ಬೆಂಗಳೂರು: ನಗರದ ತಾವರೆಕೆರೆಯಲ್ಲಿ ಕನ್ನಡ ಚಲನಚಿತ್ರ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.
ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸುದ್ದಗುಂಟೆ ಪಾಳ್ಯದ ಪೊಲೀಸರು ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ವಿಷ ಸೇವಿಸಿದ್ದ ಚಂದನಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ.
ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿರುವ ಚಂದನಾ ಅವರು ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದಾರೆ. ದಿನೇಶ್ ಅವರು ಸದ್ಯ ನಾಪತ್ತೆಯಾಗಿದ್ದಾರೆ.
ಚಂದನಾ-ದಿನೇಶ್ ಇಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಚಂದನಾ ವಾಸವಿದ್ದ ಬೆಂಗಳೂರು ಮನೆಗೆ ದಿನೇಶ್ ಆಗಾಗ ಬರುತ್ತಿದ್ದ. ಮದುವೆ ಪ್ರಸ್ತಾಪ ಬಂದಾಗ ಮಾತ್ರ ದಿನೇಶ್ ಮದುವೆಗೆ ಒಲ್ಲೆ ಎಂದಿದ್ದಾನೆ.
ಚಂದನಾ ಬಳಿ ಲಕ್ಷಾಂತರ ದುಡ್ಡು ಪಡೆದಿದ್ದ ದಿನೇಶ್ ಮದುವೆ ಬಗ್ಗೆ ನಿರಾಕರಿಸುತ್ತಿರುವುದರಿಂದ ಅನುಮಾನ ಬಂದಿದೆ. ಈ ಬಗ್ಗೆ ತಮ್ಮ ಕುಟುಂಬದ ಹತ್ತಿರ ಚಂದನಾ ಹೇಳಿಕೊಂಡಿದ್ದಾರೆ.
ಚಂದನಾ ಅವರ ಕುಟುಂಬಸ್ಥರು ಮದುವೆ ಪ್ರಸ್ತಾಪ ಮುಂದಿಟ್ಟುಕೊಂಡು ದಿನೇಶ್ ಮನೆಗೆ ತೆರಳಿದ್ದಾರೆ. ಆದರೆ, ದಿನೇಶ್ ತಾಯ ಗಾಯತ್ರಿ, ಮಾವ ದಯಾನಂದ ಎಂಬುವರು ಚಂದನಾಳ ನಡವಳಿಕೆ ಸರಿಯಿಲ್ಲ, ನಿಮ್ಮ ಹುಡುಗಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿ ಅವಮಾನ ಮಾಡಿದ್ದಾರೆ.
ಇದರಿಂದ ನೊಂದ ಚಂದನಾ ಈ ಬಗ್ಗೆ ದಿನೇಶ್ ರನ್ನು ಪ್ರಶ್ನಿಸಿದ್ದಾರೆ. ಆದರೆ, ದಿನೇಶ್ ಕೊಟ್ಟ ಉತ್ತರ ಚಂದನಾಗೆ ತೃಪ್ತಿ ತಂದಿಲ್ಲ, ಇನ್ನು ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ತೀವ್ರವಾಗಿ ನೋವಿನಲ್ಲಿ ಕಣ್ಣೀರಿಡುತ್ತಾ ಚಂದನಾ ವಿಷ ಸೇವಿಸಿದ್ದಾರೆ.
ದಿನೇಶ್, ದಿನೇಶ್ ಅಪ್ಪ, ಅಮ್ಮ, ಮಾವ ಹಾಗೂ ಮತ್ತೊಬ್ಬ ಕುಟುಂಬಸ್ಥರು ಸೇರಿದಂತೆ ಐವರ ವಿರುದ್ಧ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿದೆ. ದುಡ್ಡು ಪಡೆದು ವಂಚನೆ, ಮದುವೆಯಾಗುವುದಾಗಿ ನಂಬಿಸಿ ಮೋಸ, ಆತ್ಮಹತ್ಯೆಗೆ ಪ್ರಚೋದನೆ ಎಂಬ ಆರೋಪದ ಮೇಲೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಚಂದನಾ ಅವರ ಮಾವ ಸಂತೋಷ್ ಹೇಳಿದ್ದಾರೆ.
Comments are closed.