ಮುಂಬೈ: ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಸಮನ್ಸ್ ಜಾರಿ ಮಾಡಿದ್ದು, ನವೆಂಬರ್ 4ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಇಕ್ಬಾಲ್ ಮಿರ್ಚಿಯ ಆರ್ಥಿಕ ಅವ್ಯವಹಾರದ ಜೊತೆಗೆ ಸಂಬಂಧ ಹೊಂದಿರುವ ಸೆಲೆಬ್ರಿಟಿಗಳಿಗೆ ಇಡಿ ಬಿಸಿ ಮುಟ್ಟಿಸುತ್ತಿದೆ. ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ವಿಚಾರಣೆ ಬೆನ್ನಲ್ಲೇ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಮುಂಬೈನ ಇಡಿ ಕಚೇರಿಯಲ್ಲಿ ನವೆಂಬರ್ 4ರಂದು ರಾಜ್ ಕುಂದ್ರಾ ವಿಚಾರಣೆ ಎದುರಿಸಲಿದ್ದಾರೆ. ಇಕ್ಬಾಲ್ ಮಿರ್ಚಿಗಾಗಿ ಕೆಲಸ ಮಾಡುತ್ತಿದ್ದ ಆರೋಪಿಯೊಬ್ಬನ ಜೊತೆಗೆ ರಾಜ್ ಕುಂದ್ರಾ ವ್ಯವಹಾರ ಬೆಳೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ.
ಇಕ್ಬಾಲ್ ಮಿರ್ಚಿ ದಾವೂದ್ ಇಬ್ರಾಹಿಂ ಬಲಗೈ ಬಂಟರ ಪೈಕಿ ಒಬ್ಬನಾಗಿದ್ದ. ಮುಂಬೈನ ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಜೊತೆಗೆ ಮಾದಕ ದವ್ಯ ಸಾಗಾಣಿಕೆ, ಬೆದರಿಕೆ, ಆಸ್ತಿ ಕಬಳಿಕೆ ಸೇರಿದಂತೆ ಅನೇಕ ಅವ್ಯವಹಾರಗಳನ್ನು ಇಕ್ಬಾಲ್ ಮಿರ್ಚಿ ನೋಡಿಕೊಳ್ಳುತ್ತಿದ್ದ. ಲಂಡನ್ನಲ್ಲಿದ್ದ ಇಕ್ಬಾಲ್ ಮಿರ್ಚಿ ಹೃದಯಾಘಾತದಿಂದ 2013ರಲ್ಲಿ ಮೃತಪಟ್ಟಿದ್ದ.
ಈ ಹಿಂದೆ ರಾಜ್ ಕುಂದ್ರಾ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿದ್ದವು. ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ರಾಜ್ ಕುಂದ್ರಾ ಅವರಿಗೆ ಇಡಿ ಸಮನ್ಸ್ ಕಳೆದ ವರ್ಷ ಜೂನ್ನಲ್ಲಿ ಸಮನ್ಸ್ ಜಾರಿಗೊಳಿಸಿತ್ತು. ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟಿರುವ ರಾಜ್ ಕುಂದ್ರಾಗೆ ಕ್ರಿಕೆಟ್ ಸಂಬಂಧಿಸಿದ ಚಟುವಟಿಕೆಗಳಿಂದ ಅಜೀವ ನಿಷೇಧ ಹೇರಲಾಗಿದೆ.
Comments are closed.