ಮನೋರಂಜನೆ

ಸುಶಾಂತ್ ಸಿಂಗ್​ರದ್ದು ಹತ್ಯೆಯಲ್ಲ? ಈ ಕುರಿತು ಸಿಬಿಐ ತನಿಖಾ ವರದಿ ಸಲ್ಲಿಕೆ ಸಾಧ್ಯತೆ

Pinterest LinkedIn Tumblr


ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಎಂಬ ಅಭಿಪ್ರಾಯಕ್ಕೆ ಸಿಬಿಐ ಬಂದಿದೆ ಎಂದು ಮೂಲಗಳು ಹೇಳುತ್ತಿವೆ.

ಸುಶಾಂತ್ ಸಿಂಗ್ ಅವರನ್ನ ಕೊಲೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ತನಿಖೆ ಬಹುತೇಕ ಮುಗಿದಿದೆ ಎನ್ನಲಾಗಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಸುಶಾಂತ್ ಸಿಂಗ್ ಅವರ ಕೊಲೆಯಾಗಿರುವುದಕ್ಕೆ ಸಿಬಿಐಗೆ ಯಾವುದೇ ದೃಢ ಸಾಕ್ಷ್ಯಾಧಾರಗಳು ಸಿಕ್ಕಿಲ್ಲವೆನ್ನಲಾಗಿದೆ. ಸದ್ಯದಲ್ಲೇ ಸಿಬಿಐ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟರೆ, ಅವರ ಆತ್ಮಹತ್ಯೆಗೆ ಯಾರಾದರೂ ಪ್ರಚೋದನೆ ನೀಡಿದ್ದಾರಾ ಎಂಬ ಅಂಶದ ಆಧಾರದ ಮೇಲೆ ನ್ಯಾಯಾಲಯ ಸಿಬಿಐಗೆ ಮುಂದಿನ ನಿರ್ದೇಶನ ನೀಡುವ ಸಾಧ್ಯತೆ ಇದೆ ಎಂದು ಝೀ ನ್ಯೂಸ್​ನಲ್ಲಿ ಪ್ರಕಟವಾದ ಒಂದು ವರದಿ ಹೇಳುತ್ತಿದೆ. ಸುಶಾಂತ್ ಸಿಂಗ್ ರಾಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಆರೋಪ ಇದೆ. ಸಿಬಿಐ ವರದಿಯಲ್ಲಿ ಈ ಬಗ್ಗೆ ಏನಾದರೂ ಸುಳಿವು ಇದೆಯಾ ಎಂಬುದು ಮುಂದಿನ ದಿನಗಳಲ್ಲಿ ಸಿಗಲಿದೆ.

ದೆಹಲಿಯ ಏಮ್ಸ್ ಆಸ್ಪತ್ರೆಯ ವಿಧಿ ವಿಜ್ಞಾನ ತಜ್ಞರು ನಡೆಸಿದ ಪರೀಕ್ಷೆಯ ವರದಿ ಪ್ರಕಾರ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರು ಆತ್ಮಹತ್ಯೆಯಿಂದಲೇ ಸಾವನ್ನಪ್ಪಿದ್ದರೆಂದು ಹೇಳಲಾಗಿದೆ. ಈ ಏಮ್ಸ್ ವರದಿ ಸಿಬಿಐ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಶಾಂತ್ ತಮ್ಮ ಬಾಂದ್ರಾದ ಅಪಾರ್ಟ್​ಮೆಂಟ್​ನಲ್ಲಿ ಕೊಲೆಯಾಗಿದ್ದಕ್ಕೆ ಸಿಬಿಐಗೆ ಯಾವುದೇ ಗಟ್ಟಿ ಪುರಾವೆ ಸಿಕ್ಕಿಲ್ಲ ಎಂದೂ ಮೂಲಗಳು ಹೇಳುತ್ತಿವೆ.

ಇದೇ ಜೂನ್ 14ರಂದು ಸುಶಾಂತ್ ಅವರು ತಮ್ಮ ಅಪಾರ್ಟ್ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು ಕಂಡು ಬಂದಿತ್ತು. ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಮಾನಿಸಿದರು. ನಂತರ ಹಲವು ಪ್ರತಿಭಟನೆಗಳ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಇದೇ ವೇಳೆ, ಜಾರಿ ನಿರ್ದೇಶನಾಲಯ ಮತ್ತು ಮಾದಕವಸ್ತು ನಿಯಂತ್ರಣ ದಳ (ಎನ್​ಸಿಬಿ) ಸಂಸ್ಥೆಗಳೂ ಕೂಡ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದ ಹಣಕಾಸು ಅವ್ಯವಾಹ ಮತ್ತು ಡ್ರಗ್ಸ್ ಮಾಫಿಯಾ ವಿಚಾರವನ್ನು ಕೆದಕಿ ತನಿಖೆ ನಡೆಸುತ್ತಿವೆ.

ಡ್ರಗ್ಸ್ ಪ್ರಕರಣದಲ್ಲಿ ಸೆ. 8ರಂದು ಬಂಧಿತರಾಗಿದ್ದ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅವರು ಕಳೆದ ವಾರ ಬಿಡುಗಡೆಯಾಗಿದ್ದಾರೆ.

Comments are closed.