ಅದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 12ನೇ ಆವೃತ್ತಿಯ ಫೈನಲ್ ಪಂದ್ಯ. 150 ರನ್ಗಳ ಚೇಸಿಂಗ್ ಇಳಿದಿದ್ದ ಚೆನ್ನೈ ತಂಡಕ್ಕೆ ಕೊನೆಯ 6 ಎಸೆತಗಳಲ್ಲಿ ಬೇಕಿದ್ದದ್ದು ಕೇವಲ 9 ರನ್. ಫೈನಲ್ ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆದ್ದ ಖ್ಯಾತಿ ಚೆನ್ನೈಗೆ ಇದೆ. ಹೀಗಾಗಿ, ಈಬಾರಿಯೂ ಸಿಎಸ್ಕೆ ಕಪ್ ಎತ್ತಲಿದೆ ಎನ್ನುವ ಅಭಿಲಾಷೆಯಲ್ಲಿದ್ದರು ಧೋನಿ ಅಭಿಮಾನಿಗಳು. ಆದರೆ, ಎಲ್ಲಾ ಲೆಕ್ಕಾಚಾರ ಬದಲಾಗಿತ್ತು. ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ರೋಚಕವಾಗಿ ಗೆಲುವು ಸಾಧಿಸಿತ್ತು. ಪಂದ್ಯವೇನೋ ಮುಗಿದಿದೆ. ಆದರೆ, ಈ ಪಂದ್ಯದ ಕೊನೆಯ ಓವರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಐಪಿಎಲ್ ಸ್ಕ್ರಿಪ್ಟ್ ಆಧಾರಿತವಾಗಿಯೇ ನಡೆಯುತ್ತಿದೆ, ಈಪಿಎಲ್ನಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಅನುಮಾನಿಸಿ ಅನೇಕರು ಬರೆದುಕೊಂಡಿದ್ದಾರೆ!
ಕೆಲ ವರ್ಷಗಳ ಹಿಂದೆ ಫಿಕ್ಸಿಂಗ್ ಕಳಂಕ ಅಂಟಿಸಿಕೊಂಡಿದ್ದ ಐಪಿಎಲ್ಗೆ ಸ್ಥಿತಿ ಇದೀಗ ‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬಂತಹ ಪರಿಸ್ಥಿತಿಗೆ ಒಳಗಾಗಿದೆ. ಐಪಿಎಲ್ನಲ್ಲಿ ಫಿಕ್ಸಿಂಗ್ ಕರಿಛಾಯೆ ಹರಿದಾಡಿದಾಗಿನಿಂದ ಅನೇಕರಿಗೆ ಐಪಿಎಲ್ ಮೇಲಿದ್ದ ನಂಬಿಕೆ ಮರೆಯಾಗಿದೆ! ಅದರಲ್ಲೂ ಸಿಎಸ್ಕೆ ತಂಡವನ್ನು ಅನೇಕರು ಈಗಲೂ ನಂಬುವುದಿಲ್ಲ. ಈವರೆಗೂ ಯಾವುದೇ ಪಂದ್ಯ ರೋಚಕ ಹಂತ ತಲುಪಿದರೂ “ಅಯ್ಯೋ ಬಿಡಿ, ಮೊದಲೇ ಎಲ್ಲವೂ ಫಿಕ್ಸಿಂಗ್ ಮಾಡಿಕೊಂಡಿರುತ್ತಾರೆ,” ಎನ್ನುವ ಮಾತುಗಳು ಕೇಳಿ ಬರುತ್ತವೆ.
ನಿನ್ನೆ ನಡೆದ ಪಂದ್ಯದಲ್ಲಿ ಆಗಿದ್ದೂ ಇದೆ. ಮುಂಬೈ ನೀಡಿದ್ದ 150 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈಗೆ ಫಾಫ್ ಡುಪ್ಲೆಸಿಸ್ ಸ್ಫೋಟಕ ಆರಂಭ ಒದಗಿಸಿದ್ದರು. ಆದರೆ, ಕೆಲ ಪ್ರಮುಖ ಆಟಗಾರರು ಸಾಧಾರಣ ಪ್ರದರ್ಶನ ನೀಡಿ ನಿರ್ಗಮಿಸಿದ್ದು ಸಿಎಸ್ಕೆಗೆ ಹಿನ್ನಡೆಯಾಯಿತು.
ಕೊನೆಯ ಓವರ್ನಲ್ಲಿ 6 ಬಾಲ್ಗೆ 9 ರನ್ಗಳ ಅವಶ್ಯಕತೆ ಇತ್ತು. ಮಲಿಂಗಾ ಬೌಲಿಂಗ್ನ ಮೊದಲ ಎಸೆತದಲ್ಲಿ ವಾಟ್ಸನ್ 1 ರನ್ ಕಲೆಹಾಕಿದರೆ, 2ನೇ ಎಸೆತದಲ್ಲಿ ಜಡೇಜಾ 1 ರನ್ ಬಾರಿಸಿದರು. 3ನೇ ಎಸೆತದಲ್ಲಿ ವಾಟ್ಸನ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲೂ ಮತ್ತೆ 2 ರನ್ ಗಳಿಸಲು ಹೋಗಿ ವಾಟ್ಸನ್ ರನೌಟ್ಗೆ ಬಲಿಯಾದರು. ಶಾರ್ದೂಲ್ ಠಾಕೂರ್ 5ನೇ ಎಸೆತದಲ್ಲಿ 2 ರನ್ ಗಳಿಸಿದರೆ, ಕೊನೆಯ ಎಸೆತದಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ಈ ಮೂಲಕ ಗೆಲುವು ಮುಂಬೈ ಪಾಲಾಯಿತು.
ನಿನ್ನೆ ನಡೆದ ಪಂದ್ಯ ಭಾರೀ ರೋಚಕತೆ ನೀಡಿತ್ತು. ಇದೇ ಈಗ ಚರ್ಚೆಗೆ ಕಾರಣವಾಗಿದೆ. ಐಪಿಎಲ್ ಪಂದ್ಯಗಳು ಸ್ಕ್ರಿಪ್ಟ್ ಆಧರಿಸಯೇ ನಡೆಯುತ್ತದೆ. ನಿನ್ನೆ ನಡೆದ ಮ್ಯಾಚ್ ಕೂಡ ಹಾಗೆಯೇ ಎಂದು ಅನೇಕರು ಬರೆದುಕೊಂಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಅಂಪೈರ್ಗಳು ಕೂಡ ಕಳಪೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.
Comments are closed.