ಭಾರತದಲ್ಲಿ ಅತಿ ಹೆಚ್ಚು ಫುಟ್ಬಾಲ್ ಪ್ರೇಮಿಗಳಿರುವ ರಾಜ್ಯವೆಂದರೆ ಕೇರಳ. ಫಿಫಾ ವರ್ಲ್ಡ್ ಕಪ್ ಸಮಯದಲ್ಲಂತೂ ಕೇರಳದಲ್ಲಿಯೇ ವಿಶ್ವಕಪ್ ನಡೆಯುತ್ತಿದೆ ಎಂಬ ರೀತಿಯಲ್ಲಿ ಅಲ್ಲಿನ ಜನರು ಸಂಭ್ರಮಿಸಿದ್ದರು. ಗಲ್ಲಿ ಗಲ್ಲಿಗೆ ಫುಟ್ಬಾಲ್ ತಂಡಗಳನ್ನು ಹೊಂದಿರುವ ದೇವರನಾಡಿನ ಕ್ರೀಡಾಪಟುವೊಬ್ಬ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಅಷ್ಟೇ ಅಲ್ಲ ಖುದ್ದು ಕ್ರೀಡಾ ಸಚಿವರಿಂದ ಶಹಭಾಷ್ಗಿರಿ ಪಡೆದುಕೊಂಡಿದ್ದಾನೆ. ಇಷ್ಟೆಲ್ಲಾ ಸುದ್ದಿಯಾಗಲು ಕಾರಣ ರಿದ್ವಾನ್ ಫುಟ್ಬಾಲ್ ಕ್ರೇಜ್.
ಮಲಪ್ಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ ಸೆವೆನ್ಸ್ ಲೀಗ್ ಫುಟ್ಬಾಲ್ ಟೂರ್ನಿ ಏಪರ್ಡಿಸಲಾಗಿತ್ತು. ಈ ಟೂರ್ನಿಯಲ್ಲಿ ಫಿಫಾ ಮಂಜೇರಿ ತಂಡ ಕಣದಲ್ಲಿತ್ತು. ಆದರೆ ಪಂದ್ಯವಿದ್ದ ದಿನವೇ ರಿದ್ವಾನ್ ಎಂಬ ಆಟಗಾರನ ಮದುವೆ ಕೂಡ ಫಿಕ್ಸ್ ಆಗಿತ್ತು. ಇದರಿಂದ ರಿದ್ವಾನ್ ಅಂದು ವರನಾಗಿ ಮಂಟಪದಲ್ಲಿ ಮಿಂಚುತ್ತಿದ್ದರು. ಇದೇ ವೇಳೆ ಮೈದಾನಕ್ಕಿಳಿದ ಫಿಫಾ ಮಂಜೇರಿ ತಂಡಕ್ಕೆ ಬದಲಿ ಡಿಫೆಂಡರ್ ಆಟಗಾರನ ಕೊರತೆ ಉಂಟಾಗಿದೆ.
ಈ ವಿಷಯ ಮದುವೆ ಮನೆಯಲ್ಲಿ ಟಿಪ್ಟಾಪ್ ಡ್ರೆಸಿಂಗ್ ಮಾಡಿಕೊಂಡಿದ್ದ ರಿದ್ವಾನ್ ಕಿವಿಗೆ ಬಿದ್ದಿದೆ. ಈ ಹೊತ್ತಿಗೆ ವಧು-ವರರು ಜೊತೆಯಾಗಿ ನಿಂತು ಕ್ಯಾಮೆರಾಗೆ ಪೋಸ್ ನೀಡುವ ಬಿಝಿಯಲ್ಲಿದ್ದರು. ಆದರೆ ತಂಡವು ಸಂಕಷ್ಟದಲ್ಲಿರುವುದು ತಿಳಿದ ರಿದ್ವಾನ್ ಏನು ಮಾಡಬೇಕೆಂಬುದೇ ತೋಚಲಿಲ್ಲ. ಅದು ಕೂಡ ಸೆಮಿ ಫೈನಲ್ ಮ್ಯಾಚ್. ಇದರಿಂದ ಮತ್ತೇನು ಯೋಚಿಸಲಿಲ್ಲ ರಿದ್ವಾನ್.
ಮದುಮಗಳೊಂದಿಗೆ ಕ್ಷಮಿಸು, ಐದೇ ಐದು ನಿಮಿಷದಲ್ಲಿ ಬರುವುದಾಗಿ ವಿನಂತಿಸಿ ಕೊಂಡಿದ್ದಾರೆ. ಹಾಗೆಯೇ ಯಾರಿಗೂ ಹೇಳದೇ ಮದುವೆ ಮಂಟಪದಿಂದ ರಿದ್ವಾನ್ ಎಸ್ಕೇಪ್ ಆಗಿದ್ದಾನೆ. ಆಟದ ಸಮಕ್ಕೆ ಸರಿಯಾಗಿ ಮೈದಾನಕ್ಕಿಳಿದ ರಿದ್ವಾನ್ ಫಿಫಾ ಮಂಜೇರಿ ತಂಡವನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಮದುವೆ ದಿನವೇ ಮೈದಾನಕ್ಕೆ ಓಡಿದ ರಿದ್ವಾನ್ ಮನೆಗೆ ಹಿಂತಿರುಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಅದಾಗ್ಯೂ ಎಲ್ಲರನ್ನು ಸಂಭಾಳಿಸಿದ ನವ ವರ ಸದ್ಯ ಖುಷಿಯಾಗಿದ್ದಾರೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಭಾರತದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮೆಚ್ಚುಗೆ ಸೂಚಿಸಿದ್ದಾರೆ. ರಿದ್ವಾನ್ ಅವರ ಕ್ರೀಡಾ ಪ್ರೇಮವನ್ನು ರಾಜ್ಯವರ್ಧನ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೊಗಳಿ, ನನಗೆ ಈತನನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಹಸೆಮಣೆ ಏರುವ ಸಂದರ್ಭದಲ್ಲಿ ಎಸ್ಕೇಪ್ ಆದ ರಿದ್ವಾನ್ ಸದ್ಯ ಮಂಜೇರಿಯ ಸ್ಟಾರ್ ಆಗಿ ಬಿಟ್ಟಿದ್ದಾರೆ.
Comments are closed.