ಕ್ರೀಡೆ

ಬೆನ್ನು ಬೆನ್ನಿಗೆ ವಿಕೆಟ್ ಪತನದಿಂದ ಸೋಲು: ಕೊಹ್ಲಿ

Pinterest LinkedIn Tumblr


ಕೇಪ್ ಟೌನ್: ಬೌಲರ್‌ಗಳು ಶಕ್ತಿಮೀರಿ ಪ್ರದರ್ಶನ ನೀಡಿರುವ ಹೊರತಾಗಿಯೂ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 72 ರನ್ ಅಂತರದ ಹೀನಾಯ ಸೋಲಿಗೊಳಗಾಗಿದೆ.

ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದ ಹಿನ್ನಡೆಗೊಳಗಾಗಿದೆ. ಅಲ್ಲದೆ ಸರಣಿ ಗೆಲುವಿಗಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೊಳಗಾಗಿದೆ.

ಗೆಲುವಿಗಾಗಿ 208 ರನ್‌ಗಳ ಮೊತ್ತ ಬೆನ್ನತ್ತಿದ್ದ ಭಾರತೀಯ ತಂಡವು 135ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು.

ಪಂದ್ಯದ ಬಳಿಕ ಈ ಬಗ್ಗೆ ಉತ್ತರಿಸಿರುವ ನಾಯಕ ಕೊಹ್ಲಿ, ಬೆನ್ನು ಬೆನ್ನುಗಿ ವಿಕೆಟುಗಳು ಪತನಗೊಂಡಿರುವುದು ಸೋಲಿಗೆ ಕಾರಣವಾಯಿತು ಎಂದರು.

ಹೌದು, 72 ರನ್‌ಗಳಿಂದ ಸೋಲಬೇಕಾಯಿತು. ಬಹುಶ: ಮೊದಲ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡವನ್ನು 220 ರನ್‌ಗಳಿಗೆ ನಿಯಂತ್ರಿಸಬಹುದಾಗಿತ್ತು ಎಂದವರು ವಿವರಿಸಿದರು.

ಆದರೆ ಸೋಲಿಗೆ ಕಾರಣಗಳನ್ನು ಹುಡುಕುವ ಬದಲು ಆದ ತಪ್ಪುಗಳನ್ನು ಸರಿಪಡಿಸಬೇಕಿದೆ. ಸತತವಾಗಿ ವಿಕೆಟುಗಳನ್ನು ಕಳೆದುಕೊಂಡಿರುವುದರಿಂದ ಜತೆಯಾಟಗಳು ದಾಖಲಾಗಿಲ್ಲ. ಹಾಗಾಗಿ ಹಿನ್ನಡೆ ಎದುರಿಸಬೇಕಾಯಿತು ಎಂದರು.

ಇದೊಂದು ಉತ್ತಮ ಪ್ರಯತ್ನವಾಗಿತ್ತು. ಆದರೆ ಇದರ ಶ್ರೇಯಸ್ಸು ಎದುರಾಳಿ ತಂಡಕ್ಕೆ ಸಲ್ಲಬೇಕು. ಮೊದಲ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ 99 ರನ್ ಜತೆಯಾಟ ನೀಡಿರುವುದನ್ನು ಬಿಟ್ಟರೆ ಸತತವಾಗಿ ವಿಕೆಟುಗಳನ್ನು ಕಳೆದುಕೊಂಡೆವು ಎಂದರು.

ಅದೇ ಹೊತ್ತಿಗೆ 20 ವಿಕೆಟುಗಳನ್ನು ಪಡೆದರ ಹೊರತಾಗಿಯೂ ಬ್ಯಾಟ್ಸ್‌ಮನ್‌‌ಗಳು ಉತ್ತಮ ಪ್ರದರ್ಶನ ನೀಡದಿದ್ದಲ್ಲಿ ನಮ್ಮ ಪ್ರಯತ್ನವೂ ಪರಿಗಣನೆಗೆ ಬರುವುದಿಲ್ಲ ಎಂದು ಕೊರಗಿದರು.

ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಯನ್ನು ನಾಯಕ ಕೊಂಡಾಡಿದರು. ಈ ಪೈಕಿ ಮೊದಲ ಪಂದ್ಯವನ್ನಾಡುತ್ತಿರುವ ಬುಮ್ರಾ ಎದುರಾಳಿಗೆ ಹೆಚ್ಚಿನ ಕಂಟಕ ಸೃಷ್ಟಿ ಮಾಡಿದ್ದರು ಎಂದು ಉಲ್ಲೇಖಿಸಿದರು.

ಹಾಗೆಯೇ ಆಲ್‌ರೌಂಡ್ರ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ ನಿರ್ವಹಣೆಯನ್ನು ಕೊಹ್ಲಿ ಶ್ಲಾಘಿಸಿದರು.

Comments are closed.