ಐಪಿಎಲ್ 12ನೇ ಆವೃತ್ತಿಯಲ್ಲಿ ವಿವಾದವೊಂದು ಹುಟ್ಟಿಕೊಂಡಿದೆ. ಮಾರ್ಚ್ 25 ರಂದು ನಡೆದ ರಾಜಸ್ಥಾನ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಡುವಿನ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜಾಸ್ ಬಟ್ಟರ್ ಔಟ್ ಆದ ರೀತಿ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನದಲ್ಲಿ ಜಾಸ್ ಬಟ್ಲರ್ ಅನ್ನು ಆರ್. ಅಶ್ವಿನ್ ಮನ್ಕಡ್ ರನೌಟ್ ಮೂಲಕ ಔಟ್ ಮಾಡಿದ್ದರು.
43 ಎಸೆತಗಳಲ್ಲಿ ಅಮೋಘ 69 ಸಿಡಿಸಿದ್ದ ಬಟ್ಲರ್ ರನ್ನು ಅಶ್ವಿನ್ ಬೌಲಿಂಗ್ ಮಾಡುವ ಮುನ್ನವೇ ರನೌಟ್ ಮಾಡಿದ್ದರು. ಬ್ಯಾಟ್ಸಮನ್ಗೆ ಯಾವುದೇ ರೀತಿಯ ಎಚ್ಚರಿಕೆ ನೀಡದೇ ಔಟ್ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ದಿಗ್ಗಜರು ಸಹ ಈ ಸಂಬಂಧ ಪರ-ವಿರೋದ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರ ನಡೆಯನ್ನು ಪ್ರಶ್ನಿಸಲಾಗುತ್ತಿದೆ. ಮುಖ್ಯವಾಗಿ ಅಶ್ವಿನ್ ಯಾವುದೇ ಮುನ್ನೆಚ್ಚರಿಕೆ ನೀಡದೇ ಬಟ್ಲರ್ ಅನ್ನು ಔಟ್ ಮಾಡಿ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
He ain’t winning any spirit of cricket awards is old ashwin pic.twitter.com/ewjlxRfqMU
— 𝐄ߋߊn ᛖߎsƙ (@DeepakLee1998) March 25, 2019
ಈ ವಿವಾದ ತಾರಕ್ಕೇರುತ್ತಿದ್ದಂತೆ ಖುದ್ದು, ಕಿಂಗ್ಸ್ ಇಲೆವೆನ್ ತಂಡದ ನಾಯಕ, ಮನ್ಕಡ್ ರನೌಟ್ ವಿವಾದಾತ್ಮಕ ಆಟಗಾರ ಆರ್.ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕ್ರಿಕೆಟ್ ನಿಯಮಗಳ ಪ್ರಕಾರ ಜಾಸ್ ಬಟ್ಲರ್ ರನ್ನು ಔಟ್ ಮಾಡಿದ್ದೇನೆ. ಇಲ್ಲಿ ಕ್ರೀಡಾಸ್ಪೂರ್ತಿಯ ಪ್ರಶ್ನೆ ಎಲ್ಲಿಂದ ಉದ್ಭವ ಆಗಿದೆ ಎಂದು ತಿಳಿಯುತ್ತಿಲ್ಲ. ಐಸಿಸಿಯ ರೂಲ್ಸ್ನ 41.16 ನಿಯಮದ ಅಡಿಯಲ್ಲಿ ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸಮನ್ ಕ್ರೀಸ್ ಬಿಟ್ಟರೆ, ಆತನನ್ನು ರನೌಟ್ ಮಾಡಬಹುದು. ಈಗ ನಾನು ಮಾಡಿದ್ದು ತಪ್ಪು ಎಂದಾದರೆ ಮೊದಲು ನಿಯಮವನ್ನು ಬದಲಿಸಬೇಕಾಗುತ್ತದೆ ಎಂದು ಅಶ್ವಿನ್ ಟೀಕಾಕಾರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಮನ್ಕಡ್ ರನೌಟ್ ಎಂದರೇನು?
ಬೌಲರ್ ಚೆಂಡನ್ನು ಎಸೆಯುವ ಮುನ್ನ ಬ್ಯಾಟ್ಸಮನ್ ಕ್ರೀಸ್ ಬಿಟ್ಟರೆ, ಆಗ ಆತನನ್ನು ರನೌಟ್ ಮೂಲಕ ಔಟ್ ಮಾಡುವುದನ್ನು ಮನ್ಕಡ್ ರನೌಟ್ ಎನ್ನಲಾಗುತ್ತದೆ.
ಈ ರನೌಟ್ಗೂ ಭಾರತಕ್ಕೂ ಇದೆ ನಂಟು..!
ಈ ರನೌಟ್ ವಿಧಾನವನ್ನು ಮೊದಲು ಪ್ರಯೋಗಿಸಿದ್ದು ಭಾರತೀಯ ಆಟಗಾರ. 1947 ರಲ್ಲಿ ಭಾರತ ತಂಡದ ಆಲ್ರೌಂಡರ್ ವಿನು ಮನ್ಕಡ್ ಈ ಪ್ರಯೋಗದ ಮೂಲಕ ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ ಬಿಲ್ ಬ್ರೌನ್ ಅನ್ನು ಔಟ್ ಮಾಡಿದ್ದರು. ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಬ್ರೌನ್ ಬೌಲಿಂಗ್ ಮಾಡುವ ಮುನ್ನ ಕ್ರೀಸ್ ಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಮನ್ಕಡ್ ಬ್ರೌನ್ ವಿಕೆಟ್ ಅನ್ನು ರನೌಟ್ ಮೂಲಕ ಪಡೆದರು.
ಇದಾದ ಬಳಿಕ 2ನೇ ಟೆಸ್ಟ್ ಪಂದ್ಯದಲ್ಲೂ ಮತ್ತದೇ ತಪ್ಪು ಮಾಡಿದ್ದ ಕ್ರಿಸ್ ಬ್ರೌನ್ರನ್ನು ವಿನು ಮನ್ಕಡ್ ಔಟ್ ಮಾಡಿದರು. ಈ ಘಟನೆಯ ಬಳಿಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ರೀತಿಯ ರನೌಟ್ ಹೊಸ ಚರ್ಚೆ ಹುಟ್ಟು ಹಾಕಿತು. ಈ ವೇಳೆ ಅನೇಕರು ವಿನು ಮನ್ಕಡ್ ಅವರ ನಡೆಯನ್ನು ಪ್ರಶ್ನಿಸಿದ್ದರು. ಆದರೆ ಕ್ರಿಕೆಟ್ ದಂತಕಥೆ ಸರ್. ಡಾನ್ ಬ್ರಾಡ್ಮನ್ ಭಾರತೀಯ ಆಟಗಾರನ ಕ್ರಮವನ್ನು ಬೆಂಬಲಿಸಿದ್ದರು. ಈ ಕುರಿತು ಬ್ರಾಡ್ಮನ್ ತಮ್ಮ ಆತ್ಮಕಥೆಯಲ್ಲೂ ತಿಳಿಸಿದ್ದಾರೆ. ಅಂದು ಏಕೆ ಎಲ್ಲರೂ ಮನ್ಕಡ್ ಮಾಡಿದ ರನೌಟ್ ಅನ್ನು ಪ್ರಶ್ನಿಸಿದ್ದರು ಎಂದು ಅರ್ಥವಾಗಲಿಲ್ಲ. ನಾನ್ ಸ್ಟ್ರೈಕರ್ ಆಟಗಾರ ಬಾಲ್ ಬಿಡುವ ಮುನ್ನ ಕ್ರೀಸ್ ಬಿಡುವುದರಿಂದ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಕ್ರಿಕೆಟ್ ದಿಗ್ಗಜ ಪ್ರಸ್ತಾಪಿಸಿದ್ದರು.
ಅಂದು ವಿನು ಮನ್ಕಡ್ ಮಾಡಿದ ರನೌಟ್ ನಂತರ ಮನ್ಕಡ್ ರನೌಟ್ ಎಂದೇ ಪ್ರಖ್ಯಾತಿ ಪಡೆಯಿತು. ಇದನ್ನೇ ಮುಂದೆ ಕ್ರಿಕೆಟ್ ನಿಯಮದಲ್ಲಿ ಮನ್ಕಡಿಂಗ್ ರನೌಟ್ ಎಂದು ಕರೆಯಲಾಯಿತು.
ಮನ್ಕಡ್ ಅಸ್ತ್ರ ಪ್ರಯೋಗಿಸಿದ ಭಾರತೀಯ ಆಟಗಾರರು:
ಅಶ್ವಿನ್ಗೂ ಮುನ್ನ ಮನ್ಕಡ್ ರನೌಟ್ ಮಾಡಿ ಕೆಲ ಭಾರತೀಯ ಆಟಗಾರರು ಸುದ್ದಿಯಾಗಿದ್ದರು. ಅದರಲ್ಲಿ ಪ್ರಮುಖರು ಎಂದರೆ ಭಾರತೀಯ ಕ್ರಿಕೆಟ್ ದಂತಕಥೆ ಕಪಿಲ್ ದೇವ್. 1992 ರಲ್ಲಿ ಭಾರತ ಮತ್ತು ದಕ್ಷಿಣಾ ಆಫ್ರಿಕಾ ನಡುವೆ ಫ್ರೆಂಡ್ಶಿಪ್ ಸಿರೀಸ್ ನಡೆಯುತ್ತಿತ್ತು. ಈ ವೇಳೆ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ ಪೀಟರ್ ಕಿಸ್ಟರ್ನ್ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಡುತ್ತಿದ್ದರು. ಇದನ್ನು ಪ್ರಶ್ನಿಸಿದ ಕಪಿಲ್ ದೇವ್ ಕಿಸ್ಟರ್ನ್ಗೆ ಎರಡು ಬಾರಿ ಎಚ್ಚರಿಕೆ ನೀಡಿದರು. ಮತ್ತದೇ ತಪ್ಪು ಮಾಡಿದ ದಕ್ಷಿಣ ಆಫ್ರಿಕಾ ಆಟಗಾರನನ್ನು ಕಪಿಲ್ ದೇವ್ ಮನ್ಕಡ್ ರನೌಟ್ ಮೂಲಕ ಪೆವಿಲಿಯನ್ಗೆ ಕಳುಹಿಸಿದ್ದರು.
ಇನ್ನು ರಣಜಿ ಪಂದ್ಯದ ವೇಳೆಯು ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಪಶ್ಚಿಮ ಬಂಗಾಳದ ಆಟಗಾರ ಸಂದಿಪನ್ ದಾಸ್ ಬೌಲರ್ ಚೆಂಡೆಸುವ ಮುನ್ನ ಕ್ರೀಸ್ನಿಂದ ಕಾಲ್ಕಿತ್ತಿದ್ದರು. ಈ ವೇಳೆ ರೈಲ್ವೇಸ್ ಪರ ಬೌಲಿಂಗ್ ಮಾಡುತ್ತಿದ್ದ ಸ್ಪಿನ್ನರ್ ಮುರಳಿ ಕಾರ್ತಿಕ್ ಮನ್ಕಡ್ ರನೌಟ್ ಮೂಲಕ ದಾಸ್ರನ್ನು ಔಟ್ ಮಾಡಿದ್ದರು.
ಎರಡನೇ ಬಾರಿ ಬಲಿಯಾದ ಬಟ್ಲರ್!
ಅಂದಹಾಗೆ ಜಾಸ್ ಬಟ್ಲರ್ ಈ ರೀತಿಯಾಗಿ ಔಟ್ ಆಗಿರುವುದು ಇದು ಎರಡನೇ ಬಾರಿ. 2014 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮುನ್ನ ಕ್ರೀಸ್ ಬಿಡುವ ತಪ್ಪನ್ನು ಇಂಗ್ಲೆಂಡ್ ಬ್ಯಾಟ್ಸ್ಮನ್ ಮಾಡಿದ್ದನು. ಈ ವೇಳೆ ಲಂಕಾ ಬೌಲರ್ ಸಚಿತ್ರ ಸೇನಾನಾಯಕೆ ಮನ್ಕಡ್ ರನೌಟ್ ಮೂಲಕ ಬಟ್ಲರ್ ಅನ್ನು ಔಟ್ ಮಾಡಿದ್ದರು.
Comments are closed.