
ಮ್ಯಾಂಚೆಸ್ಟರ್: ಐಸಿಸಿ 2019 ಏಕದಿನ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 18 ರನ್ ಅಂತರದ ರೋಚಕ ಸೋಲಿಗೆ ಶರಣಾಗಿರುವ ಟೀಮ್ ಇಂಡಿಯಾದ ಪ್ರಶಸ್ತಿ ಕನಸು ಭಗ್ನಗೊಂಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, 45 ನಿಮಿಷಗಳ ಕೆಟ್ಟ ಪ್ರದರ್ಶನಕ್ಕಾಗಿ ಭಾರಿ ಬೆಲೆಯನ್ನೇ ತೆರಬೇಕಾಗಿ ಬಂದಿದೆ ಎಂದಿದ್ದಾರೆ.
240 ರನ್ಗಳ ಗುರಿ ಬೆನ್ನಟ್ಟಿದ ಭಾರತ ಕೆಟ್ಟ ಆರಂಭವನ್ನು ಪಡೆದಿತ್ತು. 3.1 ಓವರ್ಗಳಲ್ಲೇ ಕೇವಲ 5 ರನ್ನಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ವಿಕೆಟುಗಳನ್ನು ಕಳೆದುಕೊಂಡಿತು. ಅಷ್ಟೇ ಯಾಕೆ ಮೊದಲ ಪವರ್ ಪ್ಲೇ ಅಂತ್ಯಕ್ಕೆ ತಂಡದ ಸ್ಕೋರ್ 24/4.
ಇಲ್ಲಿಂದ ಬಳಿಕ ಮಹೇಂದ್ರ ಸಿಂಗ್ ಧೋನಿ (50) ಹಾಗೂ ರವೀಂದ್ರ ಜಡೇಜಾ (77) ವಿರೋಚಿತ ಹೋರಾಟ ನೀಡಿದರೂ ಗೆಲುವಿನಲ್ಲಿ ಸಹಕಾರಿಯಾಗಲಿಲ್ಲ. ಇದರಿಂದಾಗಿ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ.
ನ್ಯೂಜಿಲೆಂಡ್ ತೋರಿದ ಹೋರಾಟ ಮನೋಭಾವವನ್ನು ಶ್ಲಾಘಿಸಿದ ಕೊಹ್ಲಿ, ಗೆಲುವಿನ ಶ್ರೇಯಕ್ಕೆ ಎದುರಾಳಿ ತಂಡವು ಅರ್ಹವಾಗಿದ್ದಾರೆ. ಪಂದ್ಯದುದ್ದಕ್ಕೂ ನಮ್ಮ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡವನ್ನು ಹೇರಲು ಯಶಸ್ವಿಯಾದರು ಎಂದರು.
ನಾಕೌಟ್ ಹಂತದಲ್ಲಿ ನ್ಯೂಜಿಲೆಂಡ್ ನಮಗಿಂತಲೂ ಉತ್ತಮ ಪ್ರದರ್ಶನ ನೀಡಿದ್ದು, ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಫೈನಲ್ಗೇರಲು ಅರ್ಹ ತಂಡವೆನಿಸಿದೆ. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಸೇರಿಸಿದರು.
ಒಟ್ಟಾರೆಯಾಗಿ ವಿಶ್ವಕಪ್ ಅಭಿಯಾನದ ಬಗ್ಗೆ ಸಂತೃಪ್ತಿಯಿದೆ ಎಂದು ಕೊಹ್ಲಿ ತಿಳಿಸಿದರು. ಇಲ್ಲಿಂದ ಧನಾತ್ಮಕ ಅಂಶಗಳನ್ನು ತೆಗೆದುಕೊಂಡು ಹೋಗಲಿದ್ದೇವೆ ಎಂಬುದನ್ನು ಉಲ್ಲೇಖಿಸಲು ಮರೆಯಲಿಲ್ಲ.
Comments are closed.