ಕ್ರೀಡೆ

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸಿಂಧುರನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

Pinterest LinkedIn Tumblr

ಹೊಸದಿಲ್ಲಿ: ಬ್ಯಾಂಡ್ಮಿಂಟನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ಪಿ.ವಿ ಸಿಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ಮಾಡಿ ಅಭಿನಂದಿಸಿದರು. ಸಿಂಧು ಅವರ ಸಾಧನೆಗೆ ಕ್ರೀಡಾ ಸಚಿವ ಕಿರಣ್‌ ರಿಜಿಜು ಅಭಿನಂದನೆ ಸಲ್ಲಸಿದರು.

ತರಬೇತುದಾರ ಪುಲ್ಲೇಲ ಗೋಪಿಚಂದ್‌ ಜತೆಗೆ ಚಿನ್ನದ ಪದಕದೊಂದಿಗೆ ಭಾರತಕ್ಕೆ ಮರಳಿದ ಪಿ.ವಿ ಸಿಂಧು ಅವರಿಗೆ ಏರ್‌ಪೋರ್ಟ್‌ನಲ್ಲಿ ಆಧರಣೀಯ ಸ್ವಾಗತ ಸಿಕ್ಕಿತು. ಸಿಂಧು ದಿಲ್ಲಿಗೆ ಮರಳಿದ ನಂತರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರನ್ನು ಭೇಟಿ ಮಾಡಿದರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾಡಿದರು. ಈ ವೇಳೆ ಸಿಂಧು ಅವರ ಸಾಧನೆಯನ್ನು ಮೆಚ್ಚಿ ಅಭಿನಂದನಿಸಿದರು.

ಚಿನ್ನದ ಪದಕ ಮತ್ತು ಸಾಕಷ್ಟು ವೈಭವವನ್ನು ತವರಿಗೆ ತಂದುಕೊಟ್ಟ ಭಾರತ ಹೆಮ್ಮೆ ಪಿ.ವಿ ಸಿಂಧು ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಪಿ.ವಿ ಸಿಂಧು ಅವರನ್ನು ಭೇಟಿ ಮಾಡಲು ಸಂತಸವಾಗುತ್ತಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಭವಿಷ್ಯದ ಸಾಧನೆಗಳಿಗೆ ಶುಭ ಹಾರೈಸುತ್ತಿದ್ದೇನೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟ ಪಿ.ವಿ ಸಿಂಧು ಅವರಿಗೆ ಶುಭ ಹಾರೈಕೆಗಳು ಎಂದು ಕಿರಣ್‌ ರಿಜಿಜು ಟ್ವೀಟ್‌ ಮಾಡಿದ್ದಾರೆ. ಪಿ.ವಿ ಸಿಂಧು ಅವರ ತಂದೆ ಪಿ.ವಿ ರಮಣ, ತರಬೇತುದಾರ ಪಿ. ಗೋಪಿಚಂದ್‌ ಅವರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್‌ನ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ 21-7, 21-7ರ ಅಂತರದ ಗೆಲುವು ದಾಖಲಿಸಿದ ಸಿಂಧು ಇತಿಹಾಸ ಪುಟ ಸೇರಿದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಸಾಧನೆ:
2013 ಗುವಾಂಗ್‌ಝೌ: ಕಂಚಿನ ಪದಕ (ಮಹಿಳಾ ಸಿಂಗಲ್ಸ್)
2014 ಕೊಪೆನ್‌ಹ್ಯಾಗನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್)
2017 ಗ್ಲ್ಯಾಸ್ಗೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2018 ನಾನ್‌ಜಿಂಗ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2019 ಬಾಸೆಲ್: ಚಿನ್ನ ಪದಕ (ಮಹಿಳಾ ಸಿಂಗಲ್ಸ್)

ಟೀಕಾಕಾರರಿಗೆ ಇದೇ ನನ್ನ ಉತ್ತರ: ಪಿ.ವಿ ಸಿಂಧು
ಸತತ ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಹೊಸ್ತಿಲಲ್ಲಿ ಎಡವಿದ ಸಂದರ್ಭಗಳಲ್ಲಿ ಟೀಕಾಕಾರರ ಬಾಯಿಗೆ ಆಹಾರವಾಗಿದ್ದಕ್ಕೆ ‘ಕೋಪ ಮತ್ತು ದುಃಖ’ಕ್ಕೊಳಗಾಗಿದ್ದ ಪಿ.ವಿ ಸಿಂಧು ಇದೀಗ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ‘ಟೀಕಾಕಾರರ ಪ್ರಶ್ನೆಗಳಿಗೆ ಸಮರ್ಪಕ ರೀತಿಯಲ್ಲಿ ಉತ್ತರಿಸಿರುವುದಾಗಿ’ ಹೇಳಿಕೊಂಡಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನ 2017 ಮತ್ತು 2018ರ ಆವೃತ್ತಿಗಳಲ್ಲಿ ಬೆಳ್ಳಿ ಪದಕಕ್ಕೆ ಸೀಮಿತಗೊಂಡಿದ್ದ ಹೈದರಾಬಾದ್‌ನ 24 ವರ್ಷದ ತರುಣಿ ಭಾನುವಾರ ಬಾಸೆಲ್‌(ಸ್ವಿಜರ್ಲೆಂಡ್‌)ನಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ಸೋಲಿಸಿ ಚೊಚ್ಚಲ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

”ಪದೇಪದೆ ನನ್ನನ್ನು ಪ್ರಶ್ನಿಸಿದವರಿಗೆ, ಟೀಕಿಸಿದವರಿಗೆ ಇದು ನನ್ನ ಉತ್ತರ. ಅವರೆಲ್ಲರಿಗೂ ರಾರ‍ಯಕೆಟ್‌ ಮೂಲಕವೇಉತ್ತರಿಸಬಯಸಿದ್ದೆ. ಕೊನೆಗೂ ಬಯಕೆ ಈಡೇರಿತು,” ಎಂಬ ಸಿಂಧು ಹೇಳಿಕೆ ಬಿಡಬ್ಲ್ಯುಎಫ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿತ್ತರಗೊಂಡಿದೆ.

”ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಮೊದಲ ಬಾರಿ (2017ರಲ್ಲಿ) ಸೋತಾಗ ತುಂಬ ಬೇಸರಗೊಂಡಿದ್ದೆ. ಕಳೆದ ವರ್ಷ 2ನೇ ಬಾರಿಗೆ ಸೋತಾಗಲೂ ದುಃಖವಾಗಿತ್ತು, ಜತೆಗೆ ಕೋಪವೂ ಬಂದಿತ್ತು. ತುಮುಲಕ್ಕೊಳಗಾಗಿದ್ದೆ. ‘ಸಿಂಧು ಯಾಕೆ ನೀನು ಒಮ್ಮೆ ಶಕ್ತಿಮೀರಿ ಪ್ರಯತ್ನಿಸಬಾರದು?’ ಎಂದು ನನ್ನಷ್ಟಕ್ಕೆ ನಾನೇ ಅಂದುಕೊಳ್ಳುತ್ತಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ‘ನಿನ್ನ ಆಟ ನೀನು ಆಡು, ಚಿಂತೆ ಮಾಡಬೇಡ’ ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಫಲ ದೊರೆಯಿತು,” ಎಂದು ಗೋಲ್ಡನ್‌ ಗೋರ್ಲ್‌ ಹೇಳಿಕೊಂಡಿದ್ದಾರೆ.

ಸಿಂಧು 2017ರ ಆವೃತ್ತಿಯ ಫೈನಲ್‌ನಲ್ಲಿ ಜಪಾನ್‌ನ ಒಕುಹರಾ ಹಾಗೂ 2018ರ ಆವೃತ್ತಿಯ ಫೈನಲ್‌ನಲ್ಲಿ ಒಲಿಂಪಿಕ್‌ ಚಾಂಪಿಯನ್‌ ಕ್ಯಾರೊಲೈನಾ ಮರಿನ್‌ (ಸ್ಪೇನ್‌) ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ರಿಯೊ ಡಿ ಜನೈರೊ ಒಲಿಂಪಿಕ್ಸ್‌ (2016ರಲ್ಲಿ), ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ (2018), ಜಕಾರ್ತ ಏಷ್ಯನ್‌ ಗೇಮ್ಸ್‌(2018)ನಂಥ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲೂ ಬೆಳ್ಳಿ ಪದಕಕ್ಕೆ ಸೀಮಿತಗೊಂಡಿದ್ದರು. ಅಲ್ಲದೆ, ಕಳೆದ ವರ್ಷ ಥಾಯ್ಲೆಂಡ್‌ ಓಪನ್‌ ಮತ್ತು ಇಂಡಿಯನ್‌ ಓಪನ್‌ ಟೂರ್ನಿಗಳಲ್ಲೂ ಪ್ರಶಸ್ತಿ ಸುತ್ತುಗಳಲ್ಲಿ ಎಡವಿದ್ದರು. ಹೀಗಾಗಿ ಅವರನ್ನು ಕೆಲವರು ‘ಸಿಲ್ವರ್‌ ಗರ್ಲ್‌’ ಎಂದೇ ಕರೆಯತೊಡಗಿದ್ದರು. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಏಕೆ ಫೈನಲ್‌ನಲ್ಲಿ ಪದೇಪದೆ ಎಡವುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದರು. ಅದರಿಂದ ಸಿಂಧು ನೊಂದುಕೊಂಡಿದ್ದರು.

ಇದೀಗ ಹೈದರಾಬಾದ್‌ನ ಬ್ಯಾಡ್ಮಿಂಟನ್‌ ಬೆಡಗಿ ‘ಬೆಳ್ಳಿ ಸಂಕೋಲೆ’ಯಿಂದ ಹೊರಬರುವುದರ ಜತೆಗೆ, ವಿಶ್ವ ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಪದಕ (5) ಗೆದ್ದ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಝಾಂಗ್‌ ನಿಂಗ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಸಿಂಧು ಅವರನ್ನು ಈ ಹಿಂದೆ ಟೀಕಿಸುತ್ತಿದ್ದವರು ಭಾನುವಾರದ ಬಳಿಕ ಬದಲಾಗಿದ್ದಾರೆ. ಅವರೀಗ ‘2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವಿರಲ್ಲವೇ,’ ಎಂದು ಕೇಳುತ್ತಿದ್ದಾರೆ.

Comments are closed.