ಕ್ರೀಡೆ

16 ವರ್ಷಗಳ ಹಿಂದೆ ಬಸ್ ಅಪಘಾತದಲ್ಲಿ ಕಾಲು ಕಳೆದುಕೊಂಡಾತ ರಿಯೊದಲ್ಲಿ ಬಂಗಾರ ಗೆದ್ದ!

Pinterest LinkedIn Tumblr

mariyappan-thangaveluರಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ತಮಿಳುನಾಡು ಮೂಲದ ಮರಿಯಪ್ಪನ್ ತಂಗವೇಲು ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹೈಜಂಪ್‍ನಲ್ಲಿ 1.86 ಮೀಟರ್ ಜಿಗಿದು ಚಿನ್ನ ಗೆದ್ದ ಈ ಯುವಕನ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು, ಸೇಲಂನ ಪುಟ್ಟ ಹಳ್ಳಿಯೊಂದರ ಹುಡುಗ ರಿಯೊದಲ್ಲಿ ‘ಬಂಗಾರ’ ಗೆದ್ದ ಸಾಧನೆಯ ಕಥೆ ಇಲ್ಲಿದೆ.

16 ವರುಷಗಳ ಹಿಂದೆ ಸಂಭವಿಸಿದ ಬಸ್ ಅಪಘಾತದಲ್ಲಿ ತಂಗವೇಲುವಿನ ಬಲ ಕಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು. ಪರಿಣಾಮ ಮಂಡಿಯ ಕೆಳಗಿನ ಭಾಗವನ್ನು ಕತ್ತರಿಸಬೇಕಾಗಿ ಬಂತು. ವಾಲಿಬಾಲ್ ಆಟದಲ್ಲಿ ಚುರುಕಾಗಿದ್ದ ಈತನಿಗೆ ಒಂದ ಕಾಲು ಕಳೆದುಕೊಂಡಾಗ ಬದುಕೇ ದುಸ್ತರವೆನಿಸಿಬಿಟ್ಟಿತ್ತು. ಆ ಹೊತ್ತಲ್ಲಿ ತಂಗವೇಲುವಿನ ಅಮ್ಮ ಸರೋಜಾ ಮಗನಿಗೆ ಧೈರ್ಯ ತುಂಬಿದರು. ಅಪ್ಪ ಬಿಟ್ಟು ಹೋದ ಕುಟುಂಬದಲ್ಲಿ ಅಮ್ಮನೇ ಆಧಾರ ಸ್ತಂಬವಾಗಿದ್ದರು, ಬೇರೆ ಯಾರ ಸಹಾಯವಿಲ್ಲದೆಯೇ ಸರೋಜಾ ತನ್ನ ಮಕ್ಕಳನ್ನು ಬೆಳೆಸಿದರು. ತರಕಾರಿ ಮಾರಿ, ಮನೆಕೆಲಸ ಮಾಡಿ ದಿನ ಸಾಗಿಸುತ್ತಿದ್ದ ಸರೋಜಾ, ಮಗ ಮತ್ತೆ ಆಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಿದರು.

14ನೇ ವಯಸ್ಸಿನಲ್ಲಿ ನಡೆದ ಕ್ರೀಡಾ ಸ್ಪರ್ಧೆಯೊಂದರಲ್ಲಿ ತಂಗವೇಲು ಎರಡನೇ ಸ್ಥಾನ ಗಳಿಸಿದ್ದರು. ಹುಡುಗನ ಸಾಮರ್ಥ್ಯವನ್ನು ಗುರುತಿಸಿ ಸತ್ಯನಾರಾಣ ಎಂಬ ಕೋಚ್, ಈತನಿಗೆ ಮುಂದಿನ ತರಬೇತಿ ನೀಡಿದರು. ಇದರ ಫಲವಾಗಿ ತಂಗವೇಲು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವಂತಾಯಿತು.ಆಗ ತಂಗವೇಲುವಿಗೆ 18 ವರ್ಷ!

ಆನಂತರ ಬೆಂಗಳೂರಿನಲ್ಲಿ ತರಬೇತಿ ಪಡೆದ ಈತ 2015ರಲ್ಲಿ ಸೀನಿಯರ್ ಲೆವೆಲ್ ಸ್ಪರ್ಧೆಯಲ್ಲಿ ನಂಬರ್ 1 ಸ್ಥಾನಕ್ಕೇರಿದರು. ಐಪಿಸಿ ಟ್ಯುನೀಸಿಯಾ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ 1.78 ಮೀಟರ್ ಜಿಗಿದು ಚಿನ್ನದ ಪದಕ ಗೆಲ್ಲುವ ಮೂಲಕ ಈತ ಪ್ಯಾರಾಲಿಂಪಿಕ್ಸ್ ‍ಗೆ ಅರ್ಹತೆ ಪಡೆದುಕೊಂಡರು.

2015ರಲ್ಲಿ ಬಿಬಿಎ ಪದವಿ ಪೂರೈಸಿದ ತಂಗವೇಲು ಸದ್ಯ ಕೆಲಸದ ಹುಡುಕಾಟದಲ್ಲಿದ್ದಾರೆ.

ತಂಗವೇಲು ಅವರ ಗೆಲುವನ್ನು ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯವಡಗಂಪಟ್ಟಿ ಗ್ರಾಮದಲ್ಲಿ ಪಟಾಕಿ ಸಿಡಿಸಿ ಆಚರಣೆ ಮಾಡಲಾಗಿದೆ. ದಿನವೊಂದಕ್ಕೆ ರು.75ರಿಂದ ರು. 100 ಸಂಪಾದನೆ ಮಾಡಿ ನಾಲ್ಕು ಮಕ್ಕಳನ್ನು ಸಾಕುತ್ತಿರುವ ಅಮ್ಮ ಸರೋಜಾ ಮಗನಿಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದಾಗ ಅವರ ಕಣ್ಣಾಲಿಗಳಿಂದ ಖುಷಿಯ ಕಣ್ಣೀರು ಜಿನುಗಿತ್ತು.

Comments are closed.