲಕವೇ ತಿರುಗೇಟು ನೀಡಿದ್ದಾರೆ.
ಜಾಮಿಯಾ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಹಿಂಸಾಚಾರ ನಡೆದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಇರ್ಫಾನ್, ರಾಜಕೀಯದಲ್ಲಿ ಆರೋಪ ಮತ್ತು ಪ್ರತ್ಯಾರೋಪ ಎಂದಿಗೂ ನಡೆಯುತ್ತಲೇ ಇರುತ್ತದೆ. ಆದರೆ, ನಾನು ಮತ್ತು ನನ್ನ ದೇಶ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ದರು. ಟ್ವೀಟ್ಗೆ ಭಾರಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಪಠಾಣ್ ಸ್ಪಷ್ಟನೆ ನೀಡಿದ್ದಾರೆ.
ನನಗನಿಸಿದ್ದನ್ನು ಹೇಳಲು ನನ್ನ ರಾಷ್ಟ್ರದಲ್ಲಿ ನನಗೆ ಯಾರೊಬ್ಬರ ಅನುಮತಿಯು ಬೇಕಿಲ್ಲ. ನಾನು ರಾಷ್ಟ್ರದ ಪ್ರತಿನಿಧಿಯಾಗಿದ್ದೇನೆ. ಇದನ್ನು ಕೆಲ ಜನರು ಅರ್ಥ ಮಾಡಿಕೊಳ್ಳಬೇಕು. ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವಾಗ ನಾನೊಬ್ಬ ಭಾರತೀಯ ಅಂದುಕೊಂಡಿದ್ದೆ ಹೊರತು ಮುಸ್ಲಿಂ ಎಂದು ಭಾವಿಸಿರಲಿಲ್ಲ. ಮೊದಲು ನಾನೊಬ್ಬ ಭಾರತೀಯ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
Comments are closed.