ಮನೋರಂಜನೆ

ಕೊರೊನಾದಿಂದ ಗುಣಮುಖರಾದವರ ಸಂದರ್ಶನ ಮಾಡಲು ಹೋದ ನಟ ಕಾರ್ತಿಕ್‌ ಆರ್ಯನ್‌ ಗೆ ವಿಘ್ನ!

Pinterest LinkedIn Tumblr


ನಟ ಕಾರ್ತಿಕ್‌ ಆರ್ಯನ್‌ ಇತ್ತೀಚೆಗೆ ಒಂದು ಒಳ್ಳೆಯ ಕೆಲಸ ಆರಂಭಿಸಿದ್ದರು. ಲಾಕ್‌ಡೌನ್‌ನಿಂದ ಯಾವುದೇ ಶೂಟಿಂಗ್‌, ಡಬ್ಬಿಂಗ್‌, ರಿಹರ್ಸಲ್‌ ಇಲ್ಲದೇ ಇರುವುದರಿಂದ ಅವರು ಮನೆಯಲ್ಲೇ ಕುಳಿತಿದ್ದಾರೆ. ಈ ಸಮಯದಲ್ಲಿ ಕೊರೊನಾ ವೈರಸ್‌ನಿಂದ ಗುಣಮುಖ ಆದವರನ್ನು ಸಂದರ್ಶನ ಮಾಡಲು ಕಾರ್ತಿಕ್‌ ಮುಂದಾಗಿದ್ದಾರೆ.

ಹೌದು, ವಿಡಿಯೋ ಕಾಲಿಂಗ್‌ ಆ್ಯಪ್‌ ಮೂಲಕ ಈಗಾಗಲೇ ಸಂದರ್ಶನವನ್ನು ಕಾರ್ತಿಕ್‌ ಶುರುಮಾಡಿದ್ದಾರೆ. ಅದರ ಮೊದಲ ಎಪಿಸೋಡ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಈ ನಡುವೆ ಅವರಿಗೊಂದು ವಿಘ್ನ ಎದುರಾಗಿದೆ. ರೆಕಾರ್ಡ್‌ ಮಾಡಿಕೊಂಡಿರುವ ವಿಡಿಯೋ ಕಾಲ್‌ ದೃಶ್ಯಗಳನ್ನು ಎಡಿಟ್‌ ಮಾಡುವಲ್ಲಿ ಅವರಿಗೆ ತುಂಬ ತಾಂತ್ರಿಕ ಅಡಚಣೆ ಉಂಟಾಗಿದೆ.

ಇದರಿಂದ ನಿರಾಸೆಗೊಂಡಿರುವ ಕಾರ್ತಿಕ್‌ ಆರ್ಯನ್‌ ಇನ್ಸ್‌ಟಾಗ್ರಾಮ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ. ‘ವರ್ಕ್‌ ಫ್ರಮ್‌ ಹೋಮ್‌ ಅಂತಾರಲ್ಲಾ. ಎರಡನೇ ಎಪಿಸೋಡ್‌ ಇನ್ನೂ ರೆಂಡರಿಂಗ್‌ ಆಗುತ್ತಿದೆ’ ಎಂದು ಅಳುವ ಎಮೋಜಿಗಳೊಂದಿಗೆ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಒಂದು ವೇಳೆ ತನ್ನ ಕಾಮೆಂಟ್‌ಗೆ ಪ್ರತಿಕ್ರಿಯಿಸಿದರೆ ಒಂದು ಲಕ್ಷ ರೂ. ಕೊಡುವುದಾಗಿಯೂ ಒಬ್ಬ ಅಭಿಮಾನಿ ಆಮಿಷ ಒಡ್ಡಿದ್ದಾನೆ! ಅದಕ್ಕೆ ಅಷ್ಟೇ ತಮಾಷೆಯಾಗಿ ಉತ್ತರ ನೀಡಿರುವ ಕಾರ್ತಿಕ್‌ ಆರ್ಯನ್‌ ಅವರು, ‘ನನಗೆ ಈ ರೆಂಡರಿಂಗ್‌ ಸಮಸ್ಯೆ ಪರಿಹರಿಸಿಕೊಟ್ಟರೆ ನಿಮಗೆ ಎರಡು ಲಕ್ಷ ರೂ. ಕೊಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ, ಸೋಶಿಯಲ್‌ ಮೀಡಿಯಾದಲ್ಲಿ ಕಾರ್ತಿಕ್‌ ಆರ್ಯನ್‌ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಹಾಗಾಗಿ ಅಭಿಮಾನಿಗಳು ಅವರ ಜೊತೆ ಯಾವಾಗಲೂ ಸಂಪರ್ಕದಲ್ಲಿ ಇರುತ್ತಾರೆ. ಕೆಲವೇ ದಿನಗಳ ಹಿಂದೆ ‘ನನ್ನನ್ನು ಮದುವೆಯಾದರೆ ಒಂದು ಕೋಟಿ ರೂ. ನೀಡುತ್ತೇನೆ’ ಎಂಬುದಾಗಿ ಮಹಿಳಾಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು.

Comments are closed.