ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ತಂದೆ ಕೆ.ಕೆ ಸಿಂಗ್ ಅವರು, ರಿಯಾ ವಿರುದ್ಧ ಪಾಟ್ನಾದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ರಿಯಾ ವಿರುದ್ಧ ಎಫ್ಐಆರ್ ಸಹ ಮಾಡಲಾಗಿದೆ.
ಎಫ್ಐಆರ್ ದಾಖಲಾದ ನಂತರ ರಿಯಾ ಎಲ್ಲೂ ಈ ಬಗ್ಗೆ ಮಾತನಾಡಿರಲಿಲ್ಲ. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಪಾಟ್ನಾ ಪೊಲೀಸರು ಮುಂಬೈನಲ್ಲಿರುವ ರಿಯಾ ಅವರ ನಿವಾಸಕ್ಕೆ ಹೋಗಿದ್ದರು. ಆದರೆ ರಿಯಾ ಅಲ್ಲಿ ಅವರಿಗೆ ಸಿಗಲೇ ಇಲ್ಲವಂತೆ. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ರಿಯಾ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ರಿಯಾ, ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಎಫ್ಐಆರ್ ದಾಖಲಾದ ನಂತರ ಇದೇ ಮೊದಲ ಬಾರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ರಿಯಾ ಒಂದು ವಿಡಿಯೋ ಮಾಡಿದ್ದು, ಅದರಲ್ಲಿ ತನಗೆ ದೇವರು ಹಾಗೂ ಈ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನನಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ. ಸತ್ಯಮೇವ ಜಯತೆ ಎಂದು ಹೇಳಿದ್ದಾರೆ.
ಸುಶಾಂತ್ ಅಗಲಿ ಒಂದೂವರೆ ತಿಂಗಳು ಕಳೆದ ನಂತರ ಅವರ ತಂದೆ ಪಾಟ್ನಾದ ರಾಜೀವ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಸುಶಾಂತ್ ಅವರ ವೈದ್ಯಕೀಯ ದಾಖಲೆಗಳನ್ನು ಕಳವು ಮಾಡಿದ, ಬೆದರಿಕೆ ಹಾಕುವುದರ ಜೊತೆಗೆ ಹಲವಾರು ಗಂಭೀರ ಆರೋಪಗಳನ್ನು ರಿಯಾ ವಿರುದ್ಧ ಮಾಡಿದ್ದಾರೆ.
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಬೈ ಪೊಲೀಸರು ರಿಯಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಎಫ್ಐಆರ್ ವಿಷಯ ತಿಳಿಯುತ್ತಿದ್ದಂತೆಯೇ ರಿಯಾ ಅವರನ್ನು ಟ್ರೋಲಿಗರು ಮತ್ತೆ ಟ್ರೋಲ್ ಮಾಡಲಾರಂಭಿಸಿದ್ದರು. ಇದರಿಂದಾಗಿ ರಿಯಾ ತಮ್ಮ ಪೋಸ್ಟ್ಗಳಿಗೆ ಕಮೆಂಟ್ ಮಾಡಲಾಗದಂತೆ ಸೆಟ್ಟಿಂಗ್ ಬದಲಾಯಿಸಿದ್ದರು.
Comments are closed.