ಮುಂಬೈ: ಭಾರತದ ಕ್ರಿಕೆಟ್ ದಂತಕಥೆ ಮತ್ತು ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡಿ ಕ್ರಿಕೆಟಿಗರಾದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಕಾಫೀ ವಿತ್ ಕರಣ್ ಸೀಸನ್ 6 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಇದೀಗ ಭಾರತೀಯ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಕರಣ್ ಜೋಹರ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈ ಜೋಡಿ ಸಚಿನ್ ತೆಂಡೂಲ್ಕರ್ ಗಿಂತ ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಎಂದು ಹೇಳಿದ್ದಾರೆ.
ಟೀಂ ಇಂಡಿಯಾದ ಇಬ್ಬರು ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್ಮನ್ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆ ಸ್ವಲ್ಪವೂ ಯೋಚಿಸದೇ ರಾಹುಲ್ ಹಾಗೂ ಪಾಂಡ್ಯ ಕೊಹ್ಲಿ ಹೆಸರನ್ನು ಸೂಚಿಸಿದರು. ಇದು ಕ್ರಿಕೆಟ್ ದೇವರು ಸಚಿನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ನೆಟ್ಟಿಗರು ಉಭಯ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದು, ಆಟದ ಬಗ್ಗೆ ಏನೂ ಗೊತ್ತಿಲ್ಲದೇ ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ.
ಎಲ್ಲ ಕಾಲದಲ್ಲಿಯೂ ಸಚಿನ್ ಓರ್ವ ಶ್ರೇಷ್ಠ ಆಟಗಾರ ಎಂದು ಕ್ರಿಕೆಟ್ ದಂತಕತೆಗಳಾದ ವಿವಿಯನ್ ರಿಚರ್ಡ್ಸ್, ಡಾನ್ ಬ್ರಾಡ್ಮನ್, ಸುನಿಲ್ ಗವಾಸ್ಕರ್, ಬ್ರೆಟ್ ಲಿ, ವಾಸಿಂ ಅಕ್ರಮ್ ಹಾಗೂ ಗಂಗೂಲಿ ಮುಂತಾದ ಆಟಗಾರರೇ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಪ್ರತಿಯೊಬ್ಬ ನಿಜ ಆಟಗಾರನಿಗೆ ಗೊತ್ತು ಯಾರು ಉತ್ತಮ ಬ್ಯಾಟ್ಸಮನ್ ಎಂದು ಟ್ವಿಟರ್ ಬಳಕೆದಾರನೊಬ್ಬ ಅಸಮಾಧಾನ ಹೊರಹಾಕಿದ್ದರೆ, ಮತ್ತೊಬ್ಬ ಕೇವಲ ಟೀಂನಲ್ಲಿ ಉಳಿಯುವುದಕ್ಕೆ ಈ ರೀತಿಯ ಚೀಪ್ ಗಿಮಿಕ್ಗಳನ್ನು ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
Comments are closed.