ಬೆಂಗಳೂರು: ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಕಲರ್ಫುಲ್ ಹೊಡಿ ಬಡಿ ಚುಟುಕು ಸಮರ ಐಪಿಎಲ್ 12ರ ಆವೃತ್ತಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಾಳೆ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ಸೆಣೆಸಾಟ ನಡೆಸಲಿದೆ.
ಉಭಯ ತಂಡಗಳು ಈಗಾಗಲೇ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಬಲಿಷ್ಠವಾಗಿದೆ. ಅದರಲ್ಲು ಆರ್ಸಿಬಿ ತಂಡ ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿಯಲು ತಯಾರಾಗಿದೆ. ಆರ್ಸಿಬಿ ಪರ ಆರಂಭಿಕರಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬೆಂಗಳೂರಿಗೆ ಈಬಾರಿ ಮತ್ತಷ್ಟು ಬಲ ಬಂದಿದೆ.
ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಒಂದು ಕಡೆಯಾದರೆ, ವೆಸ್ಟ್ ಇಂಡೀಸ್ನ ಹೊಡಿಬಡಿ ಆಟಗಾರ ಶಿಮ್ರೋನ್ ಹೆಟ್ಮೇರ್ ಇದೆ ಮೊದಲ ಬಾರಿಗೆ ಅಬ್ಬರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲದೆ ಕಿವೀಸ್ ದಾಂಡಿಗ ಕಾಲಿನ್ ಗ್ರ್ಯಾಂಡ್ಹೋಮ್, ಶಿವಂ ದುಬೆ, ಮೊಯೀನ್ ಅಲಿ, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಬಲ್ಲರು. ಬೌಲಿಂಗ್ನಲ್ಲೂ ವೇಗಿಗಳಾಗಿ ಉಮೇಶ್ ಯಾದವ್ ಹಾಗೂ ನೇಥನ್ ಕೌಲ್ಟರ್ ನೈಲ್ ಇದ್ದರೆ ಸ್ಪಿನ್ ಜಾದು ಮಾಡಲು ಯಜುವೇಂದ್ರ ಚಹಾಲ್ ಕಾದುಕುಳಿತಿದ್ದಾರೆ.
ಇತ್ತ ಧೋನಿ ನಾಯಕತ್ವದ ಹಾಲಿ ಚಾಂಪಿಯನ್ ಚೆನ್ನೈ ತಂಡ ಅನುಭವದ ಜೊತೆ ಬಲಿಷ್ಠ ಆಟಗಾರರಿಂದ ಕೂಡಿದೆ. ಶೇನ್ ವಾಟ್ಸನ್, ಸುರೇಶ್ ರೈನಾ, ಅಂಬಟಿ ರಾಯುಡು, ಕೇದರ್ ಜಾಧವ್ ಒಂದು ಕಡೆಯಾದರೆ, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ ಹಾಗೂ ಡೇವಿಡ್ ವಿಲ್ಲೆ ಹೊಡಿಬಡಿ ಆಟಕ್ಕೆ ಹೇಳಿಮಾಡಿಸಿದ ಆಟಗಾರರು.
ಬೌಲಿಂಗ್ನಲ್ಲಿ ಕೊಂಚ ವೀಕ್ ಆಗಿರುವ ಚೆನ್ನೈ ಪ್ರಮುಖ ಅಸ್ತ್ರವನ್ನೆ ಕಳೆದುಕೊಂಡಿದೆ. ಪ್ರಮುಖ ಬೌಲರ್ ಲುಂಗಿ ನಿಗಿಡಿ ಗಾಯಕ್ಕೆ ತುತ್ತಾಗಿ ಬಹುತೇಕ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರು ಬೌಲಿಂಗ್ ವಿಭಾಗದಲ್ಲಿ ಬಲ ತುಂಬಲು ಮೋಹಿತ್ ಶರ್ಮಾ ಕಮ್ಬ್ಯಾಕ್ ಮಾಡಿದ್ದು, ಇವರ ಜೊತೆ ಮಿಚೆಲ್ ಸ್ಯಾಂಟನರ್, ದೀಪಕ್ ಚಹಾರ್ ಇದ್ದಾರೆ.
ಅಂಕಿ ಅಂಶದ ಪ್ರಕಾರ ಚೆನ್ನೈ ತಂಡವೆ ಬಲಿಷ್ಠವಾಗಿದೆ. ಈವರೆಗೆ ಐಪಿಎಲ್ನಲ್ಲಿ ಉಭಯ ತಂಡಗಳು ಒಟ್ಟು 23 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ 15 ಪಂದ್ಯಗಳಲ್ಲಿ ಗೆಲುವು ಕಂಡರೆ, ಆರ್ಸಿಬಿ ಕೇವಲ 7 ಪಂದ್ಯದಲ್ಲಷ್ಟೆ ಜಯ ಸಾಧಿಸಿದೆ. ಒಂದು ಪಂದ್ಯ ಡ್ರಾ ಆಗಿದೆ.
ಅದೇನೆಯಿದ್ದರು ಕೊಹ್ಲಿ ಪಡೆ ಗೆಲುವಿನ ವಿಶ್ವಾಸದಲ್ಲಿದ್ದು, ಇತ್ತ ಧೋನಿ ಕೂಡ ಜಯದ ಮೂಲಕ ಟೂರ್ನಿಯಲ್ಲಿ ಆರಂಭ ಪಡೆಯಬೇಕೆಂದು ರಣತಂತ್ರ ಹೆಣೆದಿದ್ದಾರೆ. ಒಟ್ಟಾರೆ ನಾಳೆ ರಾತ್ರಿ 8 ಗಂಟೆಗೆ ಹೈವೋಲ್ಟೇಜ್ ಪಂದ್ಯವಾಗುವ ಎಲ್ಲ ನಿರೀಕ್ಷೆಯಿದೆ.
ಸರಳ ರೀತಿಯಲ್ಲಿ ಉದ್ಘಾಟನೆ:
ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಈ ಬಾರಿ ರಂಗೀನ್ ದುನಿಯಾದ ಸ್ಟಾರ್ ನಟ-ನಟಿಯರು ಕಾಣಿಸಿಕೊಳ್ಳುವುದಿಲ್ಲ. ಸರಳ ರೀತಿಯಲ್ಲೇ ಉದ್ಘಾಟನಾ ಸಾಮಾರಂಭವನ್ನು ಆಯೋಜಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ತೀರ್ಮಾನಿಸಿದೆ. ಅಲ್ಲದೆ ಅದ್ಧೂರಿ ಒಪನಿಂಗ್ಗಾಗಿ ಮೀಸಲಿಟ್ಟ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನೀಡಲು ನಿರ್ಧರಿಸಲಾಗಿದೆ.
Comments are closed.