ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟನೆಯ ‘ಜೀರೋ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತ್ತು. ಶಾರುಖ್ ಹೀರೋಯಿಸಂ ಬಿಟ್ಟು ಭಿನ್ನ ಅವತಾರ ತಾಳಿದ್ದು ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ. ‘ಜೀರೋ’ ತೆರೆಕಂಡು ವರ್ಷವಾದರೂ ಶಾರುಖ್ ಮುಂದಿನ ಸಿನಿಮಾ ಘೋಷಿಸಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಚ್ಚರಿಯ ವಿಚಾರ ಎಂದರೆ, ಮುಂದಿನ ಸಿನಿಮಾ ಘೋಷಿಸದ ಕಾರಣ ಶಾರುಖ್ ಅಭಿಮಾನಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ!
2013ರಲ್ಲಿ ತೆರೆಕಂಡ ‘ಚೆನ್ನೈ ಎಕ್ಸ್ಪ್ರೆಸ್’ ಚಿತ್ರವೇ ಕೊನೆ. ನಂತರ ಶಾರುಖ್ ತಮ್ಮ ಮೂಲ ಚಾರ್ಮ್ ಕಳೆದುಕೊಳ್ಳಲು ಆರಂಭಿಸಿದ್ದರು. ಸೋಲು ಅವರ ಬೆನ್ನು ಬಿದ್ದಿತ್ತು. ‘ಹ್ಯಾಪಿ ನ್ಯೂ ಇಯರ್’ ಚಿತ್ರ ಕಮಾಯಿ ಮಾಡಿತ್ತಾದರೂ, ವಿಮರ್ಷೆಯಲ್ಲಿ ಸೋತಿತ್ತು. ಇನ್ನು, ‘ಡಿಯರ್ ಜಿಂದಗಿ ಚಿತ್ರವನ್ನು ಜನ ಮೆಚ್ಚಿಕೊಂಡರಾದರೂ ಅದರಲ್ಲಿ ಹೈಲೈಟ್ ಆಗಿದ್ದು, ನಟಿ ಆಲಿಯಾ ಭಟ್. ಇನ್ನು, ಶಾರುಖ್ ಅಭಿನಯದ ‘ಫ್ಯಾನ್’ ಚಿತ್ರವಂತೂ ಹೇಳ ಹೆಸರಿಲ್ಲದೆ ನೆಲಕಚ್ಚಿತ್ತು. ‘ರಾಯೀಸ್’, ‘ಜಬ್ ಹ್ಯಾರಿ ಮೆಟ್ ಸೇಜಲ್’ ಸಾಮಾನ್ಯ ಸಿನಿಮಾ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡಿತು.
ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ ‘ಜೀರೋ’ ಚಿತ್ರದ ಮೂಲಕ ಶಾರುಖ್ಗೆ ಮತ್ತೆ ಸೋಲಾಗಿತ್ತು. ಈ ಮಧ್ಯೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ಶಾರುಖ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಹೀಗಾಗಿ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ನವೆಂಬರ್ 2 ಶಾರುಖ್ ಜನ್ಮದಿನ. ಅಂದು ಅವರ ಮುಂದಿನ ಸಿನಿಮಾ ಕುರಿತು ಘೋಷಣೆ ಆಗಲಿದೆ ಎನ್ನಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಹೀಗಾಗಿ #WeWantAnnouncementSRK ಎನ್ನುವ ಹ್ಯಾಶ್ಟ್ಯಾಗ್ ಒಂದಿಗೆ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಯೋರ್ವ ‘ಶಾರುಖ್ ಖಾನ್ ಜನವರಿ 1ರಂದು ಹೊಸ ಸಿನಿಮಾ ಘೋಷಿಸಲಿ. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.
ಅಟ್ಲಿ ಈಗಾಗಲೇ, ‘ರಾಜ ರಾಣಿ’, ‘ತೇರಿ’, ‘ಮರ್ಸೆಲ್’, ‘ಬಿಗಿಲ್’ ನಂಥ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈಗ ಅಟ್ಲಿ ವಿಶೇಷ ಕಥೆಯೊಂದನ್ನು ಶಾರುಖ್ಗಾಗಿ ಸಿದ್ಧಪಡಿಸಿದ್ದಾರೆ. ಈ ಕಥೆಯನ್ನು ಶಾರುಖ್ ಕೇಳಿ ಇಷ್ಟಪಟ್ಟಿದ್ದಾರಂತೆ. ಶಾರುಖ್ಗೆ ಕಂಬ್ಯಾಕ್ ಮಾಡಲು ಈ ಸಿನಿಮಾ ಹೇಳಿ ಮಾಡಿಸಿದಂತಿರಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಿಲ್ಲ ಎನ್ನುವುದು ಫ್ಯಾನ್ಸ್ಗೆ ಬೇಸರ ತರಿಸಿದೆ.
Comments are closed.