ಮನೋರಂಜನೆ

ಭಾಗವಹಿಸುವುದಾಗಿ ಹೇಳಿದ್ದ ಕಿಚ್ಚ ಸುದೀಪ್ ಈ ವಾರವೂ ‘ಬಿಗ್ ಬಾಸ್’ ವಾರಾಂತ್ಯದ ಸಂಚಿಕೆಗಳಲ್ಲಿ ಭಾಗವಹಿಸಲ್ಲ ! ಕಾರಣವೇನು ಗೊತ್ತೇ…?

Pinterest LinkedIn Tumblr

ಎರಡು ವಾರಗಳ ಕಾಲ ಅನಾರೋಗ್ಯದಿಂದ ಬಳಲಿದ್ದ ಕಿಚ್ಚ ಸುದೀಪ್ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವ ಕಾರಣ ಈ ವಾರ ‘ಬಿಗ್ ಬಾಸ್’ ವೀಕೆಂಡ್ ಎಪಿಸೋಡ್ ಶೂಟಿಂಗ್‌ಗೆ ಹಾಜರ್ ಆಗಲು ಕಿಚ್ಚ ಸುದೀಪ್ ಮನಸ್ಸು ಮಾಡಿದ್ದರು. ಆದರೆ, ಈಗಿನ ಸಂಕಷ್ಟದ ಸನ್ನಿವೇಶವನ್ನು ಪರಿಗಣಿಸಿ ಸುದೀಪ್ ಜೊತೆಗಿನ ವಾರಾಂತ್ಯದ ಸಂಚಿಕೆಗಳ ಚಿತ್ರೀಕರಣವನ್ನು ಕಲರ್ಸ್ ಕನ್ನಡ ವಾಹಿನಿ ಕ್ಯಾನ್ಸಲ್ ಮಾಡಿದೆ.

‘ಬಿಗ್ ಬಾಸ್’ ವೀಕೆಂಡ್ ಸಂಚಿಕೆಗಳ ಚಿತ್ರೀಕರಣ ಕ್ಯಾನ್ಸಲ್ ಆಗಿರುವ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಟ್ವೀಟ್ ಮಾಡಿ ಮಾಹಿತಿ ನೀಡಿತ್ತು. ”ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ‘ಬಿಗ್ ಬಾಸ್’ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಉಪಸ್ಥಿತಿ ಇರುವುದಿಲ್ಲ” ಎಂದು ಕಲರ್ಸ್ ಕನ್ನಡ ವಾಹಿನಿ ಟ್ವೀಟ್ ಮಾಡಿತ್ತು.

ಇದೀಗ ಇದೇ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ”ವೀಕ್ಷಕರ ನಿರಾಸೆ ನನಗೆ ಅರ್ಥವಾಗುತ್ತದೆ. ಆದರೆ, ನಿಯಮಗಳನ್ನು ನಾವು ಪಾಲಿಸಬೇಕು” ಎಂದು ಕಿಚ್ಚ ಸುದೀಪ್ ಇದೀಗ ಟ್ವೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಟ್ವೀಟ್
”ಚಿತ್ರೀಕರಣದಲ್ಲಿ ಕೆಲವೇ ಕೆಲವು ಮಂದಿ ಭಾಗಿಯಾದರೂ ಇಂದಿನ ಸಂಕಷ್ಟದ ಸನ್ನಿವೇಶ ಅದಕ್ಕೆ ಸಪೋರ್ಟ್ ಮಾಡುವುದಿಲ್ಲ ಎಂಬ ಕಾರಣಕ್ಕೆ ಕ್ಯಾನ್ಸಲ್ ಮಾಡಲಾಗಿದೆ. ವೀಕ್ಷಕರ ನಿರಾಸೆ ನನಗೆ ಅರ್ಥವಾಗುತ್ತದೆ. ಆದರೆ, ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಮುಂದೆ ಒಳ್ಳೆಯದಾಗುತ್ತೆ ಎಂದು ಆಶಿಸೋಣ. ಆದಷ್ಟು ಬೇಗ ‘ಬಿಗ್ ಬಾಸ್’ ವೀಕೆಂಡ್ ಎಪಿಸೋಡ್‌ಗೆ ವಾಪಸ್ ಆಗುತ್ತೇನೆ ಎಂದು ಆಶಿಸುತ್ತೇನೆ” ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಇಲ್ಲದೆ ಮೂರನೇ ವಾರ!
ಅನಾರೋಗ್ಯದ ಕಾರಣದಿಂದ ಕಳೆದ ಎರಡು ವಾರಗಳ ಕಾಲ ‘ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಹಾಜರ್ ಆಗಲಿಲ್ಲ. ಅನಾರೋಗ್ಯದಿಂದ ಕಿಚ್ಚ ಸುದೀಪ್ ಇದೀಗ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಇಂದು ‘ಬಿಗ್ ಬಾಸ್’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸುದೀಪ್ ಮನಸ್ಸು ಮಾಡಿದ್ದರು. ಆದರೆ ಕೊರೊನಾಂತಕದಿಂದ ‘ಬಿಗ್ ಬಾಸ್’ ವೀಕೆಂಡ್ ಎಪಿಸೋಡ್ ಶೂಟಿಂಗ್ ಕ್ಯಾನ್ಸಲ್ ಆಗಿದೆ. ಸುದೀಪ್ ಅನುಪಸ್ಥಿತಿಯಲ್ಲಿ ಎರಡು ವಾರಗಳ ವಾರಾಂತ್ಯದ ಸಂಚಿಕೆಗಳಲ್ಲಿ ರಿಯಾಲಿಟಿಗೇ ಪ್ರಾಮುಖ್ಯತೆ ನೀಡಲಾಗಿತ್ತು. ಇದೀಗ ಮೂರನೇ ವಾರವೂ ಅದೇ ರೀತಿ ‘ಬಿಗ್ ಬಾಸ್’ ಕಾರ್ಯಕ್ರಮ ಮುಂದುವರೆಯಲಿದೆ.

Comments are closed.