ಮನೋರಂಜನೆ

ರವಿಚಂದ್ರನ್‌ ನಟನೆಯ ಆ ದೃಶ್ಯ ಚಿತ್ರ ವಿಮರ್ಶೆ

Pinterest LinkedIn Tumblr


ರವಿಚಂದ್ರನ್‌ ಸಿನಿಮಾಗಳೆಂದರೆ ಕಲರ್‌ಫುಲ್‌ ಸೆಟ್‌, ಸುಂದರ ನಾಯಕಿ, ಕಿವಿಗೆ ಇಂಪು ನೀಡುವ ಹಾಡುಗಳು ಇರುತ್ತಿದ್ದವು. ಆದರೆ ಈ ಸೂತ್ರವನ್ನು ದೃಶ್ಯ ಸಿನಿಮಾದ ಮೂಲಕ ಅವರೇ ಮುರಿದಿದ್ದರು. ಈಗ ‘ಆ ದೃಶ್ಯ’ದಲ್ಲಿಯೂ ಅವರು ಮತ್ತೊಂದು ಮರ್ಡರ್‌ ಮಿಸ್ಟರಿ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ನಡೆಯುವ ಕೊಲೆ, ರಸ್ತೆಯಲ್ಲೊಂದು ಆ್ಯಕ್ಸಿಡೆಂಟ್‌, ಹುಡುಗಿಯೊಬ್ಬಳ ಮಿಸ್ಸಿಂಗ್‌ ಇವಿಷ್ಟನ್ನು ನಾಯಕ ನಟ ಸೂರ್ಯ ತೇಜ್‌ (ರವಿಚಂದ್ರನ್‌) ಬುದ್ಧಿವಂತಿಕೆಯಿಂದ ಬೇಧಿಸುವ ಕಥೆಯೇ ಆ ದೃಶ್ಯ.

ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳಿಗೆ ಅದರ ಕಥೆಯಲ್ಲಿ ಬರುವ ಟ್ವಿಸ್ಟ್‌ ಮತ್ತು ಸಸ್ಪೆನ್ಸ್‌ಗಳೇ ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುತ್ತವೆ. ಆ ದೃಶ್ಯದಲ್ಲಿಯೂ ಅಂತಹವುಗಳು ಬಹಳಷ್ಟಿದೆ. ರಿಮೇಕ್‌ ಸಿನಿಮಾವಾದರೂ ನಿರ್ದೇಶಕ ಶಿವಗಣೇಶನ್‌ ಅದನ್ನು ಬಹಳ ಎಚ್ಚರಿಕೆಯಿಂದ ಕನ್ನಡೀಕರಣಗೊಳಿಸಿದ್ದಾರೆ. ಸಿನಿಮಾದ ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ರಾಮಾಯಣವನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡಿದರೆ ಹೇಗೆ ಎಂಬ ಅಂಶ ಸಿನಿಮಾವನ್ನು ರೋಚಕಗೊಳಿಸಿದೆ.

ಈ ಸಿನಿಮಾದಲ್ಲಿ ಕಥೆ, ಕಲಾವಿದರು, ಸಿನಿಮಾಟೋಗ್ರಫಿ, ಸಂಭಾಷಣೆ ಎಲ್ಲವೂ ದೃಶ್ಯವಾಗಿರುವುದರಿಂದ ನೋಡುಗನಿಗೆ ಥ್ರಿಲ್‌ ನೀಡುತ್ತದೆ. ಸಿನಿಮಾದಲ್ಲಿ ಒಂದಿಬ್ಬರನ್ನು ಬಿಟ್ಟರೆ ಬೇರೆ ಎಲ್ಲರೂ ಹೊಸಬರೇ ಆದರೆ ಪ್ರತಿಯೊಬ್ಬರು ನುರಿತ ಕಲಾವಿದರಂತೆ ಕಾಣಿಸುತ್ತಾರೆ.

ದೃಶ್ಯ ಸಿನಿಮಾದಲ್ಲಿ ಮಗಳಿಗಾಗಿ ಹೋರಾಡುವ ಮಧ್ಯಮ ವರ್ಗದ ತಂದೆಯಾಗಿ ಅವರ ನಟನೆ ಮನೋಜ್ಞವಾಗಿತ್ತು. ಆದರೆ ಇಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಮಿಂಚಿರುವ ರವಿಚಂದ್ರನ್‌ ಅವರ ನಟನೆಯಲ್ಲಿ ಏನೋ ಮಿಸ್‌ ಆದಂತೆ ಅನ್ನಿಸುತ್ತದೆ. ಸಹಜ ನಟ ಯಶ್‌ ಶೆಟ್ಟಿಯ ಪಾತ್ರ ಸಿನಿಮಾದ ಮೇಜರ್‌ ಟ್ವಿಸ್ಟ್‌ಗಳಲ್ಲಿ ಒಂದು. ಅದನ್ನು ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಈಗಿನ ಯುವಕರನ್ನು ಪ್ರತಿನಿಧಿಸುವ ಪಾತ್ರದಲ್ಲಿ ಸಾಗರ್‌, ಅರ್ಜುನ್‌, ರಕ್ಷಿತ್‌ ನಟನೆ ಗಮನ ಸೆಳೆಯುತ್ತದೆ. ಅಜಿತ್‌ ಜಯರಾಜ್‌ , ಅಚ್ಯುತ್‌ ಕುಮಾರ್‌, ಚೇತನ್‌ ಸೇರಿ ಎಲ್ಲ ಕಲಾವಿದರು ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದೆಲ್ಲದರ ಜತಗೆ ಸಿನಿಮಾ ಎರಡು ಗಂಟೆಗಳ ಕಾಲ ಪ್ರೇಕ್ಷಕನನ್ನು ಎಂಗೇಜ್‌ ಮಾಡಿಕೊಳ್ಳುತ್ತದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವವರು ಮತ್ತು ರವಿಚಂದ್ರನ್‌ ಅಭಿಮಾನಿಗಳಿಗೆ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ.

Comments are closed.