ವಿವಾದಗಳಿಂದಲೇ ಸದ್ದು ಮಾಡುವುದು ಹಿಂದಿ ‘ಬಿಗ್ಬಾಸ್’ ಸರಣಿಯ ವಿಶೇಷತೆ. ಅತ್ತ ಈ ಸರಣಿಗೆ ಅದ್ದೂರಿ ಚಾಲನೆ ಸಿಗುತ್ತಿದ್ದಂತೆ ಇತ್ತ ಕ್ರಿಕೆಟಿಗ ಯುವರಾಜ್ ಸಿಂಗ್ ತಲೆಬಿಸಿ ಮಾಡಿಕೊಂಡಿದ್ದಾರೆ. ತಮ್ಮ ಪಾಡಿಗೆ ತಾವು ಕ್ರಿಕೆಟ್ ಆಡಿಕೊಂಡಿರುವ ಯುವಿಗೂ ಬಿಗ್ಬಾಸ್ಗೂ ಯಾವುದೇ ಸಂಬಂಧ ಇಲ್ಲ. ಆದರೆ ಯುವಿ ಸಹೋದರ ಜೋರಾವರ್ ಸಿಂಗ್ ಪತ್ನಿ ಆಕಾಂಕ್ಷಾ ‘ಬಿಗ್’ ಮನೆಗೆ ಕಾಲಿಟ್ಟಿದ್ದಾರೆ. ಅಲ್ಲಿ, ಸಿಂಗ್ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಜೋರಾವರ್ ಜತೆ ಆಕಾಂಕ್ಷಾ ವಿವಾಹವಾಗಿತ್ತು. ಆದರೆ 4 ತಿಂಗಳಲ್ಲೇ ಮದುವೆ ಮುರಿದು ಬಿತ್ತು. ಈಗ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆಲ್ಲ ನೇರ ಹೊಣೆ ಯುವರಾಜ್ ತಾಯಿ ಶಬನಮ್ ಸಿಂಗ್ ಎಂಬುದು ಆಕಾಂಕ್ಷಾ ಆರೋಪ. ‘ಮದುವೆ ಆದಾಗ ಎಲ್ಲವೂ ಚೆನ್ನಾಗಿತ್ತು. ಖ್ಯಾತ ಕ್ರಿಕೆಟಿಗನ ಮನೆಯ ಸೊಸೆ ಆಗಿದ್ದೇನೆ ಎಂಬ ಸಂತಸವಿತ್ತು. ಆದರೆ ಅದು ಕೆಲವೇ ದಿನಗಳಲ್ಲಿ ಮಾಯವಾಯ್ತು. ಅತ್ತೆ ನನ್ನನ್ನು ಸರಿ ನೋಡಿಕೊಳ್ಳಲಿಲ್ಲ. ಹಾಗಂತ ಯುವರಾಜ್ ಮತ್ತು ಅವರ ಸಹೋದರನ ಮೇಲೆ ಯಾವುದೇ ದ್ವೇಷವಿಲ್ಲ. ನನ್ನ ಅಸಮಾಧಾನವೇನಿದ್ದರೂ ಶಬನಮ್ ಬಗ್ಗೆ’ ಎಂದು ಆನ್ಏರ್ನಲ್ಲಿಯೇ ಅವರು ಆರೋಪಿಸಿದ್ದು ಸಿಂಗ್ ಕುಟುಂಬಕ್ಕೆ ತಲೆನೋವಾಗಿದೆ.
‘ವಿಚ್ಛೇದನಕ್ಕಾಗಿ ಆಕೆಗಿಂತ ಮೊದಲು ನಾವೇ ಅರ್ಜಿ ಸಲ್ಲಿಸಿದ್ದು. ಈಗಾಗಲೇ ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ಈ ಬಗ್ಗೆ ನಾನು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ’ ಎಂಬುದು ಶಬನಮ್ ಮಾತು. ಅಲ್ಲದೆ, ದುರುದ್ದೇಶದಿಂದ ಆಕಾಂಕ್ಷಾ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇಲ್ಲಿಯವರೆಗೂ ಸುಮ್ಮನಿದ್ದು, ಈಗ ಏಕಾಏಕಿ ಬಿಗ್ಬಾಸ್ ವೇದಿಕೆಯಲ್ಲಿ ಹೇಳಿರುವುದರ ಹಿಂದೆ ಏನೋ ಕಾರಣ ಇದೆ ಎಂಬುದು ಶಬನಮ್ ವಾದ. ಬಿಗ್ಬಾಸ್ ಮುಗಿಯುವುದರೊಳಗೆ ಆಕಾಂಕ್ಷಾ ಇನ್ನೆಷ್ಟು ಬಾಂಬ್ ಸಿಡಿಸುತ್ತಾರೋ ಗೊತ್ತಿಲ್ಲ.
Comments are closed.